Just in: ನೋಯ್ಡಾದಲ್ಲಿ ಗಡಿ ಗೋಡೆ ಕುಸಿದು 4 ಕಾರ್ಮಿಕರು ಸಾವು: 9 ಮಂದಿಗೆ ಗಾಯ
ಮಂಗಳವಾರ ಬೆಳಗ್ಗೆ ನೋಯ್ಡಾ ಸೆಕ್ಟರ್-21 ರಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನೋಯ್ಡಾ ಸೆಕ್ಟರ್ -21 ರ ಜಲವಾಯು ವಿಹಾರ್ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ವೈ, ಸೆಕ್ಟರ್ 21 ರಲ್ಲಿ ಜಲ ವಾಯು ವಿಹಾರ್ ಬಳಿ ಒಳಚರಂಡಿ ದುರಸ್ತಿ ಕಾಮಗಾರಿಗೆ ನೋಯ್ಡಾ ಪ್ರಾಧಿಕಾರವು ಗುತ್ತಿಗೆ ನೀಡಿದೆ. "ಕಾರ್ಮಿಕರು ಇಟ್ಟಿಗೆಗಳನ್ನು ಹೊರತೆಗೆಯುವಾಗ ಗೋಡೆ ಕುಸಿದಿದೆ. ಇದನ್ನು ತನಿಖೆ ಮಾಡಲಾಗುತ್ತದೆ. ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಯಲ್ಲಿ ತಲಾ ಇಬ್ಬರು ಸಾವಿನ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಇದನ್ನು ಪರಿಶೀಲಿಸಲಾಗುತ್ತಿದೆ" ಎಂದು ನೋಯ್ಡಾ ಡಿಎಂ ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ಯುದ್ಧಾಧಾರಿತವಾಗಿ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.