ಚುನಾವಣೆಗಾಗಿಯೇ ಹುಟ್ಟಿದ್ದ ಪ್ರನಾಳ ಶಿಶುವಿನ ಕಥೆ, ಫಲಿತಾಂಶದ ನಂತರ ದುರಂತ ಅಂತ್ಯ!
ಬಹುಜನ ಸಮಾಜಪಕ್ಷ, ಸಮಾಜವಾದಿ ಪಕ್ಷದ ಜೊತೆ ಮದುವೆಯಾಗುವುದು ಆಮೇಲೆ ವಿಚ್ಛೇದನವಾಗುವುದು ಹೊಸದೇನಲ್ಲ. ಅಂದು ತನ್ನ ರಾಜಕೀಯ ಗುರು ಕಾನ್ಶೀರಾಂ, ಮುಲಾಯಂ ಸಿಂಗ್ ಯಾದವ್ ಗೆ ಮಾಡಿದ್ದನ್ನು, ಇಂದು ಮಾಯಾವತಿ ಅಖಿಲೇಶ್ ಯಾದವ್ ಗೆ ಮಾಡಿದ್ದಾರೆ.
ಒಂದೆರಡು ವರ್ಷದ ಹಿಂದೆ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಮತ್ತೆ ಮ್ಯಾನ್ಡೇಡ್ ಸಿಗುವುದು ಕಷ್ಟ ಎನ್ನುವ ಚುನಾವಣಾಪೂರ್ವ ಸಮೀಕ್ಷೆ/ಜನಾಭಿಪ್ರಾಯ ಹೊರಬಿದ್ದಾಗ, ಪ್ರಧಾನಿಯಾಗಬೇಕು ಎನ್ನುವ ಕನಸಿನ ಬೆನ್ನೇರಿ, ಮಾಯಾವತಿ ಹೋದಾಗ, ಹುಟ್ಟಿದ್ದೇ ಬಿಎಸ್ಪಿ-ಎಸ್ಪಿ ಮೈತ್ರಿಕೂಟ. ಆರಂಭದಲ್ಲಿ ಈ ಮೈತ್ರಿಕೂಟಕ್ಕೆ (ಲೋಕಸಭಾ ಉಪಚುನಾವಣೆ) ಯಶಸ್ಸೂ ಸಿಕ್ಕಿತು.
ಸಮಾಜವಾದಿ ಪಕ್ಷದ 'ಸೈಕಲ್' ಪಂಕ್ಚರ್ ಮಾಡಿ 'ಬೈ ಬೈ' ಎಂದ ಮಾಯಾವತಿ
ಹಿಂದುಳಿದ ವರ್ಗ, ದಲಿತರು ಮತ್ತು ಮುಸ್ಲಿಮರನ್ನು ಒಂದು ಮತಬ್ಯಾಂಕ್ ಆಗಿ ರೂಪಿಸುವ ಕೆಲಸವನ್ನು ಬಿಎಸ್ಪಿ ಸ್ಥಾಪಕ ಕಾನ್ಶೀರಾಂ ಅವರು ಹಿಂದೆಯೇ ಆರಂಭಿಸಿದ್ದರು. ಇದರ ಆಧಾರದಲ್ಲಿಯೇ 1993ರಲ್ಲಿ ಬಿಎಸ್ಪಿ ಮತ್ತು ಎಸ್ಪಿ ಒಂದಾಗಲು ಸಾಧ್ಯವಾಯಿತು. ಅದರಂತೆಯೇ, ಬಿಜೆಪಿಗೆ 'ಬ್ರಾಹ್ಮಣ-ಬನಿಯಾ ಪಕ್ಷ' ಎನ್ನುವ ಹೆಸರಿತ್ತು.
