ಅತ್ಯಾಚಾರಕ್ಕೆ ಸಾಕ್ಷಿ ಇಲ್ಲ, ನಾಲಿಗೆ ತುಂಡುಮಾಡಿಲ್ಲ: ಹತ್ರಾಸ್ ಪೊಲೀಸರ ಹೇಳಿಕೆ
ಲಕ್ನೋ, ಸೆಪ್ಟೆಂಬರ್ 30: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ 19 ವರ್ಷದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕುಟುಂಬದವರ ಜತೆ ಹುಲ್ಲು ಕೀಳುತ್ತಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದರು. ಘಟನೆಯಲ್ಲಿ ಆಕೆಗೆ ತೀವ್ರ ಗಾಯವಾಗಿತ್ತು, ಆಕೆಯ ನಾಲಿಗೆ ಕತ್ತರಿಸಿ ಹೋಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆ ಮೃತಪಟ್ಟಿದ್ದರು. ಈ ಘಟನೆ ನಿರ್ಭಯಾ ಅತ್ಯಾಚಾರ ಪ್ರಕರಣದಂತೆಯೇ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಪೊಲೀಸರು ಮತ್ತು ಯೋಗಿ ಆದಿತ್ಯನಾಥ್ ಸರ್ಕಾರದ ತೀವ್ರ ಟೀಕೆಗೆ ಒಳಗಾಗಿದೆ.
ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು
ಆದರೆ ಉತ್ತರ ಪ್ರದೇಶದ ಪೊಲೀಸರು, ಹತ್ರಾಸ್ ಸಂತ್ರಸ್ಥೆಯ ಮೇಲೆ ಹಲ್ಲೆ ನಡೆದಿದೆ ಮತ್ತು ನಾಲ್ವರು ಆರೋಪಿಗಳು ಆಕೆಯ ಕತ್ತು ಹಿಸುಕಿದ್ದಾರೆ. ಇದರಿಂದ ಆಕೆಯ ನರ ವ್ಯವಸ್ಥೆಗೆ ಹಾನಿಯಾಗಿ ಆಕೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಎಂದು ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹತ್ರಾಸ್ ಎಸ್ಪಿ ವಿಕ್ರಾಂತ್ ವೀರ್, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಆಕೆಯ ದೇಹದಲ್ಲಿ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ನಾಲಿಗೆಯನ್ನು ತುಂಡು ಮಾಡಲಾಗಿದೆ ಎಂಬ ವರದಿಗಳು ಕೂಡ ಸುಳ್ಳು ಎಂದು ಹೇಳಿದರು.
'ಹತ್ರಾಸ್ ಅಥವಾ ಅಲಿಗಡದ ವೈದ್ಯರಾಗಲೀ ಲೈಂಗಿಕ ದೌರ್ಜನ್ಯ ನಡೆದ ಲಕ್ಷಣಗಳನ್ನು ದೃಢಪಡಿಸಿಲ್ಲ. ವಿಧಿವಿಜ್ಞಾನ ನೆರವಿನೊಂದಿಗೆ ವೈದ್ಯರು ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಅತ್ಯಾಚಾರದ ಕುರುಹುಗಳು ಕಂಡುಬಂದಿಲ್ಲ' ಎಂದು ತಿಳಿಸಿದರು.
ಆಕೆಯ ನಾಲಿಗೆ ತುಂಡು ಮಾಡಲಾಗಿತ್ತು ಹಾಗೂ ಬೆನ್ನು ಮೂಳೆ ಮುರಿಯಲಾಗಿತ್ತು ಎನ್ನುವುದನ್ನು ಕೂಡ ನಿರಾಕರಿಸಿದರು. ನಾವು ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದೆವು. ಆಕೆಯ ಕತ್ತು ಹಿಸುಕಲಾಗಿತ್ತು. ಕುತ್ತಿಗೆ ಮೂಳೆಯಲ್ಲಿ ಉಂಟಾದ ಗಾಯದಿಂದ ಎಲ್ಲ ಸಮಸ್ಯೆಗಳು ಉಂಟಾಗಿದ್ದವು ಎಂದರು.