ಬಂಧನದ ಬಗ್ಗೆ ಪೊಲೀಸರಿಂದಲೇ ಮಾಹಿತಿ ತಿಳಿದಿದ್ದ ವಿಕಾಸ್ ದುಬೆ!
ಲಕ್ನೋ, ಜುಲೈ 05 : ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಗೆ ಪೊಲೀಸರು ಆಗಮಿಸಲಿರುವ ಸುದ್ದಿ ಮೊದಲೇ ತಿಳಿದಿತ್ತು. ಪೊಲೀಸರ ಮೇಲೆ ದಾಳಿ ಮಾಡಲು ಸಹಚರರನ್ನು ಆತ ಕರೆಸಿಕೊಂಡಿದ್ದ.
ಗುರುವಾರ ರಾತ್ರಿ ವಿಕಾಸ್ ದುಬೆ ಬಂಧಿಸಲು ಹೋಗಿದ್ದ 8 ಪೊಲೀಸರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲಾಗುತ್ತಿದೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ಕಾನ್ಪುರ ಪೊಲೀಸರು ವಿಕಾಸ್ ದುಬೆ ಸಹಚರ ದಯಾಶಂಕರ್ ಅಗ್ನಿಹೋತ್ರಿಯನ್ನು ಭಾನುವಾರ ಬಂಧಿಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿ
ರೌಡಿ ಶೀಟರ್ ವಿಕಾಸ್ ದುಬೆಗೆ ಪೊಲೀಸರು ಬಂಧಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಠಾಣೆಯಿಂದಲೇ ಸಿಕ್ಕಿತ್ತು. ಬಂಧಿತನಾದರೆ ಮತ್ತೆ ಜೈಲಿಗೆ ಹೋಗುವುದು ಖಚಿತವಾಗಿದ್ದ ಆತ ಪೊಲೀಸರ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದ.
8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ
ತಾನು ಅಡಗಿರುವ ಮನೆಯ ಸಮೀಪಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿಯನ್ನು ಆತ ಮತ್ತು ಆತನ ಸಹಚರರು ನಡೆಸಿದ್ದರು. ಡಿವೈಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ 8 ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
ಉತ್ತರ ಪ್ರದೇಶ ಸರ್ಕಾರ ಶನಿವಾರ ವಿಕಾಸ್ ದುಬೆ ಐಷಾರಾಮಿ ಮನೆಯನ್ನು ಜೆಸಿಬಿ ತಂದು ನೆಲಸಮಗೊಳಿಸಿದೆ. ಆತನಿಗೆ ಸೇರಿದ ಕಾರುಗಳನ್ನು ಜಖಂಗೊಳಿಸಿದೆ. ಪರಾರಿಯಾಗಿರುವ ವಿಕಾಸ್ ದುಬೆ ಬಂಧಿಸಲು ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.
60ಕ್ಕೂ ಅಧಿಕ ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಬಂಧಿಸುವ ಕುರಿತು ಪೊಲೀಸ್ ಇಲಾಖೆಯಿಂದಲೇ ಮಾಹಿತಿ ನೀಡಿದವರು ಯಾರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.