ಮಾಯಾವತಿ ಕಡೆ ಮೋದಿಯ ಮಮತೆ: ಚುನಾವಣೋತ್ತರ ಮೈತ್ರಿಯ ಸಂಕೇತ?
ಹದಿನೇಳನೇ ಲೋಕಸಭೆಗೆ ಸದ್ಯ ಐದನೇ ಹಂತದ ಮತದಾನ (ಮೇ 6) ನಡೆಯುತ್ತಿದೆ. ಏಳು ರಾಜ್ಯಗಳ 51ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ, ಇದರಲ್ಲಿ ಉತ್ತರಪ್ರದೇಶದ ಹದಿನಾಲ್ಕು ಕ್ಷೇತ್ರಗಳೂ ಸೇರಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜಕೀಯ ದಾಳವನ್ನು ಹೇಗೆ ಬೇಕಾದರೂ ಉರುಳಿಸಬಹುದು ಎನ್ನುವುದಕ್ಕೆ ಉತ್ತರಪ್ರದೇಶದಲ್ಲಿ ಇದುವರೆಗಿನ ಪ್ರಧಾನಿ ಮೋದಿಯ ಭಾಷಣ, ನಾಲ್ಕನೇ ಹಂತದ ಚುನಾವಣೆ ಮುಗಿದ ಮೇಲೆ ಬಿಜೆಪಿಯ ಬದಲಾದ ತಂತ್ರಗಾರಿಕೆಯೇ ಇದಕ್ಕೆ ಉದಾಹರಣೆ.
ಪ್ರಚಾರದ ಕೊನೇ ದಿನ ರಾಹುಲ್ ನಾಡಿನಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ
ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಪ್ರಭಾವ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಮೋದಿ, ತಮ್ಮ ಸಾರ್ವಜನಿಕ ಭಾಷಣದಲ್ಲಿ ಮಾಯಾವತಿ ಎಂದು ಸಂಭೋದಿಸುತ್ತಿದ್ದವರು, ಈಗ 'ಬೆಹನ್ ಜೀ' ಅನ್ನಲಾರಂಭಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಇದಕ್ಕೆ ವಿಶಿಷ್ಟ ಅರ್ಥ ಕಲ್ಪಿಸಲಾಗುತ್ತಿದೆ.
ಮೋದಿ ಹುಟ್ಟಿನಿಂದ ಹಿಂದುಳಿದ ವರ್ಗದವರಲ್ಲ: ಮಾಯಾವತಿ
ಉತ್ತರಪ್ರದೇಶದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆಂದು ಅಖಿಲೇಶ್, ಮಾಯಾವತಿ ಹೇಳಿಕೆ ನೀಡಿದ್ದರೂ, ಮೋದಿಯ ಈ ನಡೆಯ ಹಿಂದೆ, ಮುಂದಿನ ದಿನಗಳಲ್ಲಿ ಮೈತ್ರಿಯ ಅಸ್ತಿತ್ವದ ಬಗ್ಗೆ ಮತದಾರರನ್ನು ಜಾಗೃತ ಮೂಡಿಸುವ ಕೆಲಸಕ್ಕೆ ಮೋದಿ ಕೈಹಾಕಿರುವುದು ಎಂದೇ ಹೇಳಲಾಗುತ್ತಿದೆ.
ಬಿಎಸ್ಪಿ ಮತದಾರರನ್ನು ದಿಕ್ಕುತಪ್ಪಿಸಲಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಪ್ರಮುಖವಾಗಿ ಮೂರನೇ ಹಂತದ ಚುನಾವಣೆ ಮುಗಿಯುವವರೆಗೆ ಮಾಯಾವತಿ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದ ಮೋದಿ, ನಂತರ ದಿನಗಳಲ್ಲಿ ಮೃದು ಧೋರಣೆ ತಾಳಿದ್ದಾರೆ ಎನ್ನುವುದು ಅತ್ಯಂತ ಸ್ಪಷ್ಟ. ಬಹುಜನ ಸಮಾಜಪಕ್ಷ ಮತ್ತು ಸಮಾಜವಾದಿ ಪಕ್ಷ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೂ, ಕಾಂಗ್ರೆಸ್ ಪಕ್ಷವನ್ನು ಒಬ್ಬರು ಟೀಕಿಸುತ್ತಾರೆ, ಇನ್ನೊಬ್ಬರು ಆಲಂಗಿಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ತಂತ್ರಗಾರಿಕೆ ಎಂದು ಮೋದಿ ಹೇಳುತ್ತಿರುವುದು, ಬಿಎಸ್ಪಿ ಮತದಾರರನ್ನು ದಿಕ್ಕುತಪ್ಪಿಸಲಾ ಅಥವಾ ಚುನಾವಣೋತ್ತರ ಮೈತ್ರಿಯ ಸಂಕೇತವಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಅಖಿಲೇಶ್ ಯಾದವ್, ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ
ಮಾಯಾವತಿ ಒಂದು ಕಡೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಅಖಿಲೇಶ್ ಯಾದವ್, ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಅಂತಿಮವಾಗುವ ಮುನ್ನ, ಕಾಂಗ್ರೆಸ್ ಕೂಡಾ ಆ ಎರಡು ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸರ್ವಪ್ರಯತ್ನ ಮಾಡಿದ್ದು ಗೊತ್ತೇ ಇದೆ. ಇದರ ಮುಂದಿನ ಭಾಗವಾಗಿ ಬಿಎಸ್ಪಿ, ಕಾಂಗ್ರೆಸ್ ವಿರುದ್ದ ಟೀಕೆ ಮಾಡುತ್ತಿದ್ದರೆ, ಎಸ್ಪಿ ಅದರ ವಿರುದ್ದವಾಗಿ ನಡೆಯುತ್ತಿದೆ. ಇದನ್ನೇ ಈಗ ಮೋದಿ, ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಮೋದಿ, ಮಾಯಾವತಿ ಪರ ಹೇಳಿಕೆ ಬಿಎಸ್ಪಿ ವಲಯದಲ್ಲಿ ಸಂಚಲನ
ಮೈತ್ರಿಯ ಹೆಸರಿನಲ್ಲಿ ಸಮಾಜವಾದಿ ಪಕ್ಷ, ಮಾಯಾವತಿಯವರನ್ನು ಕತ್ತಲಲ್ಲಿ ದೂಡುತ್ತಿದೆ. ಅವರಿಗೆ ಪ್ರಧಾನಮಂತ್ರಿ ಪದವಿಯ ಆಸೆಯನ್ನು ತೋರಿಸಿ, ತಾನು ಲಾಭ ಮಾಡಿಕೊಳ್ಳುತ್ತಿದೆ, ಇದನ್ನು ಬೆಹನ್ ಜೀ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ಸಿನ ಸಭೆಯಲ್ಲಿ ಎಸ್ಪಿ ಮುಖಂಡರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದೆಂತಹ ಮೈತ್ರಿಧರ್ಮ ಎಂದು ಮೋದಿ, ಮಾಯಾವತಿ ಪರ ಹೇಳಿಕೆಯನ್ನು ನೀಡಿರುವುದು, ಬಿಎಸ್ಪಿ ವಲಯದಲ್ಲಿ ಸಂಚಲನ ಮೂಡಿಸಿದೆ.
ಎಸ್ಪಿ-ಬಿಎಸ್ಪಿ ನಡುವೆ ಭಿನ್ನಮತ ತರುವುದು ಅವರ ಉದ್ದೇಶ, ನಮ್ಮ ಮೈತ್ರಿ ಶಾಶ್ವತವಾಗಿರಲಿದೆ
ಮೋದಿಯ ಹೇಳಿಕೆಯನ್ನು ಕೂಡಲೇ ಅರ್ಥ ಮಾಡಿಕೊಂಡಿರುವ ಮಾಯಾವತಿ, ಮೋದಿಯವರದ್ದು ಒಡೆದು ಆಳುವ ನೀತಿ. ಎಸ್ಪಿ-ಬಿಎಸ್ಪಿ ನಡುವೆ ಭಿನ್ನಮತ ತರುವುದು ಅವರ ಉದ್ದೇಶ, ಆದರೆ ನಮ್ಮ ಮೈತ್ರಿ ಶಾಶ್ವತವಾಗಿ ಉಳಿಯಲಿದೆ. ಅಮೆರಿಕಾದ ಅಧ್ಯಕ್ಷರ ಹೇಳಿಕೆಯಂತೆ, ಮೋದಿ ದಾರಿತಪ್ಪಿಸುವ ಹೇಳಿಕೆಯನ್ನೇ ನೀಡುತ್ತಿದ್ದಾರೆಂದು ಮಾಯಾವತಿ, ಮೋದಿಗೆ ತಿರುಗೇಟು ನೀಡಿದ್ದಾರೆ.
ಇನ್ನೂ ಉತ್ತರಪ್ರದೇಶದ ಅರ್ದಕ್ಕಿಂತ ಹೆಚ್ಚು ಕ್ಷೇತ್ರದ ಚುನಾವಣೆ ನಡೆಯಬೇಕಿದೆ
ಐದು, ಆರು ಮತ್ತು ಏಳನೇ ಹಂತದಲ್ಲಿ ಇನ್ನೂ ಉತ್ತರಪ್ರದೇಶದ ಅರ್ಧಕ್ಕಿಂತ ಹೆಚ್ಚು ಕ್ಷೇತ್ರದ ಚುನಾವಣೆ ನಡೆಯಬೇಕಿದೆ. ಹಾಗಾಗಿ, ಮೋದಿಯ ಮಾಯಾವತಿ ಪರ ಒಲವಿನ ಹೇಳಿಕೆ, ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭ ತರಲಿದೆ ಎನ್ನುವುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಮುಂದಿನ ದಿನಗಳಲ್ಲಿ, ಎಸ್ಪಿ-ಬಿಎಸ್ಪಿ ಮೈತ್ರಿಯ ಅಸ್ತಿತ್ವದ ಬಗ್ಗೆ ಮೋದಿ ಮಾತನಾಡಿರುವುದು ಪಕ್ಕಾ ರಾಜಕೀಯ ತಂತ್ರಗಾರಿಕೆ ಎಂದೇ ಹೇಳಲಾಗುತ್ತಿದೆ ಅಥವಾ ಚುನಾವಣೋತ್ತರ ಮೈತ್ರಿಯ ಮುನ್ಸೂಚನೆಯೇ?