ನರೇಂದ್ರ ಮೋದಿ Vs ತೇಜ್ ಬಹಾದೂರ್! ಯಾರು 'ಅಸಲಿ' ಚೌಕಿದಾರ್?
Recommended Video
ವಾರಣಾಸಿ, ಏಪ್ರಿಲ್ 30 : ಕರ್ನಾಟಕದ ಮಂಡ್ಯ ಲೋಕಸಭೆ ಕ್ಷೇತ್ರದ ನಂತರ, ಏಳನೇ ಹಂತದಲ್ಲಿ ನಡೆಯಲಿರುವ ಮತದಾನದಲ್ಲಿ ಇಡೀ ದೇಶದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಉತ್ತರ ಪ್ರದೇಶದ ವಾರಣಾಸಿ.
ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ ಎರಡನೇ ಬಾರಿ ಇಲ್ಲಿಂದ ಸ್ಪರ್ಧೆಗಿಳಿದಿರುವ ಸುದ್ದಿ ಒಂದೆಡೆಯಾದರೆ, ಇನ್ನೂ ಹಲವಾರು ಸಂಗತಿಗಳು, ಕಾಶಿ ಎಂದೂ ಖ್ಯಾತವಾಗಿರುವ, ಗಂಗಾ ತಟದಲ್ಲಿರುವ ಈ ಪವಿತ್ರ ಕ್ಷೇತ್ರ ಸುದ್ದಿಗೆ ಗ್ರಾಸವಾಗಿದೆ.
ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಚ್ಚರಿಯ ನಡೆ, ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲು
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವುದು ಮಾತ್ರವಲ್ಲ, ಅವರನ್ನು ಈ ಕ್ಷೇತ್ರದಲ್ಲಿಯೂ ಸೋಲಿಸಬೇಕೆಂದು ವಿರೋಧ ಪಕ್ಷಗಳೆಲ್ಲ ಟೊಂಕ ಕಟ್ಟಿವೆ. ಮೋದಿಯವರನ್ನು ಸದೆಬಡಿಯಬೇಕೆಂದು ಕಾಂಗ್ರೆಸ್ ಪ್ರಿಯಾಂಕಾ ವಾದ್ರಾ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿತ್ತು. ಆದರೆ, ಕಡೆ ಘಳಿಗೆಯಲ್ಲಿ ಹಿಂದೇಟು ಹಾಕಿದ್ದರಿಂದ ಭಾರತೀಯ ಜನತಾ ಪಕ್ಷ ಮೊದಲ ಯುದ್ಧದಲ್ಲಿ ಜಯ ಗಳಿಸಿತ್ತು.
ಇಷ್ಟರಲ್ಲಿಯೇ, ಬಾಲಿವುಡ್ ಸಿನೆಮಾಗಳಲ್ಲಿ ಕಟ್ಟಕಡೆಯ ಘಳಿಗೆಯಲ್ಲಿ ಆಗಮಿಸುವಂತೆ, ಭಾರತೀಯ ಸೇನೆಯಿಂದ ವಜಾ ಆಗಿದ್ದ, ಆಹಾರ ಸರಿಯಿಲ್ಲವೆಂದು ಮೋದಿ ಸರಕಾರದ ಮೇಲೆ ಟೀಕಾಪ್ರಹಾರ ಮಾಡಿದ್ದ ಮಾಜಿ ಜವಾನ ತೇಜ್ ಬಹಾದೂರ್ ಯಾದವ್ (ಆಝಾದ್) ವಾರಣಾಸಿಯಲ್ಲಿ ಸಮಾಜವಾದಿ, ಬಹುಜನ ಸಮಾಜ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ವಾರಣಾಸಿ: ಮೋದಿಗೆ ಮುಜುಗರ ತಂದೊಡ್ಡಲು ಹೋಗಿ ಮುಖಭಂಗ ಅನುಭವಿಸಿದ ಕಾಂಗ್ರೆಸ್
ತೇಜ್ ಬಹಾದೂರ್ ಸಿಂಗ್ ನಿಜವಾದ ಸೈನಿಕ, ಅವರು ನರೇಂದ್ರ ಮೋದಿಯವರನ್ನು ವಾರಣಾಸಿಯಲ್ಲಿ ಮಣ್ಣು ಮುಕ್ಕಿಸುತ್ತಾರೆ ಎಂಬಂತೆ ಸಾಮಾಜಿಕ ತಾಣಗಳಲ್ಲಿ ಬಿಂಬಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಸ್ಪರ್ಧಿಸಿದಾಗಲೂ ಇದೇ ಬಗೆಯ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಆದರೆ ಆದದ್ದೇನು? ಈ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.
ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ತೇಜ್
ಗಡಿ ಭದ್ರತಾ ಪಡೆಯಲ್ಲಿ ಜವಾನರಾಗಿದ್ದ ತೇಜ್ ಬಹಾದೂರ್ ಯಾದವ್ (43) ಅವರು, ಸೇನೆಯಲ್ಲಿದ್ದಾಗಲೇ ಕೇಂದ್ರ ಸರಕಾರದಿಂದ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಕಳಪೆಮಟ್ಟದ ಆಹಾರ ಪೂರೈಕೆಯಾಗುತ್ತಿದೆ ಎಂದು ಸೆಲ್ಪಿ ವಿಡಿಯೋ ಮಾಡಿ 2017ರ ಜನವರಿಯಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಈ ವಿಡಿಯೋ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಆದರೆ, ವಿಚಾರಣೆ ಮಾಡಲಾಗಿ, ಗಡಿ ಭದ್ರತಾ ಪಡೆಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ, ಆದೇಶವಿದ್ದರೂ ಎರಡು ಫೋನ್ ಹೊಂದಿದ್ದರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಆದೇಶಕ್ಕೆ ವಿರುದ್ಧವಾಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇಲೆ ಹರ್ಯಾಣದ ನಿವಾಸಿಯಾಗಿರುವ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
ಸಮಾಜವಾದಿ ಪಕ್ಷದಿಂದ ತೇಜ್ ಬಹಾದೂರ್
ತೇಜ್ ಬಹಾದೂರ್ ಯಾದವ್ ಅವರು ಸಮಾಜವಾದಿ ಪಕ್ಷ ಸೇರುವ ಮೊದಲು ಸ್ವತಂತ್ರ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡು ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೊದಲು ಶಾಲಿನಿ ಯಾದವ್ ಎಂಬುವವರನ್ನು ನರೇಂದ್ರ ಮೋದಿಯ ವಿರುದ್ಧ ಸಮಾಜವಾದಿ ಪಕ್ಷ ಇಳಿಸಿತ್ತು. ಆದರೆ, ನಾಮಪತ್ರ ಸಲ್ಲಿಸುವ ಕಡೆಯ ದಿನ ಏಪ್ರಿಲ್ 29ರಂದು ಅಚ್ಚರಿಯ ರೀತಿಯಲ್ಲಿ ಶಾಲಿನಿ ಯಾದವ್ ಅವರ ನಾಮಪತ್ರವನ್ನು ಹಿಂತೆಗೆದುಕೊಂಡು, ತೇಜ್ ಬಹಾದೂರ್ ಯಾದವ್ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದಾಗಿ ನರೇಂದ್ರ ಮೋದಿಯವರಿಗೆ ಹೊಡೆತ ಬೀಳುವುದಾ? ಅಥವಾ ಮೋದಿ ಅಲೆಯಲ್ಲಿ ಎಲ್ಲರೂ ಕೊಚ್ಚಿ ಹೋಗುವರಾ?
ಯಾರು ನಿಜವಾದ ಚೌಕಿದಾರ್?
ನಾಮಪತ್ರ ಸಲ್ಲಿಸಿದ ನಂತರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ತೇಜ್ ಬಹಾದೂರ್ ಯಾದವ್ ಅವರು, ಮೋದಿ ಸರಕಾರ ಸೈನ್ಯಕ್ಕಾಗಿ ಏನನ್ನೂ ಮಾಡಿಲ್ಲ. ಅವರು ಸೈನ್ಯದ ಅಭಿವೃದ್ಧಿಗಾಗಿ ಹಲವಾರು ಘೋಷಣೆಗಳನ್ನು ಕೂಗಿದ್ದರು. ಆದರೆ, ಯಾವುದನ್ನೂ ಪೂರೈಸಿಲ್ಲ. ಮೋದಿಯವರು ಜವಾನರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ, ಆದರೆ ಅವರಿಗಾಗಿ ಏನನ್ನೂ ಮಾಡಿಲ್ಲ. ನಿಜವಾದ ಚೌಕಿದಾರ್ ಅಂದ್ರೆ ನಾನು, ನೀವು ನಕಲಿ ಚೌಕಿದಾರ್ ಎಂದು ತೇಜ್ ಬಹಾದೂರ್ ಮಾತಿನೇಟು ನೀಡಿದ್ದಾರೆ. ವಾರಣಾಸಿಯಲ್ಲಿ ಈಗಾಗಲೆ ಎದ್ದಿರುವ ಮೋದಿ ಅಲೆಯನ್ನು ತಡೆಗಟ್ಟಲು ಇಷ್ಟು ಸಾಕೆ?
