"ಬರೀ ಎನ್ಕೌಂಟರ್ ಭಾಷೆ ತಿಳಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?"
ಲಕ್ನೋ, ಮಾರ್ಚ್ 12: ಸಮಾಜವಾದಿ ಪಕ್ಷದಿಂದ ಸೈಕಲ್ ಜಾಥಾ ನಡೆದಾಗಲೆಲ್ಲಾ ಉತ್ತರ ಪ್ರದೇಶ ಸರ್ಕಾರ ಬದಲಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿಕೊಂಡಿದ್ದಾರೆ.
ಆಡಳಿತ ಸರ್ಕಾರದ ವಿರುದ್ಧ ಶನಿವಾರ ಸಮಾಜವಾದಿ ರಾಜ್ಯ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಸೈಕಲ್ ಯಾತ್ರೆ ಹಮ್ಮಿಕೊಂಡಿರುವುದಾಗಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಹೀಗೆ ಹೇಳಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಸೈಕಲ್ ಜಾಥಾ ನಡೆಸಿದಾಗಲೆಲ್ಲಾ ಉತ್ತರ ಪ್ರದೇಶ ಸರ್ಕಾರ ಬದಲಾಗುತ್ತದೆ. 2011ರ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ನಾವು ಸೈಕಲ್ ಜಾಥಾ ನಡೆಸಿದ್ದೆವು. ಆಗಲೂ ಆಡಳಿತದಲ್ಲಿದ್ದ ಸರ್ಕಾರ ಸೋಲು ಅನುಭವಿಸಿತ್ತು ಎಂದಿದ್ದಾರೆ.
ನಿಮ್ಮ ಆಟ ಮುಗಿಯಿತು; ಬಜೆಟ್ ಮಂಡನೆ ಬೆನ್ನಲ್ಲೇ ಅಖಿಲೇಶ್ ಯಾದವ್ ಹೇಳಿಕೆ
ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ರಾಂಪುರ ಸಂಸದ ಅಜಮ್ ಖಾನ್ ಅವರಿಗೆ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರಾಂಪುರದಲ್ಲಿ ಜಾಥಾ ಹಮ್ಮಿಕೊಂಡಿದ್ದು, ಈ ಸಂದರ್ಭ ಅಖಿಲೇಶ್ ಯಾದವ್ ಮಾತನಾಡಿದ್ದಾರೆ. ಅಜಮ್ ಖಾನ್ ವಿರುದ್ಧ ಸರ್ಕಾರ ಹಲವು ಸುಳ್ಳು ಮೊಕದ್ದಮೆಗಳನ್ನು ಹೂಡಿದೆ. ಸೈಕಲ್ ಯಾತ್ರೆ ಆರಂಭಿಸುತ್ತಿರುವುದರಿಂದ ಜಿಲ್ಲಾಡಳಿತ ಕೂಡ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಯಾರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ ಸರ್ಕಾರಕ್ಕೆ ಗೊತ್ತಿರುವುದು ಒಂದೇ ಭಾಷೆ. ಅದು ಗುಂಡಿಕ್ಕಿ ಕೊಲ್ಲುವುದು. ಬರೀ ಎನ್ಕೌಂಟರ್ ಭಾಷೆ ತಿಳಿದವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.