ಸೈಕಲಿನಿಂದ ಕೆಳಗಿಳಿದು ಏಕಾಂಗಿ ಯುದ್ಧಕ್ಕೆ ಹೊರಟ 'ಆನೆ'
ಬಿಜೆಪಿ ತನಗಿದ್ದ ಹಣೆಪಟ್ಟಿಯನ್ನು ಕಳಚಿಕೊಂಡು ಮುನ್ನುಗ್ಗುವಲ್ಲಿ ಯಶಸ್ವಿಯಾಯಿತು ಎನ್ನುವುದಕ್ಕೆ ಕಳೆದ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ಮತ್ತು ಈಗಿನ ಲೋಕಸಭಾ ಚುನಾವಣಾ ಫಲಿತಾಂಶ. ಬಿಎಸ್ಪಿ ಜೊತೆ ಮೈತ್ರಿಮಾಡಿಕೊಳ್ಳಲು, ತನ್ನ ಹಿಂದಿನ ಅನುಭವದಿಂದ ಮುಲಾಯಂ ವಿರೋಧ ವ್ಯಕ್ತಪಡಿಸಿದರೂ, ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಅಖಿಲೇಶ್ ಇರಲಿಲ್ಲ. ಎಸ್ಪಿ-ಬಿಎಸ್ಪಿ ಸೋಲಿಗೆ, ಕಾರಣವಾದ ಅಂಶಗಳು:
ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಗೆ ಎರಡನೇ ಅವಧಿಗೆ ತಿಲಾಂಜಲಿಯಿಟ್ಟ ಮಾಯಾ
ನಮ್ಮ ನಮ್ಮ ಪಕ್ಷವನ್ನು ಸುಭದ್ರಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆಗೆ ಪೆಟ್ಟು ಬೀಳದಂತೆ ನಮ್ಮ ಮೈತ್ರಿ ಸಾಗಲಿದೆ, ಮಾಯಾವತಿಯನ್ನು ಪ್ರಧಾನಮಂತ್ರಿಯಾಗಿ ನೋಡಲು ಬಯಸುತ್ತೇನೆ. ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಬರಲಿ, ನಾವು ಮುಂದೆಯೂ ಒಂದಾಗಿರಲಿದ್ದೇವೆ ಎನ್ನುವ ಅಖಿಲೇಶ್ ಯಾದವ್ ಅವರ ವಿಶ್ವಾಸದ ಮಾತು, ಮೋದಿ ಮತ್ತೆ ಅಧಿಕಾರಕ್ಕೆ ಏರುತ್ತಿದ್ದಂತೆಯೇ ಬಿದ್ದು ಹೋಯಿತು. ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಗೆ ಎರಡನೇ ಅವಧಿಗೆ ತಿಲಾಂಜಲಿಯಿಟ್ಟ ಮಾಯಾವತಿ, ಮತ್ತೆ ವಿಚ್ಛೇದನ ಪಡೆದರು.
ನಿರ್ಣಾಯಕ ಜ್ಯಾಟ್ ಸಮುದಾಯದ ಶೇ. 91ರಷ್ಟು ಮತ ಬಿಜೆಪಿ ಬುಟ್ಟಿಗೆ
ಪಶ್ಚಿಮ ಉತ್ತರಪ್ರದೇಶದಲ್ಲಿ ಜ್ಯಾಟ್ ಮತದಾರ ಅಜಿತ್ ಸಿಂಗ್ ನೇತೃತ್ವದ RLD ಪಕ್ಷವನ್ನು ಬೆಂಬಲಿಸುತ್ತಿದ್ದರು. ಆ ಟ್ರೆಂಡ್ 2014ರ ನಂತರ ಬದಲಾಯಿತು. ಎಸ್ಪಿ - ಬಿಎಸ್ ಜೊತೆ ಅಜಿತ್ ಸಿಂಗ್ ಪಕ್ಷವೂ ಸೀಟು ಹೊಂದಾಣಿಕೆ ಮಾಡಿಕೊಂಡಿತ್ತು. ಈ ಭಾಗದಲ್ಲಿ ಆ ಸಮುದಾಯದ ಮತ ಮಹಾಮೈತ್ರಿಗೆ ಬರಬಹುದು ಎನ್ನುವ ಅಖಿಲೇಶ್ - ಮಾಯಾವತಿ ಉಲ್ಟಾ ಹೊಡೆಯಿತು. ಸಮೀಕ್ಷೆಯೊಂದರ ಪ್ರಕಾರ, ನಿರ್ಣಾಯಕ ಜ್ಯಾಟ್ ಸಮುದಾಯದ ಶೇ. 91ರಷ್ಟು ಮತ ಬಿಜೆಪಿ ಬುಟ್ಟಿಗೆ ಬಿತ್ತು. ಮಹಾಮೈತ್ರಿಕೂಟಕ್ಕಾದ ಬಹುದೊಡ್ಡ ಏಟು ಇದು ವಿಶ್ಲೇಷಿಸಲಾಗುತ್ತಿದೆ.
ಯಾದವ್ ಸಮುದಾಯ ಕೂಡಾ ಸಂಪೂರ್ಣವಾಗಿ ಎಸ್ಪಿ-ಬಿಎಸ್ಪಿ ಪರವಾಗಿ ನಿಲ್ಲಲಿಲ್ಲ
ಸಮಾಜವಾದಿ ಪಕ್ಷದ ಮತಬ್ಯಾಂಕ್ ಆಗಿರುವ ಯಾದವ್ ಸಮುದಾಯ ಕೂಡಾ ಸಂಪೂರ್ಣವಾಗಿ ಎಸ್ಪಿ-ಬಿಎಸ್ಪಿ ಪರವಾಗಿ ನಿಲ್ಲಲಿಲ್ಲ. ಸಮುದಾಯದ ಸರಾಸರಿ ಐದಕ್ಕೆ ಮೂರು ಮತಗಳು ಮಾತ್ರ ಮಹಾಮೈತ್ರಿಕೂಟಕ್ಕೆ ಬಿದ್ದವು, ಇದು ಕಳೆದ 2017ರ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ ಇದು ಕಮ್ಮಿ. ಇದನ್ನೇ ಉಲ್ಲೇಖಿಸಿ ಮಾಯಾವತಿ, ಮೈತ್ರಿಕೂಟ ಮುರಿಯಲು ಕಾರಣವನ್ನು ಹೇಳಿದ್ದು. ಯಾದವರು ಎಸ್ಪಿಗೆ ಬೆಂಬಲಿಸಲಿಲ್ಲ, ಪ್ರಮುಖ ಮುಖಂಡರೇ ಸೋಲುಂಡಿದ್ದಾರೆ. ಹಾಗಾಗಿ, ಮೈತ್ರಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ಹೇಳಿಕೆಯನ್ನು ಮಾಯಾವತಿ ನೀಡಿದ್ದರು.
