ಗಂಗೆಗೆ ಪ್ರಾಣತ್ಯಾಗ ಮಾಡಿದ ಡಾ.ಜಿಡಿ ಅಗರ್ವಾಲ್ ಯಾರು?
ಸ್ವಾಮಿ ಜ್ಞಾನಸ್ವರೂಪ ಸಾನಂದ(ಪ್ರೊ.ಜಿಡಿ.ಅಗರ್ವಾಲ) ಇನ್ನಿಲ್ಲ..! ಹಾಗೊಂದು ಸುದ್ದಿ ಗುರುವಾರ ಹೊರಬೀಳುತ್ತಿದ್ದಂತೆಯೇ ದೇವಗಂಗೆ ಕ್ಷಣಹೊತ್ತು ಬಿಕ್ಕಿರಲಿಕ್ಕೆ ಸಾಕು! ತನ್ನುಳಿವಿಗಾಗಿ ಕೊನೆ ಉಸಿರಿರುವವರೆಗೂ ಹೋರಾಡಿದ ಅಗರ್ವಾಲ್ ರನ್ನು ಕಳೆದುಕೊಂಡ ಗಂಗೆ ಅನಾಥ ಭಾವ ಅನುಭವಿಸಿರಲಿಕ್ಕೆ ಸಾಕು!
111 ದಿನಗಳ ಸುದೀರ್ಘ ಕಾಲದ ಉಪವಾಸದ ನಂತರ ಪರಿಸರವಾದಿ, ಗಾಂಧಿವಾದಿ, ಧಾರ್ಮಿಕ ಮುಖಂಡ, ಮಾಜಿ ಪ್ರಾಧ್ಯಾಪಕ ಡಾ.ಜಿಡಿ ಅಗರ್ವಾಲ್ ಗುರುವಾರದಂದು ಕೊನೆಯುಸಿರೆಳೆದರು. ಗಂಗೆಯ ಶುದ್ಧೀಕರಣ ಮತ್ತು ಉಳಿವಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅವರ ಅಗಲಿಕೆ ಪರಿಸರವಾದಿಗಳ ವಲಯದಲ್ಲಿ ನಿರ್ವಾತ ಮೂಡಿಸಿದೆ.
ಶುದ್ಧ ಗಂಗೆ: ಉಪವಾಸ ಸತ್ಯಾಗ್ರಹ ನಡೆಸಿ ಸತ್ತರೂ, ಸ್ವಾಮಿಯ ಕನಸು ಈಡೇರಲಿಲ್ಲ
ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪಿಎಚ್ ಡಿ ಪದವಿ ಪಡೆದು ಕೈತುಂಬ ಸಂಪಾದಿಸುವುದಕ್ಕೆ ಸಾಧ್ಯವಿರುವ ಕೆಲಸವಿದ್ದರೂ ಎಲ್ಲವನ್ನೂ ಬಿಟ್ಟು ಗಂಗೆಗಾಗಿಯೇ ಬದುಕನ್ನು ಮುಡಿಪಾಗಿಟ್ಟವರು ಅಗರ್ವಾಲ್. ಅಂಥವರ ಬಲಿದಾನವಾದರೂ ಗಂಗೆಯೆ ಬಗೆಗೆ ಕಾಳಜಿ ತೋರುವುದಕ್ಕೆ, ಆ ದೇವನದಿಯನ್ನು ಉಳಿಸಿಕೊಳ್ಳುವುದಕ್ಕೆ ನಮಗೆ ಸ್ಫೂರ್ತಿಯಾಗಬೇಕಲ್ಲವೇ? ಸರ್ಕಾರ ಎಚ್ಚೆತ್ತುಕೊಳ್ಳುವುದಕ್ಕೆ ಇಂಥ ಇನ್ನೆಷ್ಟು ಬಲಿದಾನವಾಗಬೇಕು?
ಯಾರು ಜಿಡಿ ಅಗರ್ವಾಲ್?
