ನೀರು ಕುಡಿಯಲು ದೇವಾಲಯದ ಒಳಗೆ ಹೋಗಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ: ಅಮಾನವೀಯ ಘಟನೆ
ಗಾಜಿಯಾಬಾದ್, ಮಾರ್ಚ್ 13: ನೀರು ಕುಡಿಯುವ ಸಲುವಾಗಿ ದೇವಸ್ಥಾನದ ಒಳಗೆ ಹೋಗಿದ್ದ ಬಾಲಕನೊಬ್ಬನನ್ನು ಅಮಾನವೀಯವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡುಬಂದ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆ ದೃಶ್ಯದ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ. ಬಿಹಾರ ಮೂಲದ ಶ್ರಿಂಗಿ ನಂದನ್ ಯಾದವ್ ಎಂದು ಆರೋಪಿಯನ್ನು ಗುರುತಿಸಲಾಗಿದೆ.
ನೀರು ಕುಡಿಯುವ ಸಲುವಾಗಿ ದೇವಸ್ಥಾನದ ಒಳಗೆ ಬಂದಿದ್ದ ಬಾಲಕನನ್ನು ಹಿಡಿದುಕೊಂಡಿದ್ದ ಆರೋಪಿ, ಆತನ ಹೆಸರು ಮತ್ತು ಅವನ ತಂದೆಯ ಹೆಸರು ಕೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ಬಾಲಕ ಹೆದರಿಕೊಂಡು ನಿಂತಿರುವುದು ಕಾಣಿಸುತ್ತದೆ.
According to a instagram account (hinduektasanghh), A muslim kid was mercilessly beaten for drinking water in a temple.
— Mohammed Zubair (@zoo_bear) March 12, 2021
Cc : @ghaziabadpolice @Uppolice pic.twitter.com/61ezNX0zMn
ದೇವಸ್ಥಾನದ ಒಳಗೆ ಏಕೆ ಹೋಗಿದ್ದಿ ಎಂದು ಆರೋಪಿ ಪ್ರಶ್ನಿಸಿದಾಗ, ನೀರು ಕುಡಿಯಲೆಂದು ಒಳಗೆ ಹೋಗಿದ್ದಾಗಿ ಬಾಲಕ ತಿಳಿಸಿದ್ದಾನೆ. ಅದನ್ನು ಕೇಳಿದ ಕೂಡಲೇ ಆರೋಪಿ, ಬಾಲಕನ ಮೇಲೆ ಕರುಣೆ ಇಲ್ಲದೆ ಮನಬಂದಂತೆ ಬಾರಿಸಿ, ಒದ್ದಿದ್ದಾನೆ. ಆತನ ಜತೆಗಿದ್ದವನು ಈ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.