ಶೀಘ್ರದಲ್ಲೇ ಅಯೋಧ್ಯಾ ತೀರ್ಪು: ಸಾಮಾಜಿಕ ಮಾಧ್ಯಮದ ಮೇಲೂ ನಿರ್ಬಂಧ
ಲಕ್ನೋ, ನವೆಂಬರ್ 6: ಉತ್ತರ ಪ್ರದೇಶದ ಅಯೋಧ್ಯಾದಲ್ಲಿನ ರಾಮಮಂದಿರ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ನ.17ಕ್ಕೂ ಮುನ್ನ ತನ್ನ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ನ.17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತರಾಗಲಿದ್ದು, ಅದಕ್ಕೂ ಮೊದಲೇ ಈ ಮಹತ್ವದ ತೀರ್ಪು ಪ್ರಕಟವಾಗಲಿದೆ. ತೀರ್ಪಿನ ಹಿನ್ನೆಲೆಯಲ್ಲಿ ಸಮುದಾಯಗಳು, ಸಂಘಟನೆಗಳ ನಡುವೆ ಘರ್ಷಣೆಗಳು ಉಂಟಾಗುವ ಅಪಾಯ ಇರುವುದರಿಂದ ಬಿಗಿ ಬಂದೋಬಸ್ತ್ಗೆ ತಯಾರಿ ನಡೆಸಲಾಗಿದೆ.
ಈ ನಡುವೆ ಅಯೋಧ್ಯಾ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದ ಉಗ್ರರು ಉತ್ತರ ಪ್ರದೇಶದೊಳಗೆ ನುಗ್ಗಿದ್ದು, ಅಯೋಧ್ಯಾವನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
"ನೇಪಾಳದಿಂದ ನುಸುಳಿ ಬಂದ ಪಾಕ್ ಉಗ್ರರಿಂದ ಆಯೋಧ್ಯೆಗೆ ಅಪಾಯ"
ಆದರೆ ಈ ರೀತಿಯ ಎಚ್ಚರಿಕೆ ಬಂದಿದೆ ಎಂಬ ಸುದ್ದಿಯನ್ನು ಉತ್ತರ ಪ್ರದೇಶದ ಡಿಜಿಪಿ ಓಪಿ ಸಿಂಗ್ ನಿರಾಕರಿಸಿದ್ದಾರೆ. 'ಉತ್ತರ ಪ್ರದೇಶಕ್ಕೆ ಏಳು ಮಂದಿ ಶಂಕಿತ ಉಗ್ರರು ನುಸುಳಿದ್ದಾರೆ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ. ಅವು ಸಾಮಾನ್ಯ ಮಾಹಿತಿಗಳಾಗಿವೆ. ನಾವು ಜಾಗ್ರತೆ ವಹಿಸಿದ್ದೇವೆ. ಪ್ರತಿ ಚಟುವಟಿಕೆಗಳ ಮೇಲೆಯೂ ತೀವ್ರ ಕಟ್ಟೆಚ್ಚರ ವಹಿಸಿದ್ದೇವೆ' ಎಂದು ತಿಳಿಸಿದ್ದಾರೆ.
ನೇಪಾಳದ ಮೂಲಕ ಉಗ್ರರ ಪ್ರವೇಶ
ನೇಪಾಳದ ಮೂಲಕ ಏಳು ಉಗ್ರರು ಉತ್ತರ ಪ್ರದೇಶ ಪ್ರವೇಶಿಸಿದ್ದಾರೆ. ಅವರೀಗ ಅಯೋಧ್ಯಾ, ಫೈಜಾಬಾದ್ ಮತ್ತು ಗೋರಖ್ಪುರಗಳಲ್ಲಿ ಅಡಗಿದ್ದಾರೆ ಎಂದು ಹೇಳಲಾಗಿದೆ. ಏಳು ಮಂದಿಯಲ್ಲಿ ಐವರನ್ನು ಗುರುತಿಸಲಾಗಿದ್ದು, ಮೊಹಮ್ಮದ್ ಯಾಕೂಬ್, ಅಬು ಹಮ್ಜಾ, ಮೊಹಮ್ಮದ್ ಶಹಬಾಜ್, ನಿಸಾರ್ ಅಹ್ಮದ್ ಮತ್ತು ಮೊಹಮದ್ ಖುಯಾಮಿ ಚೌಧರಿ ಎಂದು ಹೆಸರಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ಅಯೋಧ್ಯಾ ಪ್ರಕರಣದ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಪರ-ವಿರೋಧ ಅಭಿಪ್ರಾಯಗಳ ಮೇಲೆ ಕೂಡ ಹದ್ದಿನ ಕಣ್ಣಿಡಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ. ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಯಾವುದೇ ಬರಹಗಳನ್ನು ಪ್ರಕಟಿಸಿದರೆ ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ ಎಂದು ಸೂಚನೆ ಹೊರಡಿಸಿದೆ.
ಬಾಬ್ರಿ ಮಸೀದಿ ವಿವಾದಕ್ಕೆ ಪರಿಹಾರ ರಾಜೀವ್ ಗಾಂಧಿ ಕೈಯಲ್ಲಿತ್ತು: ಒವೈಸಿ
ಎನ್ಎಸ್ಎ ಅಡಿ ಕ್ರಮ
'ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಯಾವುದೇ ಸಂದರ್ಭದಲ್ಲಿಯೂ ಯಾವುದೇ ವ್ಯಕ್ತಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮ ಗುಪ್ತಚರ ಯಂತ್ರ ಚುರುಕಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕದಡಲು ಪ್ರಯತ್ನಿಸುವ ಅಂಶಗಳ ವಿರುದ್ಧ ಅಗತ್ಯಬಿದ್ದರೆ ಎನ್ಎಸ್ಎ ಅಡಿ ಕ್ರಮ ತೆಗೆದುಕೊಳ್ಳಲು ಯಾವ ಮುಲಾಜೂ ನೋಡುವುದಿಲ್ಲ' ಎಂದು ಓಪಿ ಸಿಂಗ್ ತಿಳಿಸಿದ್ದಾರೆ.
ವಿವಿಧ ನಿರ್ಬಂಧಗಳ ಜಾರಿ
ಅಯೋಧ್ಯಾ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚರ್ಚಾ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ ಎಲ್ಲ ಕರೆಗಳನ್ನೂ ಮುದ್ರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತದೆ. ಕಲ್ಲು ಮತ್ತು ಇಟ್ಟಿಗೆಗಳ ಸಂಗ್ರಹವನ್ನು ನಿಷೇಧಿಸಲಾಗಿದೆ. ಸೀಮೆಎಣ್ಣೆ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಯೋಧ್ಯಾದಲ್ಲಿ ಯಾವುದೇ ಸಮಾರಂಭ, ಜಾಥಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧ ಹೇರಲಾಗಿದೆ.
ನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ಹೊರಬೀಳಲಿರುವ ಐತಿಹಾಸಿಕ ತೀರ್ಪುಗಳು
ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ
ಅಯೋಧ್ಯಾ ಭೂ ವಿವಾದ ಪ್ರಕರಣದ ಕುರಿತಾದ ಸಾಮಾಜಿಕ ಮಾಧ್ಯಮಗಳ ಸಂದೇಶಗಳು ಹಾಗೂ ಪೋಸ್ಟರ್ಗಳು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಂಭವ ಇರುವುದರಿಂದ ಅವುಗಳ ಮೇಲೆ ನಿರ್ಬಂಧ ವಿಧಿಸಿ ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ನಿರ್ದೇಶನ ಹೊರಡಿಸಿದ್ದಾರೆ. ಈ ನಿರ್ಬಂಧವು 2019ರ ಡಿಸೆಂಬರ್ 28ರವರೆಗೂ ಜಾರಿಯಲ್ಲಿ ಇರಲಿದೆ.
ಶಾಂತಿ ಕಾಪಾಡಲು ಸಂಘಟನೆಗಳ ಮನವಿ
ದೇಶದಾದ್ಯಂತ ಶಾಂತಿ ಕಾಪಾಡುವ ಸಂಬಂಧ ಬಿಜೆಪಿ, ಆರೆಸ್ಸೆಸ್ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಸಂಘಟನೆಗಳು ಮಂಗಳವಾರ ಸಭೆ ನಡೆಸಿದ್ದು, ಯಾವುದೇ ರೀತಿಯ ತೀರ್ಪು ಪ್ರಕಟವಾದರೂ ಸೌಹಾರ್ದತೆ ಕಾಪಾಡುವಂತೆ ತಮ್ಮ ಸಮುದಾಯಗಳಿಗೆ ಮನವಿ ಮಾಡಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಜಮಾತ್ ಇ ಇಸ್ಲಾಂ ಹಿಂದಿ ಸಂಘಟನೆಗಳು, ಅಯೋಧ್ಯಾ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸಿ ಸೌಹಾರ್ದದಿಂದ ಒಪ್ಪಿಕೊಳ್ಳುವಂತೆ ಜನರಿಗೆ ಮನವಿ ಮಾಡಿವೆ.