ನಾನೇ ನಿಜವಾದ ಚೌಕಿದಾರ, ಮೋದಿಗೆ ಆ ಪದ ಒಪ್ಪುವುದಿಲ್ಲ: ತೇಜ್ ಬಹದ್ದೂರ್
ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ತೇಜ್
ನರೇಂದ್ರ ಮೋದಿಯವರಿಗೆ ಸೆಡ್ಡು ಹೊಡೆದಿರುವ ತೇಜ್ ಬಹಾದೂರ್ ಕಡಿಮೆ ಆಸಾಮಿಯೇನಲ್ಲ. ಕೇವಲ ಎಸ್ಸೆಸ್ಸೆಲ್ಸಿ ಓದಿರುವ 43 ವರ್ಷದ ಮಾಜಿ ಜವಾನ, ಹರ್ಯಾಣದ ಮಹೇಂದ್ರಗಢದ ನಿವಾಸಿಯಾಗಿದ್ದು, ಹೆಚ್ಚೂಕಡಿಮೆ ಒಂದು ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಈಗ ವೃತ್ತಿಯಿಂದ ಕೃಷಿಕ ಎಂದು ಹೇಳಿಕೊಂಡಿರುವ ತೇಜ್ ಬಹಾದೂರ್ (50 ಲಕ್ಷ ರು.) ಮತ್ತು ಅವರ ಪತ್ನಿ ಖಾಸಗಿ ಕಂಪನಿಯಲ್ಲಿ ನೌಕರಳಾಗಿರುವ ಶರ್ಮಿಳಾ ದೇವಿ(40 ಲಕ್ಷ ರು.)ಯವರ ಬಳಿಯಿರುವ ಒಟ್ಟು ಸ್ಥಿರಾಸ್ತಿ 90 ಲಕ್ಷ ರುಪಾಯಿಗೂ ಅಧಿಕವಾಗಿದೆ. ಇದಕ್ಕೆ ಚರಾಸ್ತಿಯನ್ನು ಸೇರಿಸಿದರೆ 1 ಕೋಟಿ ರುಪಾಯಿಗೂ ಅಧಿಕ. ಒಬ್ಬ ಜವಾನನ ಬಳಿ ಇಷ್ಟು ಹಣ ಇರಬಾರದೆಂದೇನೂ ಇಲ್ಲವಲ್ಲ?
ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ
ಸಿಂಹ ಘರ್ಜನೆ ಮಾಡಿದ್ದಾರೆ ನರೇಂದ್ರ ಮೋದಿ
ವಾರಣಾಸಿ ರೋಚಕದ ಕಣವಾಗಲು ಇನ್ನೊಂದು ಕಾರಣವೂ ಇದೆ. ನರೇಂದ್ರ ಮೋದಿಯವರ ವಿರುದ್ಧ ಮಾಜಿ ಸೈನಿಕ, ಮಾಜಿ ನ್ಯಾಯಮೂರ್ತಿ, ದೆಹಲಿಯಲ್ಲಿ ಸರಕಾರದ ವಿರುದ್ಧ ಹಲವಾರು ದಿನಗಳ ಕಾಲ ಹೋರಾಟ ನಡೆಸಿದ ತಮಿಳುನಾಡಿನ ಕೆಲ ರೈತರು ಸೇರಿದಂತೆ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ತೆಲಂಗಾಣದಲ್ಲಿ ಫ್ಲೋರೋಸಿಸ್ ನಿಂದ ಸಂಕಷ್ಟಕ್ಕೀಡಾದವರ ಪ್ರತಿನಿಧಿಯಾಗಿ ವ್ಯಕ್ತಿಯೊಬ್ಬರು ಸೆಣಸುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳ ಜೊತೆ 35ಕ್ಕೂ ಹೆಚ್ಚು ಇತರ ಸಣ್ಣಪುಟ್ಟ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಕುರಿಗಳಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ, ನರೇಂದ್ರ ಮೋದಿಯವರು ಈಗಾಗಲೆ ಹಲವಾರು ಸಮಾವೇಶ, ರೋಡ್ ಶೋಗಳನ್ನು ಮಾಡಿ ಸಿಂಹ ಘರ್ಜನೆ ಮಾಡಿದ್ದಾರೆ.
ನಗೆಪಾಟಲಿಗೀಡಾದ ಕಾಂಗ್ರೆಸ್ ಪಟಾಲಂ
ಇದೆಲ್ಲದ ಜೊತೆ ಕಾಂಗ್ರೆಸ್ ಮಾಡಿದ ನಾಟಕ ಅಥವಾ ಪ್ರಹಸನ ನಗೆಪಾಟಲಿಗೀಡಾಗಿದೆ. 'ಮೈ ತೈಯಾರ್ ಹೂಂ' ಎಂದು ಪ್ರಿಯಾಂಕಾ ವಾದ್ರಾ ಅವರು ರೋಶಾವೇಶದ ಹೇಳಿಕೆ ನೀಡಿಬಿಟ್ಟಿದ್ದರು. ಅವರು ರಾಯ್ ಬರೇಲಿಯಿಂದ ಸ್ಪರ್ಧಿಸದಿದ್ದ ಕಾರಣ ವಾರಣಾಸಿಯಿಂದ ಖಂಡಿತ ಸ್ಪರ್ಧಿಸಿಯೇ ಸ್ಪರ್ಧಿಸುತ್ತಾರೆ ಎಂದು ಎಣಿಸಲಾಗಿತ್ತು. ಆದರೆ, ಕಟ್ಟಕಡೆ ಘಳಿಗೆಯಲ್ಲಿ ಅವರನ್ನು ನರೇಂದ್ರ ಮೋದಿಯವರ ವಿರುದ್ಧ ತಳ್ಳಲು ಇಷ್ಟಪಡದ ರಾಹುಲ್ ಗಾಂಧಿ ಅವರು, ಕಳೆದ ಬಾರಿ ಹೀನಾಯವಾಗಿ ಸೋತಿದ್ದ ಅಜಯ್ ರಾಯ್ ಎಂಬ ಹರಕೆಯ ಕುರಿಯನ್ನು ಮತ್ತೆ ಕಣಕ್ಕಿಳಿಸಿದ್ದಾರೆ. ಪ್ರಿಯಾಂಕಾ ಅವರು ಹಿಂತೆಗೆದುಕೊಂಡಿದ್ದಕ್ಕೆ ನಾನಾ ವ್ಯತಿರಿಕ್ತ ಹೇಳಿಕೆಗಳು ಕೂಡ ಮುಜುಗರ ಉಂಟು ಮಾಡಿದವು. ರಾಹುಲ್ ಗಾಂಧಿ ಅವರು ವಿದೇಶಿ ಬಂಟ ಸ್ಯಾಮ್ ಪಿತ್ರೋಡಾ ಅವರು, ಪ್ರಿಯಾಂಕಾ ವಾದ್ರಾ ಅವರೇ ಸ್ವಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ, ಸ್ವತಃ ಪ್ರಿಯಾಂಕಾ ಅವರು, ಅದು ಪಕ್ಷದ (ರಾಹುಲ್) ನಿರ್ಧಾರವಾಗಿತ್ತು ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದರು.
ಮೇ 23ರಂದು ತಿಳಿದುಬರಲಿದೆ ಫಲಿತಾಂಶ
ಏನೇ ಆಗಲಿ, ಲೋಕಸಭೆ ಚುನಾವಣೆಯ ಕಡೆಯ ಹಂತದಲ್ಲಿ, ಅಂದರೆ ಮೇ 19ರಂದು ವಾರಣಾಸಿಯಲ್ಲಿ ಮತದಾನ ನಡೆಯಲಿದೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ನರೇಂದ್ರ ಮೋದಿಯವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಮುಖಭಂಗವಾಗುವಂತೆ ಸೋಲುಣಿಸಿದ್ದರು. ಈಗಲೇ ವಾರಣಾಸಿಯಲ್ಲಿ ಅದೇ ಬಗೆಯ ಮೋದಿ ಅಲೆಯಿರುವುದು ಸ್ಪಷ್ಟವಾಗಿದೆ. ಪ್ರಿಯಾಂಕಾ ವಾದ್ರಾ ಅವರನ್ನು ಹಿಂತೆಗೆದುಕೊಳ್ಳಲಿಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಡೀ ದೇಶದ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ.