ಉತ್ತರ ಪ್ರದೇಶದಲ್ಲಿ ದೊಣ್ಣೆಯಿಂದ ಬಡಿದು, ಟ್ರಾಕ್ಟರ್ ಹಾಯಿಸಿ ಹುಲಿಯ ಹತ್ಯೆ
ಲಖನೌ, ನವೆಂಬರ್ 05 : ಓರ್ವನನ್ನು ಕೊಂದ ಕಿಚ್ಚಿಗೆ ರೊಚ್ಚಿಗೆದ್ದ ಜನ ಹುಲಿಯೊಂದನ್ನು ಹೊಡೆದು, ಅದರ ಮೇಲೆ ಟ್ರಾಕ್ಟರ್ ಹಾಯಿಸಿ ಸಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ಜರುಗಿದೆ.
2 ವರ್ಷಗಳಲ್ಲಿ 13 ಜನರನ್ನು ಕೊಂದುತಿಂದ ಅವನಿ ಎಂಬ 'ನರಭಕ್ಷಕ' ಹುಲಿಯನ್ನು ಮಹಾರಾಷ್ಟ್ರದಲ್ಲಿ ಸರಕಾರದ ಆದೇಶದ ಮೇರೆಗೆ ಕೊಂದ ವಿವಾದ ಇಡೀ ದೇಶವನ್ನು ಆವರಿಸಿಕೊಂಡಿರುವ ಹೊತ್ತಿನಲ್ಲಿ ಮತ್ತೊಂದು ಹುಲಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!
ಲಖನೌದಿಂದ 210 ಕಿ.ಮೀ. ದೂರದಲ್ಲಿರುವ ದುಧ್ವಾ ಹುಲಿ ಅಭಿಯಾರಣ್ಯದ ಬಳಿ, ಅರಣ್ಯದ ಮೂಲಕ ಹಾದು ಹೋಗುತ್ತಿದ್ದಾಗ 50 ವರ್ಷದ ವ್ಯಕ್ತಿಯ ಮೇಲೆ 10 ವರ್ಷದ ಹುಲಿ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಅಭಯಾರಣ್ಯದೊಳಗೆ ನುಗ್ಗಿ, ಅರಣ್ಯ ರಕ್ಷಣಾ ಸಿಬ್ಬಂದಿಯನ್ನು ಥಳಿಸಿ, ಅಲ್ಲಿಯೇ ಇದ್ದ ಟ್ರಾಕ್ಟರ್ ಜೊತೆ ಕಾಡಿನೊಳಗೆ ನುಗ್ಗಿದ್ದಾರೆ. ಹುಲಿ ಕಾಣಿಸಿಕೊಳ್ಳುತ್ತಿದ್ದಂತೆ ಅದನ್ನು ದೊಣ್ಣೆಗಳಿಂದ ಬಡಿದಿದ್ದಾರೆ ಮತ್ತು ಅದರ ಮೇಲೆ ಟ್ರಾಕ್ಟರ್ ಅನ್ನೂ ಹಾಯಿಸಿ ಕೊಂದಿದ್ದಾರೆ.
ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!
ಕೆಲ ಸಮಾಜಘಾತುಕ ಶಕ್ತಿಗಳು ಹುಲಿಯನ್ನು ಕೊಂದಿವೆ. ಅವರನ್ನು ನಾವು ಗುರುತಿಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ ಮತ್ತು ಅವರನ್ನು ಬಂಧಿಸುತ್ತೇವೆ ಎಂದು ದುಧ್ವಾ ರಾಷ್ಟ್ರೀಯ ಪಾರ್ಕ್ ನ ನಿರ್ದೇಶಕ ಮಹಾವೀರ ಕೋಜಿಲಂಗಿ ಎಂಬುವವರು ಹೇಳಿದ್ದಾರೆ.
ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!
ಅರಣ್ಯಾಧಿಕಾರಿಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಆ ಹೆಣ್ಣು ಹುಲಿ ಯಾವ ಮನುಷ್ಯನ ಮೇಲೂ ದಾಳಿ ಮಾಡಿಲ್ಲ. ಆದರೆ, ಮಾನವರೇ ಅರಣ್ಯದೊಳಗೆ ಪ್ರವೇಶಿಸಿ, ಕಾಡು ಪ್ರಾಣಿಗಳಿಗೆ ತೊಂದರೆ ನೀಡುತ್ತಾರೆ. ಆದರೆ, ಗ್ರಾಮಸ್ಥರು ಹೇಳುವುದೇ ಬೇರೆ, ಕಳೆದೆರಡು ವಾರಗಳಿಂದ ಹುಲಿಯಿಂದಾಗಿ ಜನರು ಭೀತಿಗೊಳಗಾಗಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
Another #Tiger #NationalPride mercilessly killed by villagers with a tractor seized from @UpforestUp officials in #Chaltua #Mailani #KishanpurTigerSanctuary #UttarPradesh she injured a man when he ventured into the jungle. We need a special team for ever rising #ManAnimalConflict pic.twitter.com/FwN93fm2Ax
— Randeep Hooda (@RandeepHooda) November 4, 2018
ಹುಲಿಯನ್ನು ಗ್ರಾಮಸ್ಥರು ಕೊಂದಿರುವ ಚಿತ್ರವನ್ನು ಬಾಲಿವುಡ್ ನಟ ರಣದೀಪ್ ಹೂಡಾ ಅವರು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಇದನ್ನು ತಹಬದಿಗೆ ತರಲು ಹೊಸ ತಂಡವನ್ನು ರಚಿಸಬೇಕು ಎಂದು ಉಪದೇಶ ನೀಡಿದ್ದಾರೆ.