ಉತ್ತರ ಪ್ರದೇಶದ ಮುಜಾಫರ್ ನಗರದ ಕಂಧ್ಲಾದಲ್ಲಿ 1932 ಹುಟ್ಟಿದ ಜಿಡಿ ಅಗರ್ವಾಲ್ ಅವರಿಗೆ ಚಿಕ್ಕಂದಿನಿಂದಲೂ ಕೃಷಿ, ಪರಿಸರದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದ ಅಗರ್ವಾಲ್ ನಂತರ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು, ಡಿಸೈನಿಂಗ್ ಇಂಜಿನಿಯರ್ ಆಗಿ ನೀರಾವರಿ ಇಲಾಖೆಯಲ್ಲಿ ವೃತ್ತಿ ಆರಂಭಿಸಿದರು. ನಂತರ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವಿಯನ್ನೂ ಪಡೆದರು. ವಿಶಸ್ವದ ಪ್ರಖ್ಯಾರ ಪರಿಸರ ಇಂಜಿನಿಯರ್ ಪಟ್ಟಿಯಲ್ಲಿ ಅಗರ್ವಾಲ್ ಹೆಸರು ಅಗ್ರಪಂಕ್ತಿಯಲ್ಲಿತ್ತು.
ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಣೆಗೆ
ನಂತರ ಐಐಟಿ ಕಾನ್ಪುರದಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ ಅಗರ್ವಾಲ್ ಅವರು ಬರೆದ ಎಷ್ಟೋ ವೈಜ್ಞಾನಿಕ ಲೇಖನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕಾಯ್ದೆಯನ್ನು ರಚಿಸಲುವಲ್ಲಿಯೂ ಇವರ ಪಾತ್ರ ಅತ್ಯಂತ ಮಹತ್ವದ್ದು.
2020 ರ ಹೊತ್ತಿಗೂ ಗಂಗೆಗಿಲ್ಲವೇ ಸ್ವಚ್ಛತೆಯ ಭಾಗ್ಯ?!
ಗಂಗೆಗಾಗಿ ಹೋರಾಟ
2007 ರಲ್ಲಿ ಬಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲು ನಿರ್ಧರಿಸಿದ್ದ ಆಣೆಕಟ್ಟಿನ ವಿರುದ್ಧದ ಹೋರಾಟದಿಂದಾಗಿ ಅವರ ಹೋರಾಟದ ಬದುಕು ಆರಂಭವಾಯ್ತು. 2008 ರಲ್ಲಿ ಸನ್ಯಾಸ ಸ್ವೀಕರಿಸಿ ತಮ್ಮ ಮುಮದಿನ ಬದುಕೆಲ್ಲ ಗಂಗೆಗಾಗಿ ಎಂದು ಸಂಕಲ್ಪ ಮಾಡಿದರು. ಜಿ ಡಿ ಅಗರ್ವಾಲ್ ಖಾವಿ ಬಟ್ಟೆ ಧರಿಸಿ ಸ್ವಾಮಿ ಜ್ಞಾನಸ್ವರೂಪ ಸಾನಂದ ಆದರು. 2011 ರಲ್ಲೂ ಉಪವಾಸ ಸತ್ಯಾಗ್ರಹ ನಡೆಸಿದ್ದರು. 2014 ರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗಂಗೆಯ ಉಳಿವಿಗಾಗಿ, ಸ್ವಚ್ಛತೆಗಾಗಿ ನಮಾಮಿ ಗಂಗೆ, ಸ್ವಚ್ಛಗಂಗೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ಅವರು ಸ್ವಾಗತಿಸಿದ್ದರು. ಆದರೆ ಆ ಯಾವ ಯೋಜನೆಗಳೂ ನಿರೀಕ್ಷಿಸಿದಂತೆ ಯಶಸ್ವಿಯಾಗುತ್ತಿಲ್ಲ ಎಂದು ವಿಷಾದವನ್ನೂ ಅವರು ವ್ಯಕ್ತಪಡಿಸಿದ್ದರು.
ಕಾಶಿ ಗಂಗಾ ತಟದಲ್ಲಿ ಶವಸಂಸ್ಕಾರ: ಉತ್ತರಪ್ರದೇಶ ಸರಕಾರದ ಹೊಸ ಆದೇಶ
ಸಾವಿನಿಂದ ಕೊನೆಯಾದ ಉಪವಾಸ ಸತ್ಯಾಗ್ರಹ
ಜೂನ್ 22 ರಿಂದ ಸತತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅಗರ್ವಾಲ್ ಅವರು ಹೃಷಿಕೇಶದ ಎಐಐಎಂಎಸ್ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರ ನಿಧನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿದ್ದು, ಭಾರತದಲ್ಲಿ ಅವರ ಅಗಲಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ದೂರಲಾಗುತ್ತಿದೆ.