ಪೌರತ್ವ ಪ್ರತಿಭಟನೆ: ಅಲಿಗಢ ವಿ.ವಿ. ತೊರೆಯಲು ವಿದ್ಯಾರ್ಥಿಗಳಿಗೆ ಪೊಲೀಸರ ಸೂಚನೆ
ಲಕ್ನೋ, ಡಿಸೆಂಬರ್ 16: ಉತ್ತರ ಪ್ರದೇಶದಲ್ಲಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಇಂದು ಸಂಪೂರ್ಣ ಖಾಲಿಗೊಳಿಸಲಿದ್ದು, ವಿದ್ಯಾರ್ಥಿಗಳನ್ನು ಮನೆಗೆ ಕಳಿಸುತ್ತೇವೆ ಎಂದು ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಭಾನುವಾರ ಘರ್ಷಣೆ ನಡೆದಿತ್ತು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಖಂಡಿಸಿ ಅಲಿಗಢ ವಿ.ವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ವಿದ್ಯಾರ್ಥಿಗಳ ಬಂಧನ, ಬಿಡುಗಡೆ
ಪೊಲೀಸರು ಈ ಪ್ರತಿಭಟನೆಗಳ ವೇಳೆ ಸಂಯಮದಿಂದ ವರ್ತಿಸಿದ್ದು, ಪೊಲೀಸರು ಧ್ವಂಸ ಕೃತ್ಯ ಎಸಗಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಜಾಮಿಯಾ ವಿವಿ ವಿದ್ಯಾರ್ಥಿಗಳ ಪರವಾಗಿ ಎಎಂಯು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.
ವಿ.ವಿಯನ್ನು ಖಾಲಿ ಮಾಡುತ್ತಿದ್ದೇವೆ
'ನಾವು ಇಂದು ಎಎಂಯುವನ್ನು ಖಾಲಿ ಮಾಡುತ್ತಿದ್ದೇವೆ. ಎಲ್ಲ ವಿದ್ಯಾರ್ಥಿಗಳನ್ನೂ ಮನೆಗೆ ಕಳುಹಿಸುತ್ತಿದ್ದೇವೆ' ಎಂದು ಪೊಲೀಸ್ ಮಹಾನಿರ್ದೇಶಕ ಓಪಿ ಸಿಂಗ್ ತಿಳಿಸಿದರು.
'ಪೊಲೀಸರು ದಾಂದಲೆ ನಡೆಸಿದ ಯಾವುದೇ ವರದಿ ನಮಗೆ ಬಂದಿಲ್ಲ. ಪ್ರತಿಭಟನೆ ವೇಳೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಸುಮಾರು 15 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರನ್ನೂ ಗುರುತಿಸಿ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.
ಹಾಸ್ಟೆಲ್ ತೆರವುಗೊಳಿಸಲು ಆಗ್ರಹ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದರಿಂದ ಮೂವರು ಪೊಲೀಸರು ಗಾಯಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಹತ್ತು ಪೊಲೀಸರು ಮತ್ತು 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹಾಸ್ಟೆಲ್ ತೆರವುಗೊಳಿಸುವಂತೆ ಪೊಲೀಸರು ವಿದ್ಯಾರ್ಥಿಗಳಿಗೆ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಪೌರತ್ವ ಕಾಯ್ದೆಯ ಬೆಂಕಿಗೆ ಹೊತ್ತಿ ಉರಿದ ಬಸ್
ಮಧ್ಯರಾತ್ರಿಯೇ ಪೊಲೀಸರ ಪ್ರವೇಶ
ಭಾನುವಾರ ಮಧ್ಯರಾತ್ರಿ ಎಎಂಯು ಆವರಣದೊಳಗೆ ಗಲಭೆ ನಿಯಂತ್ರಣ ವಾಹನಗಳು ಪ್ರವೇಶಿಸಿದ್ದವು. ಕೆಲವೇ ನಿಮಿಷಗಳಲ್ಲಿ ನಗರದೆಲ್ಲೆಡೆ ಪ್ರತಿಭಟನೆಯನ್ನು ಹತ್ತಿಕ್ಕಲು ಅಂತರ್ಜಾಲ ಸಂಪರ್ಕವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಪ್ರವೇಶ ಮಾಡುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಮನವಿ ಮಾಡಿದ ಬಳಿಕ ಪೊಲೀಸರು ಅಲ್ಲಿಗೆ ತೆರಳಿದರು ಎನ್ನಲಾಗಿದೆ.
ಕೈಮೀರುವಾಗ ಪ್ರತಿಕ್ರಿಯಿಸಿದೆವು
'ನಾವು ಬಹಳ ತಾಳ್ಮೆಯಿಂದ ವರ್ತಿಸಿದ್ದೇವೆ ಮತ್ತು ಯಾವುದೇ ವಿದ್ಯಾರ್ಥಿನಿಲಯವನ್ನು ಕೂಡ ಪ್ರವೇಶಿಸಿಲ್ಲ. ಎಎಂಯುದ ಉಪ ಕುಲಪತಿಗಳ ಒತ್ತಾಯದ ಮೇರೆಗೆ ನಾವು ಆವರಣದೊಳಗೆ ಬಂದಿದ್ದೇವೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತದೆ ಎಂಬ ಸಂದರ್ಭ ಬರುವವರೆಗೂ ನಾವು ಪ್ರತಿಭಟನೆಯನ್ನು ನೋಡುತ್ತಿದ್ದೆವಷ್ಟೇ ಹೊರತು ವಿದ್ಯಾರ್ಥಿಗಳನ್ನು ತಡೆಯಲು ಹೋಗಿರಲಿಲ್ಲ' ಎಂದು ಓಪಿ ಸಿಂಗ್ ತಿಳಿಸಿದರು.