ಮುಸ್ಲಿಂ ಸಮುದಾಯದ ಮತ ಎಸ್ಪಿ-ಕಾಂಗ್ರೆಸ್ ನಡುವೆ ಹಂಚಿ ಹೋಗಿದ್ದು
ತನಗಿರುವ ಆದ್ಯ ಜಾಥವ್ ಸಮುದಾಯದ ಮತವನ್ನು ಪಡೆಯುವಲ್ಲಿ ಬಿಎಸ್ಪಿ ವಿಫಲವಾಗಿದ್ದು, ಮೈತ್ರಿಕೂಟಕ್ಕೆ ಆದ ಹಿನ್ನಡೆಗೆ ಇನ್ನೊಂದು ಕಾರಣ. ಇನ್ನು ಮುಸ್ಲಿಂ ಸಮುದಾಯ ಕೂಡಾ ಮೈತ್ರಿಕೂಟದ ಪರವಾಗಿ ತನ್ನ ಸಂಪೂರ್ಣ ನಿಷ್ಠೆಯನ್ನು ತೋರಲಿಲ್ಲ. ಕಾರಣ, ಕಾಂಗ್ರೆಸ್ ಜೊತೆ ಮತ ಇಬ್ಬಾಗವಾಗಿದ್ದು. ಪ್ರಮುಖವಾಗಿ, ಎಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿದ್ದರೋ, ಅಲ್ಲಿ ಈ ಸಮುದಾಯದ ಮತ ಎಸ್ಪಿ-ಕಾಂಗ್ರೆಸ್ ನಡುವೆ ಹಂಚಿ ಹೋಗಿದ್ದರಿಂದ, ಹೆಚ್ಚಿನ ಸಮಾಜವಾದಿ ಪಕ್ಷದ ಮುಖಂಡರು ಸೋಲು ಕಾಣುವಂತಾಯಿತು.
ಚುನಾವಣೆಗಾಗಿಯೇ ಹುಟ್ಟಿದ್ದ ಪ್ರನಾಳ ಶಿಶು ಕಥೆ ಫಲಿತಾಂಶ ಬಂದ ಕೂಡಲೇ ದುರಂತ ಅಂತ್ಯ
ಮೇಲ್ವರ್ಗ, ಕುರ್ಮೀಸ್, ಓಬಿಸಿ ಮತದಾರರು ಬಿಜಿಪಿ ಪರವಾಗಿ ನಿಂತದ್ದು ಮೈತ್ರಿಕೂಟಕ್ಕಾದ ಇನ್ನೊಂದು ಹಿನ್ನಡೆಗೆ ಕಾರಣ. ಇದರ ಜೊತೆಗೆ, ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಯಾದವ್ ಅವರ ಪಕ್ಷದ ಮತವೂ ಎಸ್ಪಿಗೆ ಬೀಳುವ ವೋಟ್ ಆಗಿರುವುದು ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕಾದ ಹಿನ್ನಡೆ. ಯಾದವ್ ಸಮುದಾಯದ ಶೇ. 12, ಇತರ ವರ್ಗದ ಶೇ.14 ಮತಗಳು ಬಿಜೆಪಿ, ಮೈತ್ರಿಕೂಟ, ಕಾಂಗ್ರೆಸ್ ನಿಂದ ಹೊರತಾದ ಪಕ್ಷಗಳಿಗೆ ಹಂಚಿ ಹೋಗಿದ್ದು ಕೂಡಾ ಮಾಯಾ-ಅಖಿಲೇಶ್ ಆದ ಹಿನ್ನಡೆ. ಒಟ್ಟಿನಲ್ಲಿ, ಚುನಾವಣೆಗಾಗಿಯೇ ಹುಟ್ಟಿದ್ದ ಪ್ರನಾಳ ಶಿಶು ಕಥೆ ಫಲಿತಾಂಶ ಬಂದ ಕೂಡಲೇ ದುರಂತ ಅಂತ್ಯ ಕಂಡಿದೆ... ಇದು ನಿರೀಕ್ಷಿತ ಕೂಡಾ..