ಪ್ರತಿಭಟನೆ ವೇಳೆ ಆಸ್ತಿ ನಷ್ಟದ ಹಣ ವಸೂಲಿ: ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಆದಿತ್ಯನಾಥ್
ಲಕ್ನೋ, ಆಗಸ್ಟ್ 18: ಮೀರತ್ ಮತ್ತು ಲಕ್ನೋದಲ್ಲಿ ಆಸ್ತಿ ಹಾನಿ ಪರಿಹಾರ ವಸೂಲಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನುಮತಿ ನೀಡಿದ್ದಾರೆ.
ಲಕ್ನೋದ ನ್ಯಾಯಮಂಡಳಿಯಲ್ಲಿ ಝಾನ್ಸಿ, ಕಾನ್ಪುರ, ಚಿತ್ರಕೂಟ ಧಾಮ, ಲಕ್ನೋ, ಅಯೋಧ್ಯಾ, ದೇವಿ ಪಟನ್ ಪ್ರಯಾಗರಾಜ್, ಅಜಂಗಡ, ವಾರಾಣಸಿ, ಗೋರಖ್ಪುರ, ಬಸ್ತಿ ಮತ್ತು ವಿದ್ಯಾಂಚಲ ಧಾಮ ವಿಭಾಗಗಳಿಂದ ಬರುವ ಪರಿಹಾರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಡಿಜೆ ಹಳ್ಳಿ ಗಲಭೆಕೋರರಿಂದಲೇ ಆಸ್ತಿ ಪಾಸ್ತಿ ನಷ್ಟ ವಸೂಲಿ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
ಮೀರತ್ ನ್ಯಾಯಮಂಡಳಿಯು ಸಹರಾನ್ಪುರ, ಮೀರತ್, ಅಲಿಗಡ, ಮೊರದಾಬಾದ್, ಬರೇಲಿ ಮತ್ತು ಆಗ್ರಾ ವಿಭಾಗಗಳ ವ್ಯಾಪ್ತಿಯನ್ನು ಹೊಂದಿರಲಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ನಡೆದ ಘರ್ಷಣೆಯಲ್ಲಿ ಅಪಾರ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಪಾಸ್ತಿ ಹಾನಿಯಾದ ಪ್ರಕರಣಗಳ ಬಗ್ಗೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದ ಯೋಗಿ ಆದಿತ್ಯನಾಥ್ ಸರ್ಕಾರ, ಪ್ರತಿಭಟನೆ ವೇಳೆ ಉಂಟಾದ ಹಾನಿಯ ನಷ್ಟವನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಹಾನಿಯ ಮೊತ್ತವನ್ನು ವಸೂಲಿ ಮಾಡಲು ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಶಾಸನ ಅನುವು ಮಾಡಿಕೊಟ್ಟಿತ್ತು.