2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ
ಲಕ್ನೋ, ನವೆಂಬರ್ 11: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದ್ದು, ಸುಪ್ರೀಂ ತೀರ್ಪನ್ನು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ಸ್ವಾಗತಿಸಿದ್ದಾರೆ. ಮಂದಿರ ನಿರ್ಮಾಣ ಕಾರ್ಯದ ಬಗ್ಗೆ ವಿಎಚ್ ಪಿ ಗಮನ ಹರಿಸಲಿದೆ ಎಂದಿದ್ದಾರೆ.
"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 1993ರಲ್ಲಿ ವಿಶ್ವ ಹಿಂದೂಪರಿಷತ್ ಸ್ಥಾಪಿಸಿದ ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್ ರೂಪಿಸಿರುವ ವಿನ್ಯಾಸದಂತೆ ರಾಮಮಂದಿರ ನಿರ್ಮಾಣವಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರವು ಟ್ರಸ್ಟ್ ಸ್ಥಾಪನೆ ಮಾಡಲಿದ್ದು, 2024ರೊಳಗೆ ಮಂದಿರ ನಿರ್ಮಾಣವಾಗಲಿದ್ದು, ಶ್ರೀರಾಮಚಂದ್ರ ಮೂರ್ತಿಯ ದರ್ಶನ ಪ್ರಾಪ್ತಿಯಾಗಲಿದೆ" ಎಂದು ವಿಷ್ಣು ಸದಾಶಿವ್ ಹೇಳಿದರು.
ಅಯೋಧ್ಯೆ: ಕೇವಲ ದೇಗುಲ ನಿರ್ಮಾಣಕ್ಕಷ್ಟೇ ಬೇಕು 50 ಕೋಟಿ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ನೀಡಿದ ಒಮ್ಮತದ ತೀರ್ಪಿನಂತೆ, ಅಯೋಧ್ಯಾದ ವಿವಾದಿತ ಭೂಮಿ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ಸಿಗಲಿದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಕೇಂದ್ರ ಸರ್ಕಾರ ವಶದಲ್ಲಿದ್ದ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ * ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ.
ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್
ವಿಶ್ವ ಹಿಂದೂ ಪರಿಷತ್ತಿನ ಸದಸ್ಯರನ್ನು ಒಳಗೊಂಡ ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಡಿಸೆಂಬರ್ 18, 1985ರಲ್ಲಿ ಸ್ಥಾಪನೆಯಾಯಿತು. ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣ ಮಾಡುವುದು ಈ ಟ್ರಸ್ಟಿನ ಮುಖ್ಯ ಉದ್ದೇಶ. ರಾಮ ಜನ್ಮಭೂಮಿ ಭೂ ಆಸ್ತಿ ಹಂಚಿಕೆ ವಿವಾದಲ್ಲಿ ರಾಮ್ ಜನ್ಮಭೂಮಿ ನ್ಯಾಸ್ ಮೂಲ ವಾರಸುದಾರರಾಗಿ ಅರ್ಜಿ ಹಾಕಿ ಕಾನೂನು ಹೋರಾಟದಲ್ಲಿ ಭಾಗಿಯಾಗಿ ಈಗ ಫಲಿತಾಂಶ ಪಡೆದುಕೊಂಡಿದ್ದಾರೆ.
ಇದು ಸೋಲು ಗೆಲುವಿನ ಪ್ರಶ್ನೆಯಲ್ಲ
"ಸುಪ್ರೀಂಕೋರ್ಟಿನಲ್ಲಿ ಅಯೋಧ್ಯೆ ಪ್ರಕರಣದ ತೀರ್ಪು ವಿಶಿಷ್ಟವಾಗಿದ್ದು, ಇದು ಸೋಲು ಗೆಲುವಿನ ಪ್ರಶ್ನೆಯಾಗಿರಲಿಲ್ಲ. ಶತಮಾನಗಳ ಕಾಲ ಬಗೆಹರಿಯದೆ ಉಳಿದಿದ್ದ ಸಮಸ್ಯೆಗೆ ನ್ಯಾಯಾಲಯವು ಸಮಾಹಿತ ಮನೋಭಾವದಲ್ಲಿ ತೀರ್ಪು ನೀಡಿದೆ. ಇದರಿಂದ ಅರ್ಜಿದಾರರಿಗೆ ಎಲ್ಲಾ ರೀತಿಯಿಂದಲೂ ನ್ಯಾಯ ಒದಗಿಸಿದ್ದಂತಾಗಿದೆ" ಎಂದು ಪಿಟಿಐ ಜೊತೆ ಮಾತನಾಡುತ್ತಾ ಕೊಕ್ಜೆ ಹೇಳಿದರು.
ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು?
ತೀರ್ಪಿನ ಪ್ರಕಾರ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್
ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆಯಾಗಬೇಕಿದೆ. ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿನ ನಿರ್ದೇಶನದಂತೆ ಮಂದಿರ ನಿರ್ಮಾಣಕ್ಕಾಗಿ ಕಾನೂನು ರೂಪಿಸಲಿದೆ. ಮುರ್ನಾಲ್ಕು ತಿಂಗಳಿನಲ್ಲಿ ಟ್ರಸ್ಟ್ ಸ್ಥಾಪನೆಯಾಗಿ ಮಂದಿರ ನಿರ್ಮಾಣದ ಬಗ್ಗೆ ಗಮನ ಹರಿಸಲಿದೆ ಎಂಬ ಭರವಸೆ ಮೂಡಿದೆ. ರಾಮ ಜನ್ಮಭೂಮಿ ನ್ಯಾಸ್ ತಯಾರಿಸಿರುವ ನೀಲನಕ್ಷೆಯಂತೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಭರವಸೆಯಿದೆ ಎಂದು ಮಧ್ಯಪ್ರದೇಶ ಹೈಕೋರ್ಟಿನ ಮಾಜಿ ಜಡ್ಜ್ ಕೊಕ್ಜೆ ಹೇಳಿದರು.
ಆರಂಭಿಕ ಹಂತ ನಿರ್ಮಾಣ ಕಾರ್ಯ ಪೂರ್ಣ
ವಿಶ್ವ ಹಿಂದೂ ಪರಿಷತ್, ರಾಮಜನ್ಮಭೂಮಿ ನ್ಯಾಸ್ ವತಿಯಿಂದ ಮಂದಿರ ನಿರ್ಮಾಣ ಕಾರ್ಯದ ಆರಂಭಿಕ ಹಂತದ ಕೆಲಸಗಳು ಪೂರ್ಣಗೊಂಡಿವೆ. ಕಂಬಗಳ ಕೆತ್ತನೆ ಕಾರ್ಯ ಜಾರಿಯಲ್ಲಿದೆ. ರಾಮನ ಜನ್ಮಸ್ಥಳದ ಜಾಗ ಸಿಕ್ಕಿದೆ. ಇನ್ನೇನಿದ್ದರೂ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಅಯೋಧ್ಯಾ ಹೆಸರು ಅಚ್ಚಳಿಯದೆ ಉಳಿಯಲಿದೆ. 2024ರೊಳಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.