130 ದಿನಗಳ ಚಿಕಿತ್ಸೆ ಸಫಲ: ಉತ್ತರ ಪ್ರದೇಶದಲ್ಲಿ ಕೊವಿಡ್-19 ಸೋಂಕಿತ ಗುಣಮುಖ!
ಲಕ್ನೋ, ಸಪ್ಟೆಂಬರ್ 16: ಕೊರೊನಾವೈರಸ್ ಸೋಂಕು ತಗುಲಿದ ತಕ್ಷಣ ಆಘಾತಕ್ಕೊಳಗಾಗುವ ಜನರಲ್ಲಿ ಇದೊಂದು ವರದಿಯು ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಮಾರಕ ಸೋಂಕಿನ ವಿರುದ್ಧ ಹೋರಾಡಿದ ರೋಗಿಯೊಬ್ಬರು ಆರು ತಿಂಗಳ ನಂತರದಲ್ಲಿ ಗುಣಮುಖರಾಗಿ ಮನೆಗೆ ವಾಪಸ್ಸಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಕಳೆದ ಏಪ್ರಿಲ್ 28ರಂದು ವಿಶ್ವಾಸ್ ಸೈನಿ ಎಂಬ ವ್ಯಕ್ತಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಅದಾಗಿ 130 ದಿನಗಳ ನಿರಂತರ ಚಿಕಿತ್ಸೆ ನಂತರದ ವ್ಯಕ್ತಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಲಸಿಕೆ ಲೆಕ್ಕಾಚಾರ: ಭಾರತದಲ್ಲಿ 76.49 ಕೋಟಿ ಮಂದಿಗೆ ಕೊವಿಡ್-19 ಲಸಿಕೆ!
ಕೊರೊನಾವೈರಸ್ ಸೋಂಕು ಅಂಟಿಕೊಂಡರೆ ಮುಗಿಯಿತು ಎಂದುಕೊಳ್ಳುವ ಜನರಲ್ಲಿ ಇಂಥ ಕೆಲವು ವರದಿಗಳು ಸ್ಪೂರ್ತಿಯಾಗಲಿವೆ. ಭಾರತದ ಮಟ್ಟಿಗೆ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂಥ ಅಂಕಿ-ಸಂಖ್ಯೆಗಳು ಜನರಲ್ಲಿ ಧೈರ್ಯ ಹೆಚ್ಚಿಸಲಿವೆ. ಆದರೆ ಕೊರೊನಾವೈರಸ್ ನಿಯಮಗಳ ಪಾಲನೆ ಮತ್ತು ಮಾರ್ಗಸೂಚಿಗಳ ಕುರಿತು ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ.
ಕೊವಿಡ್-19 ವಿರುದ್ಧ 130 ದಿನ ಹೋರಾಡಿದ ರೋಗಿ
"ವಿಶ್ವಾಸ್ ಸೈನಿ ಎಂಬುವವರಿಗೆ ಏಪ್ರಿಲ್ 28ರಂದು ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಆರಂಭಿಕ ಹಂತದಲ್ಲಿ ಅವರಿಗೆ ಮನೆಯಲ್ಲಿಯೇ ಇರಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಅವರಲ್ಲಿ ಆಮ್ಲಜನಕ ಪ್ರಮಾಣ ಕೇವಲ 16ಕ್ಕೆ ತಲುಪಿದ ಹಿನ್ನೆಲೆ ಕನಿಷ್ಠ ಒಂದು ತಿಂಗಳ ಅವಧಿವರೆಗೂ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು," ಎಂದು ನೂತೇಮಾ ಆಸ್ಪತ್ರೆ ವೈದ್ಯ ಡಾ. ಅವನೀತ್ ರಾಣಾ ಹೇಳಿದ್ದಾರೆ.
ರೋಗಿಯ ಪ್ರಾಣ ಉಳಿಸಿದ್ದೇ ಅವರ ಇಚ್ಛಾಶಕ್ತಿ
ಕೊವಿಡ್-19 ಸೋಂಕಿನಿಂದ ತೀವ್ರವಾಗಿ ಅಸ್ವಸ್ಥಗೊಂಡ ಪರಿಸ್ಥಿತಿಯಲ್ಲೂ ಸಹ ವಿಶ್ವಾಸ್ ಸೈನಿ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಅವರ ಇಚ್ಛಾಶಕ್ತಿಯಿಂದಾಗಿಯೇ ಕೊರೊನಾವೈರಸ್ ರೋಗದ ವಿರುದ್ಧ 130 ದಿನಗಳ ಸುದೀರ್ಘ ಹೋರಾಟದ ನಂತರದಲ್ಲಿಯೂ ಬದುಕಿ ಉಳಿಯಲು ಸಾಧ್ಯವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ವೈದ್ಯರ ಪ್ರಕಾರ, "ವಿಶ್ವಾಸ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದೆ. ಕೆಲವು ಬಾರಿ ರೋಗಿಗೆ 4 ಗಂಟೆಗೂ ಹೆಚ್ಚು ಅವಧಿಗೆ ಆಕ್ಸಿಜನ್ ಸಿಲಿಂಡರ್ ಅವಶ್ಯವಾಗಿ ಬೇಕಾಗಿರುತ್ತದೆ. ಆದರೆ ಪ್ರಸ್ತುತ ವಿಶ್ವಾಸ್ ಸೈನಿ ಚಿಕಿತ್ಸೆಗೆ ಉಸಿರಾಟಕ್ಕೆ ಆಮ್ಲಜನಕ ಸಿಲಿಂಡರ್ ಅವಶ್ಯಕತೆಯಿಲ್ಲ," ಎಂದಿದ್ದಾರೆ.
130 ದಿನಗಳ ಹೋರಾಟದ ಬಗ್ಗೆ ವಿಶ್ವಾಸ್ ಸೈನಿ ಮಾತು
ಕೊರೊನಾವೈರಸ್ ಸೋಂಕಿನ ವಿರುದ್ಧ 130 ದಿನಗಳವರೆಗೂ ಹೋರಾಡಿ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ವಿಶ್ವಾಸ್ ಸೈನಿ ಮಾತನಾಡಿದ್ದಾರೆ. "ನಾನು ಇಷ್ಟೊಂದು ದಿನಗಳ ನಂತರದಲ್ಲಿ ಮನೆಗೆ ವಾಪಸ್ ಹೋಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆದರೆ ಈ ಹಿಂದೆ ಆಸ್ಪತ್ರೆಯಲ್ಲಿ ಕಳೆದ 130 ದಿನಗಳ ಬಗ್ಗೆ ಅವರು ಸಾಕಷ್ಟು ಆತಂಕವಾಗುತ್ತದೆ. ಕೊವಿಡ್-19 ಸೋಂಕಿನಿಂದ ನನ್ನ ಸುತ್ತಮುತ್ತಲಿನ ಜನರೇ ನಿತ್ಯ ಪ್ರಾಣ ಬಿಡುತ್ತಿರುವುದನ್ನು ಕಂಡು ಸಾಕಷ್ಟು ಭಯವಾಗುತ್ತಿತ್ತು. ಆದರೆ ನನಗೆ ವೈದ್ಯರು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುವಂತೆ ಪ್ರೋತ್ಸಾಹ ತುಂಬುತ್ತಿದ್ದರು," ಎಂದು ಹೇಳಿದ್ದಾರೆ.
ಕಳೆದೊಂದು ದಿನದಲ್ಲಿ 30,570 ಮಂದಿಗೆ ಕೊವಿಡ್-19
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,570 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 38,303 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 431 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,33,47,325ಕ್ಕೆ ಏರಿಕೆಯಾಗಿದೆ. ಇದುವರೆಗೂ 3,25,60,474 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 4,43,928ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 3,42,923 ಸಕ್ರಿಯ ಪ್ರಕರಣಗಳು ವರದಿಯಾಗಿವೆ.