ಉನ್ನಾವೊ ಯುವತಿಗೆ ಆದ ಗತಿ ನಿನಗೂ ಆಗುತ್ತೆ; ಬೆದರಿಕೆ
ಲಕ್ನೋ, ಡಿಸೆಂಬರ್ 12: ಉತ್ತರ ಪ್ರದೇಶದ ಉನ್ನಾವೊ ಯುವತಿ ಅತ್ಯಾಚಾರ ಹಾಗೂ ಕೊಲೆಯ ನಂತರ ಅಲ್ಲಿನ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ, ಯುಪಿ ದುರುಳರ ಅಟ್ಟಹಾಸ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಇದರಿಂದ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದು ಅಡ್ಡಾಡುವಂತಾಗಿದೆ.
ಹೌದು, ಕಾಮುಕನೊಬ್ಬ ಅಪ್ರಾಪ್ತೆಯೊಬ್ಬಳಿಗೆ 'ನಿನ್ನನ್ನು ಉನ್ನಾವೊ ಯುವತಿಯ ರೀತಿಯಲ್ಲಿ ಮುಗಿಸುತ್ತೇವೆ' ಎಂದು ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆ ನೌಬಸ್ತಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನೌಬಸ್ತಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ದೀಪಕ್ ಜಾದವಾನ್ ಎನ್ನುವ ಸಂತ್ರಸ್ತೆ ಎನ್ನಲಾದ ಬಾಲಕಿ ಮೇಲೆ ಅತ್ಯಚಾರ ನಡೆಸಿದ್ದಾನೆ ಎಂದು ವರದಿಯಾಗಿದೆ. ಅಲ್ಲದೇ, ದೀಪಕ್ ಜಾದವಾನ್ ಬಾಲಕಿಯ ಮನೆಗೆ ನುಗ್ಗಿ ಯುವತಿಗೆ ಹಿಂಸೆ ನೀಡಿದ್ದಲ್ಲದೇ, ಮನೆಯವರಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದರಿಂದ ಕಂಗಾಲದ ಬಾಲಕಿ, ದೈರ್ಯದಿಂದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದಾಗ ಬೆನ್ನತ್ತಿ, 'ಪೊಲೀಸರಿಗೆ ದೂರು ನೀಡಿದರೆ, ಉನ್ನಾವ ಯುವತಿಗೆ ಆದ ಗತಿಯೇ ನೀನಗೂ ಆಗುತ್ತದೆ' ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಸಾಯುವ ಮುನ್ನಾ ಅತ್ಯಾಚಾರ ಸಂತ್ರಸ್ತೆ ಹೇಳಿದ ಕೊನೆಯ ಮಾತು
ಭಯದಲ್ಲಿ ಕುಟುಂಬ
ಆದರೆ, ದೀಪಕ ಜಾದವಾನ್ ನ ಬೆದರಿಕೆಗೆ ಬಗ್ಗದೇ ಬಾಲಕಿ ಈಗ ನೌಬಸ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಕುರಿತು ಅವಳು ಸಾಮಾಜಿಕ ಜಾಲತಾಣಗಳಲ್ಲಿ ದೀಪಕ ಜಾದವಾನ್ ಮೇಲೆ ಆರೋಪ ಮಾಡಿ ವಿಡಿಯೋ ಒಂದನ್ನು ಹಾಕಿದ್ದಾಳೆ. ಇದೀಗ ಬಾಲಕಿ ಹಾಗೂ ಅವಳ ಮನೆಯವರು ಸಂಪೂರ್ಣ ಭಯದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಏನಂದ್ರು?
ಇನ್ನು ಈ ಕುರಿತು ನೌಬಸ್ತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಕಾನ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಗುಪ್ತಾ, ಸಂತ್ರಸ್ತ ಬಾಲಕಿ ಅತ್ಯಾಚಾರ ಹಾಗೂ ಪ್ರಾಣ ಬೆದರಿಕೆ ದೂರು ನೀಡಿದ್ದಾಳೆ. ದೀಪಕ್ ಜಾದವಾನ್ ಕೂಡ ಪ್ರತಿ ದೂರು ದಾಖಲಿಸಿದ್ದಾನೆ. ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಬಾಲಕಿಗೆ ಹಾಗೂ ಅವಳ ಕುಟುಂಬಕ್ಕೆ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಉನ್ನಾವ ಘಟನೆ ಏನು?
2017 ರಲ್ಲಿ ಉನ್ನಾವದ 17 ವರ್ಷದ ಬಾಲಕಿಯ ಮೇಲೆ ಬೀಕರ ಅತ್ಯಾಚಾರ ಮಾಡಲಾಗಿತ್ತು. ದೂರು ನೀಡಿದ್ದರೂ ಆರೋಪಿಗಳ ಮೇಲೆ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆ ನಂತರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಹಾರ ಹಾಗೂ ಇತರ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ, ಆರೋಪಿಗಳು ಸಂತ್ರಸ್ತೆಗೆ ನಿರಂತರ ಕಿರುಕುಳ ನೀಡಿ, ಕಳೆದ ವಾರ ಬೇಲ್ ಮೇಲೆ ಹೊರಗೆ ಬಂದು ಅವಳ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದರು.