ಹತ್ರಾಸ್ ಭೇಟಿಗೆ ತೆರಳಿದ ಟಿಎಂಸಿ ಸಂಸದರನ್ನು ನೆಲಕ್ಕುರುಳಿಸಿದ ಪೊಲೀಸ್
ಲಕ್ನೋ, ಅಕ್ಟೋಬರ್.02: ಉತ್ತರ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗಿನಿಂದ ಸಂತ್ರಸ್ತೆಯ ಕುಟುಂಬಸ್ಥರ ಭೇಟಿಗೆ ತೆರಳಲು ಯಾವುದೇ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನವದೆಹಲಿಯಿಂದ 200 ಕಿ.ಮೀ ದೂರದ ಉತ್ತರ ಪ್ರದೇಶದ ಹತ್ರಾಸ್ ಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ದೆರೆಕ್ ಒಬ್ರಿಯನ್ ನೇತೃತ್ವದ ನಿಯೋಗವು ತೆರಳಲು ಮುಂದಾಗಿತ್ತು. ಈ ವೇಳೆ ಹತ್ರಾಸ್ ಗಡಿಯಲ್ಲೇ ಪೊಲೀಸರು ಟಿಎಂಸಿ ನಾಯಕರನ್ನು ತಡೆ ಹಿಡಿದಿದ್ದಾರೆ.
ಹತ್ರಾಸ್ಗೆ ಹೊರಟಿದ್ದ ರಾಹುಲ್, ಪ್ರಿಯಾಂಕಾ ಬಂಧನ
ಟಿಎಂಸಿ ಸಂಸದ ದೆರೆಕ್ ಒಬ್ರಿಯನ್, ಡಾ. ಕಾಕೋಳ್ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಾಳ್ ಮತ್ತು ಮಾಜಿ ಸಂಸದೆ ಮಮತಾ ಠಾಕೂರ್ ರನ್ನೊಳಗೊಂಡ ಟಿಎಂಸಿ ನಿಯೋಗವು ಹತ್ರಾಸ್ ಪ್ರವೇಶಿಸದಂತೆ ಪೊಲೀಸರು ತಡೆದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಸಂಸದ ಓಬ್ರಿಯನ್ ರನ್ನು ಪೊಲೀಸರು ನೆಲಕ್ಕೆ ತಳ್ಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಲೀಸರು ತಳ್ಳಿನ ಫೋರ್ಸಿನಿಂದ ನೆಲಕ್ಕೆ ಬಿದ್ದರಾ ಸಂಸದರು?
ಉತ್ತರ ಪ್ರದೇಶದ ಹತ್ರಾಸ್ ಪ್ರವೇಶಿಸುತ್ತಿದ್ದ ಸಂದರ್ಭ ಗಡಿಯಲ್ಲೇ ಟಿಎಂಸಿ ಸಂಸದ ದೆರೆಕ್ ಓಬ್ರಿಯನ್ ರನ್ನು ಗಡಿ ಪ್ರದೇಶದಲ್ಲೇ ಪೊಲೀಸರು ತಡೆ ಹಿಡಿದಿದ್ದಾರೆ. ಪೊಲೀಸರು ಮತ್ತು ಸಂಸದರ ನಡುವಿನ ವಾಗ್ವಾದದ ಸಂದರ್ಭದಲ್ಲಿ ಪೊಲೀಸರು ಸಂಸದರನ್ನು ಹಿಂದಕ್ಕೆ ತಳ್ಳಿದ್ದಾರೆ. ಈ ವೇಳೆ ಸಂಸದರು ನೆಲಕ್ಕೆ ಬಿದ್ದಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ಘಟನೆಗೆ ಹಲವು ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪೊಲೀಸರಿಂದ ಟಿಎಂಸಿ ಸಂಸದೆ ಮೇಲೆ ಹಲ್ಲೆ
"ಹತ್ರಾಸ್ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತಾಪ ಸೂಚಿಸಿ, ಕುಟುಂಬಕ್ಕೆ ಧೈರ್ಯ ತುಂಬಿ ಬರುವಂತೆ ನಮ್ಮ ನಾಯಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮನ್ನು ಕಳುಹಿಸಿ ಕೊಟ್ಟಿದ್ದರು. ಆದರೆ ಹತ್ರಾಸ್ ಪ್ರವೇಶಕ್ಕೂ ಮೊದಲೇ ಉತ್ತರ ಪ್ರದೇಶ ಪೊಲೀಸರು ನಮ್ಮನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಮಹಿಳಾ ಪೊಲೀಸರು ನಮ್ಮ ಬಟ್ಟೆ ಹರಿಯುವಂತೆ ಹಿಡಿದು ಎಳೆದಾಡಿದ್ದಾರೆ. ಪೊಲೀಸರು ಟಿಎಂಸಿ ಸಂಸದೆ ಪ್ರತಿಮಾ ಮಂಡಲ್ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಪೊಲೀಸರ ಈ ವರ್ತನೆಯು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಟಿಎಂಸಿ ನಾಯಕಿ ಮಮತಾ ಠಾಕೂರ್ ತಿಳಿಸಿದ್ದಾರೆ.
"ಶಾಂತಿಯುತವಾಗಿ ಭೇಟಿಗೆ ತೆರಳುತ್ತಿದ್ದದ್ದು ತಪ್ಪಾ?"
ನಾವು ಶಾಂತಿಯುತವಾಗಿ ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡುವುದಕ್ಕೆ ತೆರಳುತ್ತಿದ್ದೆವು. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಶಿಷ್ಟಾಚಾರವನ್ನು ಸಹ ಪಾಲನೆ ಮಾಡಿಕೊಂಡೇ ನಾವು ಹತ್ರಾಸ್ ಗೆ ತೆರಳುತ್ತಿದ್ದೆವು. ಆದರೆ ಪೊಲೀಸರು ನಮ್ಮನ್ನು ತಡೆಯುವುದಕ್ಕೆ ಕಾರಣವಾದರೂ ಏನು ಎಂದು ಟಿಎಂಸಿ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ಇಂದು ಓಬ್ರಿಯನ್, ನಿನ್ನೆ ರಾಹುಲ್ ಗಾಂಧಿ
ಗುರುವಾರ ಕೂಡಾ ಇಂಥದ್ದೇ ಘಟನೆ ಹತ್ರಾಸ್ ನಲ್ಲಿ ನಡೆದಿತ್ತು. ಸಂತ್ರಸ್ತೆಯ ಕುಟುಂಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯರನ್ನು ಉತ್ತರ ಪ್ರದೇಶ ಪೊಲೀಸರು ಗೌತಮ್ ಬುದ್ಧ ನಗರದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ತಡೆದು ಬಂಧಿಸಿದ್ದರು. ಅದಾದ ಬಳಿಕ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.