"ದೇಶದ ಲಸಿಕೆ ಮೇಲೆ ನಂಬಿಕೆ ಇರದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ"
ಲಖ್ನೋ, ಜನವರಿ 13: ದೇಶದಲ್ಲಿ ಅಭಿವೃದ್ಧಿಯಾಗಿರುವ ಕೊರೊನಾ ಲಸಿಕೆಗಳಲ್ಲಿ ನಂಬಿಕೆ ಇಲ್ಲದಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿವಾದ ಹುಟ್ಟು ಹಾಕಿದ್ದಾರೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸಾರ್ಧಾನದ ಶಾಸಕ ಸಂಗೀತ್ ಸಿಂಗ್ ಸೋಮ್ ಮುಸ್ಲಿಮರ ಕುರಿತು ಈ ಹೇಳಿಕೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಈ ಬೆನ್ನಲ್ಲೇ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಮುಂದೆ ಓದಿ...
"ನಂಬಿಕೆ ಇಲ್ಲದವರು ಪಾಕಿಸ್ತಾನಕ್ಕೆ ಹೋಗಲಿ"
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾಗೂ ಭಾರತದ ವಿಜ್ಞಾನಿಗಳ ಮೇಲೆ ನಂಬಿಕೆ ಇಡದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ. ಇಲ್ಲಿನ ಲಸಿಕೆಗಳನ್ನು ಪಡೆದುಕೊಳ್ಳಲು ಇಷ್ಟವಿಲ್ಲದವರು ಪಾಕ್ ಗೆ ಹೋಗಲಿ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿ ಜ್ವರ ಹರಡುತ್ತಿದೆ: ಬಿಜೆಪಿ ಶಾಸಕ ಆರೋಪ
"ಅವರ ಆತ್ಮ ಪಾಕಿಸ್ತಾನದಲ್ಲಿದೆ"
ನಮ್ಮ ದೇಶ, ಇಲ್ಲಿನ ವಿಜ್ಞಾನಿಗಳು, ಇಲ್ಲಿನ ಪೊಲೀಸರು ಹಾಗೂ ಪ್ರಧಾನಿ ಮೋದಿಯವರನ್ನು ಕೆಲವು ಮುಸ್ಲಿಮರು ನಂಬದೇ ಇರುವುದು ದುರದೃಷ್ಟಕರ. ಅವರ ಆತ್ಮ ಪಾಕಿಸ್ತಾನಕ್ಕೆ ಸೇರಿದೆ ಎಂಬಂತೆ ಇದ್ದಾರೆ. ಅಂಥವರೆಲ್ಲಾ ಪಾಕಿಸ್ತಾನಕ್ಕೆ ಹೋಗಲಿ, ಅದು ಬಿಟ್ಟು ನಮ್ಮ ವಿಜ್ಞಾನಿಗಳ ಕೆಲಸದ ಮೇಲೆ ಅನುಮಾನ ಪಡುವುದು ಬೇಡ ಎಂದಿದ್ದಾರೆ.
ಲಸಿಕೆಯಲ್ಲಿ ಹಂದಿ ಜೆಲಾಟಿನ್ ಬಳಕೆ ಬಗ್ಗೆ ಆಕ್ಷೇಪ
ಕೊರೊನಾ ವಿರುದ್ಧ ಹೋರಾಡಲು ಅಭಿವೃದ್ಧಿಗೊಂಡಿರುವ ಲಸಿಕೆಯಲ್ಲಿ ಹಂದಿಯ ಜೆಲಾಟಿನ್ ಅಂಶ ಬಳಸಲಾಗುತ್ತದೆ ಎಂಬ ಸಂಗತಿಯಿಂದ ಕೆಲವು ಮುಸ್ಲಿಂ ಸಮುದಾಯಗಳು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದವು. ಇದು ಧರ್ಮದ ವಿರುದ್ಧ ಎಂದು ಹೇಳಿದ್ದವು. ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜನವರಿ 16ರಿಂದ ಎಲ್ಲೆಡೆ ಲಸಿಕೆ
ಜನವರಿ 16ರಿಂದ ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದು, ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಹಲವು ರಾಜ್ಯಗಳಿಗೆ ಲಸಿಕೆಗಳನ್ನು ವಿತರಣೆ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ.