ಬಿಜೆಪಿಯ ಲಸಿಕೆಗೆ ನಮ್ಮ ವಿರೋಧ, 'ಭಾರತ ಸರ್ಕಾರ'ದ ಲಸಿಕೆಗೆ ಸ್ವಾಗತ: ಅಖಿಲೇಶ್ ಯಾದವ್
ಲಕ್ನೋ, ಜೂ.08: ಕೇಂದ್ರ ಸರ್ಕಾರವು ಜೂನ್ 21 ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಣೆ ಮಾಡಿದ್ದು ಈ ಘೋಷಣೆಯನ್ನು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸ್ವಾಗತಿಸಿದ್ದು, ''ನಾವು ಬಿಜೆಪಿಯ ಲಸಿಕೆಗೆ ವಿರುದ್ಧವಾಗಿದ್ದೆವು, ಆದರೆ 'ಭಾರತ ಸರ್ಕಾರ'ದ ಲಸಿಕೆಯನ್ನು ಸ್ವಾಗತಿಸುತ್ತೇವೆ'' ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ 2.0 ಗೊಂದಲಮಯ ವಾತಾವರಣ ಸೃಷ್ಟಿಸಿತ್ತು. ಕೇಂದ್ರವು ಭಾರತದಲ್ಲಿ ತಯಾರಿಸಿದ ಶೇ. 50 ರಷ್ಟು ಲಸಿಕೆಗಳನ್ನು ಖರೀದಿಸಿದರೆ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ತಲಾ ಶೇ.25 ಲಸಿಕೆ ಡೋಸ್ಗಳನ್ನು ಖರೀದಿ ಮಾಡಬೇಕಾಗಿತ್ತು. ಅಷ್ಟೇ ಅಲ್ಲದೇ ರಾಜ್ಯಗಳು ಲಸಿಕೆ ಖರೀದಿ, ನೀಡಿಕೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾದ ಸ್ಥಿತಿ ಬಂದಿತ್ತು. ಲಸಿಕೆ ದೊರೆಯದ ಕಾರಣ ಹಲವಾರು ರಾಜ್ಯಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾವನ್ನು ತರಾಟೆಗೆ ತೆಗೆದುಕೊಂಡಿತ್ತು.
'ಅದು ಬಿಜೆಪಿಯ ಕೊರೊನಾ ಲಸಿಕೆ': ವೈದ್ಯರ, ವಿಜ್ಞಾನಿಗಳ ಶ್ರಮವನ್ನು ಅಣಕವಾಡಿದ ಮಾಜಿ ಸಿಎಂ
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದರು. ಇನ್ನು ಕೇಂದ್ರ ಸರ್ಕಾರವು ಲಭ್ಯವಿರುವ ಶೇ. 75ರಷ್ಟು ಲಸಿಕೆ ಸ್ಟಾಕ್ ಖರೀದಿ ಮಾಡಿ ಅದನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು ಮಾರ್ಗಸೂಚಿಯೂ ತಿಳಿಸಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, 'ಭಾರತ ಸರ್ಕಾರ'ದ ಲಸಿಕೆಯನ್ನು ಸ್ವಾಗತಿಸಿ, ನಾವು ಲಸಿಕೆ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಹೀಗಾಗಿ ನಾನು ಲಸಿಕೆ ಪಡೆಯುವುದಿಲ್ಲ ಎಂದು ಹೇಳಿದ್ದ ಅಖಿಲೇಶ್ ಯಾದವ್ ಮಂಗಳವಾರ ಟ್ವೀಟ್ ಮಾಡಿದ್ದು, ''ಸಾರ್ವಜನಿಕರ ಆಕ್ರೋಶವನ್ನು ನೋಡಿ, ಅಂತಿಮವಾಗಿ ಸರ್ಕಾರವು ಕೊರೊನಾ ಲಸಿಕೆಯನ್ನು ರಾಜಕೀಯಗೊಳಿಸುವ ಬದಲು ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದೆ. ನಾವು ಬಿಜೆಪಿಯ ಲಸಿಕೆಗೆ ವಿರುದ್ಧವಾಗಿದ್ದೆವು, ಆದರೆ 'ಭಾರತ ಸರ್ಕಾರ'ದ ಲಸಿಕೆಯನ್ನು ಸ್ವಾಗತಿಸಿ, ನಾವು ಲಸಿಕೆ ಪಡೆಯುತ್ತೇವೆ. ಲಸಿಕೆ ಕೊರತೆಯಿಂದಾಗಿ ಈವರೆಗೆ ಲಸಿಕೆ ಪಡೆಯಲು ಸಾಧ್ಯವಾಗದವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ'' ಎಂದು ತಿಳಿಸಿದ್ದಾರೆ.
जनाक्रोश को देखते हुए आख़िरकार सरकार ने कोरोना के टीके के राजनीतिकरण की जगह ये घोषणा करी कि वो टीके लगवाएगी।
— Akhilesh Yadav (@yadavakhilesh) June 8, 2021
हम भाजपा के टीके के ख़िलाफ़ थे पर ‘भारत सरकार’ के टीके का स्वागत करते हुए हम भी टीका लगवाएंगे व टीके की कमी से जो लोग लगवा नहीं सके थे उनसे भी लगवाने की अपील करते हैं।
"ಹೊಗಳಿಕೊಳ್ಳುವುದನ್ನು ಬಿಟ್ಟು ಕೆಲಸ ಮಾಡಿದ್ದರೆ ಎಷ್ಟೋ ಜೀವ ಉಳಿಸಬಹುದಿತ್ತು"
ಇನ್ನು ಅಖಿಲೇಶ್ ತಂದೆ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್, ಸೋಮವಾರ ಲಸಿಕೆ ಪಡೆದಿರುವ ಫೋಟೋವನ್ನು ಪಕ್ಷದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇಂದು, ಸಮಾಜವಾದಿ ಪಕ್ಷದ ಸ್ಥಾಪಕ, ಮಾಜಿ ರಕ್ಷಣಾ ಸಚಿವ, ಮಾಜಿ ಮುಖ್ಯಮಂತ್ರಿ, ನೇತಾಜಿಗೆ ಕೊರೊನಾ ಲಸಿಕೆ ಲಭಿಸಿದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)