ಗಾಂಧಿ ಪ್ರತಿಮೆ ಮುಂದೆ ಫಿರೋಜ್ ಖಾನ್ ಅಳು ನೋಡಿ ಜನ ಸುಸ್ತು!
ಲಕ್ನೋ, ಅಕ್ಟೋಬರ್ 3: ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಗಾಂಧಿ ಅವರು ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಗಾಂಧಿ ಪ್ರತಿಮೆ ಎದುರು ಬಿಕ್ಕಿ ಬಿಕ್ಕಿ ಅಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಂಭಾಲ್ ನಗರದ ಚಾಂದೌಸಿ ಕೊಟ್ವಾಲ್ ಪ್ರದೇಶದ ಫವಾರಾ ಚೌಕ್ನಲ್ಲಿ ಬುಧವಾರ ಫಿರೋಜ್ ಖಾನ್ ಮತ್ತು ಅವರ ಬೆಂಬಲಿಗರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸುತ್ತಾ ಅಳುತ್ತಿರುವ ವಿಡಿಯೋವನ್ನು ಹಂಚಿಕೊಂಡ ನೆಟ್ಟಿಗರು ಫಿರೋಜ್ ಖಾನ್ ಅವರ ಕಾಲೆಳೆಯುತ್ತಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ 'ಎಮ್ಮೆ ಕದ್ರು' , ಅವರ ಪತ್ನಿ 'ಇನ್ನೊಂದು ಕದ್ರು'
ಈ ವಿಡಿಯೋ ವೈರಲ್ ಆದ ಬಳಿಕ 'ಎಎನ್ಐ' ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಫಿರೋಜ್ ಖಾನ್, ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಎರಡು ವರ್ಷದಿಂದ ಗಾಂಧಿ ಪ್ರತಿಮೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
'ಗಾಂಧಿ ಅವರ ಪ್ರತಿಮೆ ದೂಳಿನಿಂದ ತುಂಬಿರುವುದನ್ನು ಕಂಡು ನನಗೆ ತೀವ್ರ ನೋವಾಯಿತು. ಈ ರೀತಿ ನಾಟಕ ಮಾಡಿ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಅವರು ಗೋಡ್ಸೆಯ ಬೆಂಬಲಿಗರೋ, ಗಾಂಧಿಯ ಬೆಂಬಲಿಗರೋ ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ' ಎಂದು ಹೇಳಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿ
ಗಾಂಧಿ ಎದುರು ರೋದಿಸುವ ವೇಳೆ ಫಿರೋಜ್ ಆಡಿದ ಮಾತುಗಳು ಟ್ರೋಲಿಗರಿಗೆ ಹಬ್ಬದ ಊಟ ನೀಡಿದಂತಾಗಿದೆ. ಈ ವಿಡಿಯೋವನ್ನು ಹಂಚಿಕೊಂಡು ಬಗೆಬಗೆಯ ಕೀಟಲೆಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ. ಅನೇಕರು ಇದು ಅದ್ಭುತ ಡ್ರಾಮ ಎಂದು ಲೇವಡಿ ಮಾಡಿದ್ದಾರೆ. ಫಿರೋಜ್ ಮತ್ತು ಸಂಗಡಿಗರಿಗೆ ಅತ್ಯುತ್ತಮ ನಟನೆಯ ಪ್ರಶಸ್ತಿ ಕೊಡಬೇಕು. ಅವರನ್ನು ಬಿಗ್ ಬಾಸ್ ರಿಯಾಲಿಟಿ ಶೋಗೆ ಕಳುಹಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಬಿಕ್ಕಿಬಿಕ್ಕ ಅತ್ತ ಖಾನ್
'ಎಲ್ಲಿ ಹೋಗಿದ್ದೀಯಾ ಬಾಪು. ಇಷ್ಟು ದೊಡ್ಡ ದೇಶಕ್ಕೆ ನೀನು ಸ್ವಾತಂತ್ರ್ಯ ತಂದುಕೊಟ್ಟೆ ಮತ್ತು ನಮ್ಮನ್ನು ಒಂಟಿಯಾಗಿ ಬಿಟ್ಟುಹೋದೆ. ನಮ್ಮ ಎಲ್ಲ ಬಯಕೆಗಳೂ ನಿಧಾನವಾಗಿ ಸಾಯುತ್ತಿವೆ' ಎಂದು ಫಿರೋಜ್ ಖಾನ್ ಅವರು ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸುವಾಗ ಬಿಕ್ಕಿದ್ದಾರೆ. ಖಾನ್ ಜತೆ ಅವರ ಬೆಂಬಲಿಗರೂ ರೋದಿಸಿದ್ದಾರೆ.
ಉ.ಪ್ರ. ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದ ಮಹಿಳೆಯ ಬಂಧನ
ಗಾಂಧಿ ಪ್ರತಿಮೆ ಸ್ವಚ್ಛಗೊಳಿಸಿಲ್ಲ
'ನಾಟಕಕ್ಕೆ ಬಿಜೆಪಿ ಸಮಾನಾರ್ಥಕ ಪದ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಹಾತ್ಮ ಗಾಂಧಿ ಅವರ ಜನ್ಮದಿನಾಚರಣೆಯಂದು ಸರ್ಕಾರವು ಮಹಾತ್ಮ ಗಾಂಧಿ ಪ್ರತಿಮೆಗಳನ್ನು ಸ್ವಚ್ಛಗೊಳಿಸುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅದು ನಡೆದಿಲ್ಲ. ಗಾಂಧಿ ಪ್ರತಿಮೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಪಾಲಿಸುತ್ತಿಲ್ಲ ಎಂದು ಹೇಳಲು ವಿಷಾದವಾಗುತ್ತಿದೆ' ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
ಆಸ್ಕರ್ ಕೊಡಬೇಕು
ಇವರೇನು ನೇತಾ? ಅಥವಾ ಅಭಿನೇತಾ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಭಾರತಕ್ಕೆ ಪ್ರತಿಭೆಯೊಂದು ಸಿಕ್ಕಿದೆ ಎಂದು ಟ್ರಾಲ್ ಮಾಡಿದ್ದಾರೆ. ಇನ್ನು ಅನೇಕರು ಫಿರೋಜ್ ಅವರಿಗೆ ಆಸ್ಕರ್ ಕೊಡಲೇಬೇಕು. ಅವರ ಜತೆಯಲ್ಲಿದ್ದವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೊಡಬೇಕು ಎಂದಿದ್ದಾರೆ. ಈ ರೀತಿಯ ನಾಯಕರು ಚುನಾಯಿತರಾಗುತ್ತಾರೆ ಎನ್ನುವುದೇ ನಾಚಿಕೆಗೇಡು. ಇದು ಬಾಲಿವುಡ್ ಶೈಲಿಯ ಸಿನಿಮಾ ದೃಶ್ಯದಂತಿದೆ ಎಂದು ಟೀಕಿಸಿದ್ದಾರೆ.