ವಿಡಿಯೋ: ಶಾಲೆಗೆ ನುಗ್ಗಿದ ಚಿರತೆ - ವಿದ್ಯಾರ್ಥಿಯ ಮೇಲೆ ದಾಳಿ
ಲಕ್ನೋ, ಡಿಸೆಂಬರ್ 2: ಚಿರತೆಯೊಂದು ಶಾಲೆಗೆ ನುಗ್ಗಿ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಉತ್ತರ ಪ್ರದೇಶದ ಅಲಿಗಢ್ನಲ್ಲಿ ನಡೆದಿದೆ. ಬುಧವಾರ ಅಲಿಗಢ್ನ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿಗೆ ನುಗ್ಗಿದ ಚಿರತೆ ದೊಡ್ಡ ಅವಾಂತರವೇ ಸೃಷ್ಟಿ ಮಾಡಿದೆ. ಈ ಪ್ರದೇಶದಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದರಿಂದ ಚಿರತೆಯನ್ನು ಕೊಂಡೊಯ್ಯಲು ಅರಣ್ಯಾಧಿಕಾರಿಗಳಿಗೆ ದೂರು ಬಂದಿತ್ತು. ಹೀಗಾಗಿ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಘಟನೆಯಿಂದಾಗಿ ತರಗತಿಗೆ ಬೀಗ ಹಾಕಲಾಗಿದೆ.
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಶಾಲೆಯೊಂದಕ್ಕೆ ಅಡ್ಡಾದಿಡ್ಡಿಯಾಗಿ ನುಗ್ಗಿದ ಚಿರತೆಯೊಂದು ವಿದ್ಯಾರ್ಥಿಯೊಬ್ಬರ ಮೇಲೆ ದಾಳಿ ಮಾಡಿದೆ. ಚಿರತೆಯನ್ನು ಕೊಂಡೊಯ್ಯಲು ಸ್ಥಳದಲ್ಲಿ ಅರಣ್ಯಾಧಿಕಾರಿ ಸಿಬ್ಬಂದಿಗಳು ಕಾಯುತ್ತಿರುವಾಗ ಶಾಲೆಯ ಹೊರಗೆ ಜನಜಂಗುಳಿಯಿಂದ ಭಾರೀ ಗದ್ದಲ ಉಂಟಾಗಿತ್ತು. ಈ ವೇಳೆ ಶಾಲೆಗೆ ಚಿರತೆ ನುಗ್ಗಿದೆ. ಜೊತೆಗೆ ವಿದ್ಯಾರ್ಥಿ ಮೇಲೆ ದಾಳಿ ಮಾಡಿದೆ.
'ನಾನು ತರಗತಿಗೆ ಪ್ರವೇಶಿಸುತ್ತಿದ್ದಂತೆ ಚಿರತೆ ಇರುವುದನ್ನು ಕಂಡೆ, ನಾನು ತಿರುಗಿಬಿದ್ದ ಕ್ಷಣದಲ್ಲೇ ಆ ಪ್ರಾಣಿ ದಾಳಿ ಮಾಡಿ ಕೈ ಮತ್ತು ಬೆನ್ನಿಗೆ ಕಚ್ಚಿದೆ' ಎಂದು ಪ್ರಾಣಿ ದಾಳಿಗೊಳಗಾದ ವಿದ್ಯಾರ್ಥಿ ಲಕ್ಕಿ ರಾಜ್ ಸಿಂಗ್ ಹೇಳಿದ್ದಾರೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದೀಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಬೆಳಗ್ಗೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ಚಿರತೆಯೊಂದು ಕ್ಯಾಂಪಸ್ಗೆ ನುಗ್ಗಿದೆ. ವಿದ್ಯಾರ್ಥಿಯೊಬ್ಬನಿಗೆ ಪ್ರಾಣಿ ದಾಳಿ ಮಾಡಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವನು ಮನೆಯಲ್ಲಿದ್ದು, ಆರೋಗ್ಯವಾಗಿದ್ದಾನೆ ಎಂದು ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜ್ ಪ್ರಾಂಶುಪಾಲ, ಯೋಗೇಶ್ ಯಾದವ್ ತಿಳಿಸಿದ್ದಾರೆ.
'ಏಕಾಏಕಿ ಶಾಲೆಗೆ ನುಗ್ಗಿದ ಚಿರತೆ ಕೊಠಡಿ ಸಂಖ್ಯೆ 10 ರಲ್ಲಿತ್ತು. ವಿದ್ಯಾರ್ಥಿಗಳು ಭಯಭೀತರಾಗಿ ಓಡತೊಡಗಿದರು. ತಡಮಾಡದೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಗೂ ತಿಳಿಸಲಾಯಿತು. ವಿದ್ಯಾರ್ಥಿಗಳನ್ನೆಲ್ಲಾ ಹೊರಗೆ ಕಳುಹಿಸಿ ನಾವು ಸಿಸಿಟಿವಿ ಮೂಲಕ ಪ್ರಾಣಿಗಳ ಮೇಲೆ ನಿಗಾ ಇರಿಸಿದ್ದೆವು' ಎಂದು ಅವರು ಹೇಳಿದರು.
'ಅಷ್ಟರಲ್ಲಾಗಲೇ ಚಿರತೆಯನ್ನು ಹಿಂಬಾಲಿಸಿಕೊಂಡು ಜನರೂ ಕೂಡ ಓಡಿ ಬಂದಿದ್ದಾರೆ. ಶಾಲೆಯ ಸುತ್ತಲೂ ಜನ ಜಮಾಯಿಸಿದ್ದರಿಂದ ಚಿರತೆ ಗಾಬರಿಗೊಳಗಾಗಿತ್ತು. ಸದ್ದು ಗದ್ದಲಕ್ಕೆ ಚಿರತೆ ದಾಳಿ ಮಾಡುವಂತೆ ವರ್ತಿಸುತ್ತಿತ್ತು. ತಕ್ಷಣ ನಾವು ಬೇರೆ ಕೊಠಡಿಗಳನ್ನು ಮುಚ್ಚಿದೆವು. ನಂತರ ಚಿರತೆ ಹೊರಬಾರದಂತೆ ನೋಡಿಕೊಂಡೆವು. ಕೂಡಲೇ ನಾವು ತರಗತಿಯ ಬಾಗಿಲು ಮುಚ್ಚಿದೆವು. ಚಿರತೆ ಸದ್ದು ಗದ್ದಲಕ್ಕೆ ವಿದ್ಯಾರ್ಥಿಗಳು ತುಂಬಾ ಹೆದರಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಸದ್ಯ ಚಿರತೆಯನ್ನು ಹಿಡಿಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ' ಎಂದು ಪ್ರಾಂಶುಪಾಲರು ಹೇಳಿದರು.
ಆದರೆ ಈ ಭಾಗದಲ್ಲಿ ಕಾಡು ಪ್ರಾಣಿಗಳು ಆಗಾಗ ತಮ್ಮ ಮೇಲೆ ದಾಳಿಗೆ ಪ್ರಯತ್ನಿಸುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳ ಕಾಟಕ್ಕೆ ನಾವು ಮಾತ್ರವಲ್ಲ ನಮ್ಮ ಮಕ್ಕಳು ಭಯಭೀತರಾಗಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಅಧಿಕ ಮಕ್ಕಳು ಇರುತ್ತಾರೆ ಚಿರತೆ ನುಗ್ಗಿದ ಕೊಠಡಿಯಲ್ಲಿ ಮಕ್ಕಳು ಇರಲಿಲ್ಲ. ಕೊಠಡಿಗೆ ಹೋದ ವಿದ್ಯಾರ್ಥಿ ಮೇಲೆ ಅದು ದಾಳಿ ಮಾಡಿದೆ. ಒಂದು ವೇಳೆ ವಿದ್ಯಾರ್ಥಿಗಳು ಕೊಠಡಿಯಲ್ಲಿ ಇರುವಾಗ ಚಿರತೆ ನುಗ್ಗಿದ್ದರೆ ದೊಡ್ಡ ಅಪಾಯವೇ ಉಂಟಾಗುತ್ತಿತ್ತು ಎಂದು ಸ್ಥಳೀಯರು ಆತಂಕಗೊಂಡರು. ಜೊತೆಗೆ ಇಂಥ ಘಟನೆಗಳು ಮರುಕಳಿಸದಂತೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಮುಚ್ಚಿದ ತರಗತಿಯ ಕೊಠಡಿಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸದ್ಯ ಭಾರೀ ವೈರಲ್ ಆಗಿದೆ.