ಫ್ರೀಲ್ಯಾನ್ಸ್ ಪತ್ರಕರ್ತೆ ಆತ್ಮಹತ್ಯೆ, ಎಸ್ಪಿ ಮುಖಂಡ ಬಂಧನ
ವಾರಣಾಸಿ, ಮೇ 5: 28 ವರ್ಷ ವಯಸ್ಸಿನ ಹವ್ಯಾಸಿ ಪತ್ರಕರ್ತೆ ರಿಜ್ವಾನಾ ತಬಸ್ಸುಮ್ ನೇಣಿಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಸಮಾಜವಾದಿ ಪಕ್ಷದ ಮುಖಂಡ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ರಿಜ್ವಾನಾ ಶರಣಾಗಿದ್ದಾರೆ.
ರಿಜ್ವಾನಾ ಶವದ ಬಳಿ ಸಿಕ್ಕ ಸೂಸೈಡ್ ನೋಟ್ ಆಧಾರದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಶಮೀಮ್ ನೊಮಾನಿರನ್ನು ಪೊಲೀಸರು ಬಂಧಿಸಲಾಗಿದೆ.
ವಾರಣಾಸಿ ಜಿಲ್ಲೆಯ ಹರ್ಪಲ್ಪುರದಲ್ಲಿ ಸೋಮವಾರದಂದು ತಬಸ್ಸುಮ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ನನ್ನ ಸಾವಿಗೆ ಶಮೀಮ್ ನೊಮಾನಿ ಕಾರಣ ಎಂದು ಡೆತ್ ನೋಟ್ ಬರೆದಿರುವ ಪತ್ರ ಸಿಕ್ಕಿದೆ.
ಪ್ರಾಥಮಿಕ ತನಿಖೆ ಬಳಿಕ ಶಮೀಮ್ ಬಂಧಿಸಿ ವಿಚಾರಣೆ ನಡೆಸಲಾಗಿದೆ. ರಿಜ್ವಾನಾ ಅವರ ಮರಣೋತ್ತರ ವರದಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ದೃಢಪಟ್ಟಿದೆ. ಆತ್ಮಹತ್ಯೆಗೆ ಶಮೀಮ್ ಹೇಗೆ ಕಾರಣರಾದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ತಬಸ್ಸುಮ್ ಅವರ ತಂದೆಯ ದೂರಿನ ಮೇರೆಗೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಮೀಮ್ ನೊಮಾನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾರಣಾಸಿಯ ಸದರ್ ಸಿಒ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.
ಶಮೀಮ್ ಹಾಗೂ ರಿಜ್ವಾನಾ ಇಬ್ಬರಲ್ಲೂ ಗೆಳೆತನವಿತ್ತು ಎಂದು ತಿಳಿದು ಬಂದಿದೆ. ತನಗೆ ಯಾರು ಮಿತ್ರರು ಯಾರು ಶತ್ರುಗಳು ಎಂಬುದರ ಬಗ್ಗೆ ಕುಟುಂಬದವರ ಬಗ್ಗೆ ಯಾವತ್ತಿಗೂ ಚರ್ಚಿಸಿಲ್ಲ.ಒಳ್ಳೆ ಪತ್ರಕರ್ತೆ ಎಂದು ಹೆಸರು ಗಳಿಸಿದ್ದಳು, ಸೋಮವಾರದಂದು ರೂಮಿಗೆ ಹೋದವಳು ಊಟಕ್ಕೂ ಬರದಿದ್ದಾಗ ಬಾಗಿಲು ಬಡಿದು ಒಳಹೊಕ್ಕಿ ನೋಡಿದರೆ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿತು ಎಂದು ರಿಜ್ವಾನಾ ತಂದೆ ಹೇಳಿದ್ದಾರೆ. ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದುಕೊಂಡಿದ್ದ ರಿಜ್ವಾನಾ ಅವರು ಹಲವು ವೆಬ್ ಪೋರ್ಟಲ್, ಪಬ್ಲಿಕೇಷನ್ ಗಳಿಗೆ ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.