ಎಸ್ಪಿ ಸರ್ಕಾರ ರಚಿಸಿದ್ರೆ, ಬಿಜೆಪಿಗಿಂತ ವೇಗವಾಗಿ ರಾಮ ಮಂದಿರ ನಿರ್ಮಾಣ: ರಾಮ್ ಗೋಪಾಲ್ ಯಾದವ್
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರಕ್ಕಿಂತ ವೇಗವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಮಾಡಬಲ್ಲದು ಎಂದು ಸಮಾಜವಾದಿ ಪಕ್ಷ ಭರವಸೆ ನೀಡಿದೆ.
ಮಥುರಾದ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸುವುದಾಗಿ ಘೋಷಿಸುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರಿಗೆ ಬಿಜೆಪಿ ಸವಾಲು ಹಾಕಿತು. ರಾಜ್ಯಸಭೆಯಲ್ಲಿ ಈ ಕುರಿತು ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯ ರಾಮ್ ಗೋಪಾಲ್ ಯಾದವ್ ಪ್ರತಿಕ್ರಿಯೆ ನೀಡಿದರು.
ಉತ್ತರ ಪ್ರದೇಶ ರಣರಂಗ: ನೊಟಾ ಆಯ್ಕೆಗೆ ಲಖಿಂಪುರ ಖೇರಿ ರೈತರ ಚಿಂತನೆ
"ಅಖಿಲೇಶ್ ಯಾದವ್ ಎಷ್ಟೇ ಪ್ರಯತ್ನಿಸಿದರೂ ರಾಮ ಮಂದಿರದ ಕಾಮಗಾರಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಚಿತ್ರಕೂಟದಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಆದರೆ ದೇವಸ್ಥಾನದ ಕೆಲಸವನ್ನು ಯಾರು ನಿಲ್ಲಿಸುತ್ತಿದ್ದಾರೆ?," ಎಂದು ರಾಮ್ ಗೋಪಾಲ್ ಯಾದವ್ ಪ್ರಶ್ನೆ ಮಾಡಿದರು.
ದೇವಸ್ಥಾನದ ದೇಣಿಗೆ ಹಣ ಕಳ್ಳತನ ಆರೋಪ
ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭ ಬಳಸಿಕೊಂಡು ಈ ಜನರು ಕದಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ದೇವಸ್ಥಾನ ನಿರ್ಮಾಣ ಕಾರ್ಯವು ಮತ್ತಷ್ಟು ವೇಗವಾಗಿ ಮತ್ತು ಉತ್ತಮವಾಗಿ ನಡೆಯಲಿದೆ. ಆಗ ದೇವಸ್ಥಾನದ ದೇಣಿಗೆ ಹಣದ ಕಳ್ಳತನಕ್ಕೂ ಬ್ರೇಕ್ ಬೀಳಲಿದೆ ಎಂದು ಸಂಸದ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ಟ್ರಸ್ಟ್ ಸದಸ್ಯರ ಸಹಕಾರದಿಂದ ಮೋಸದ ಭೂ ವ್ಯವಹಾರ
ರಾಮ ಮಂದಿರದಿಂದ ಕಳ್ಳತನ ನಡೆಯುತ್ತಿದೆ ಎಂಬ ಆರೋಪದೊಂದಿಗೆ, ಸಮಾಜವಾದಿ ಪಕ್ಷದ ಸಂಸದರು ಅಯೋಧ್ಯೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಮತ್ತು ಕೆಲವು ರಾಮಮಂದಿರ ಟ್ರಸ್ಟ್ ಸದಸ್ಯರ ಸಹಕಾರದಿಂದ ಮೋಸದ ಭೂ ವ್ಯವಹಾರ ನಡೆಸುತ್ತಿದ್ದಾರೆ ಎಂಬ ನಿಲುವಿನತ್ತ ಗಮನ ಸೆಳೆದರು. ರಾಮಜನ್ಮಭೂಮಿ ನಿವೇಶನದ ಪಕ್ಕದಲ್ಲಿರುವ ಆಸ್ತಿಯೊಂದರಲ್ಲಿ ಹಲವು ಪಟ್ಟು ವಹಿವಾಟು ನಡೆದಿದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ನಿಮಿಷಗಳಲ್ಲಿ ಅದರ ಬೆಲೆ 2 ಕೋಟಿ ರೂಪಾಯಿಯಿಂದ 18 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಆದರೆ ದೇವಸ್ಥಾನದ ಟ್ರಸ್ಟ್ ಈ ಆರೋಪವನ್ನು ತಳ್ಳಿ ಹಾಕಿದೆ.
ಅಮಿತ್ ಶಾ, ಯೋಗಿ ವಿರುದ್ಧ ರಾಮ್ ಗೋಪಾಲ್ ಯಾದವ್ ವಾಗ್ದಾಳಿ
"ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸಂಸದೀಯ ಭಾಷೆ ಪ್ರಯೋಗ ಮಾಡುತ್ತಿದ್ದಾರೆ. ಅಖಿಲೇಶ್ ಯಾದವ್ ಅವರನ್ನು ಗೂಂಡಾ ಎಂದು ಕರೆದರೆ ಸಮುದಾಯದ ಮತಗಳನ್ನು ಗಳಿಸಲು ಸಾಧ್ಯವಾಗುತ್ತದೆಯೇ," ಎಂದು ರಾಮ ಗೋಪಾಲ್ ಯಾದವ್ ಪ್ರಶ್ನಿಸಿದ್ದಾರೆ.
ಪ್ರತಿದಿನ ಆಕ್ರೋಶಭರಿತ ಭಾಷಣಗಳಿಂದ ಗಲಭೆ ಹುನ್ನಾರ
"ಉನ್ನತ ಸ್ಥಾನಗಳಲ್ಲಿ ಕುಳಿತಿರುವ ನಾಯಕರು ಉತ್ತರ ಪ್ರದೇಶದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಪ್ರತಿದಿನ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಹರಾನ್ಪುರ ಮತ್ತು ದೇವಬಂದ್ಗೆ ಭೇಟಿ ನೀಡಿ ಆಕ್ರೋಶಭರಿತ ಭಾಷಣಗಳನ್ನು ಮಾಡುತ್ತಿದ್ದಾರೆ," ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂಸದ ರಾಮ ಗೋಪಾಲ್ ಯಾದವ್ ಆರೋಪಕ್ಕೆ ಕೇಂದ್ರ ಸಚಿವ ಶಾಂಡಿಯಾ ಗಿರಿರಾಜ್ ಸಿಂಗ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಸಮುದಾಯಗಳಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಮೊಹಮ್ಮದ್ ಅಲಿ ಜಿನ್ನಾ ವಿಷಯವನ್ನು ಮೊದಲು ಪ್ರಸ್ತಾಪಿಸಿದ್ದು ಯಾರು ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ. ಇದೇ ವೇಳೆ, "ಅಖಿಲೇಶ್ ಯಾದವ್ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸುವ ಬಗ್ಗೆ ಘೋಷಿಸುವುದಾಗಿ ಗಂಗಾ ಜಲವನ್ನು ಮುಟ್ಟಿ ಪ್ರಮಾಣವಚನ ಸ್ವೀಕರಿಸುವಂತೆ ಗಿರಿರಾಜ್ ಸಿಂಗ್ ಸವಾಲು ಹಾಕಿದ್ದಾರೆ.