ಆರ್ಎಸ್ಎಸ್, ವಿಎಚ್ಪಿ ವಿರೋಧ: ಜನಸಂಖ್ಯೆ ಮಸೂದೆ ಮರುಪರಿಶೀಲನೆಗೆ ಮುಂದಾದ ಯುಪಿ ಸರ್ಕಾರ
ಲಕ್ನೋ, ಜು.21: ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಇತರ ಕೇಸರಿ ಸಂಘಟನೆಗಳ ಆಕ್ಷೇಪಣೆಯ ನಂತರ ಉತ್ತರ ಪ್ರದೇಶ ಸರ್ಕಾರ ಹೊಸ ಜನಸಂಖ್ಯಾ ಮಸೂದೆಯ ಕರಡಿನಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ, ಒಂದು ಮಗುವನ್ನು ಹೊಂದಿರುವ ದಂಪತಿಗಳಿಗೆ ನೀಡುವ ಪ್ರೋತ್ಸಾಹ ಧನಗಳನ್ನು ರದ್ದುಗೊಳಿಸಲು ಸರ್ಕಾರ ಯೋಜಿಸಿದೆ. ಇದು ಪ್ರಸ್ತುತ 2021 ರ ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆಯ ಕರಡಿನ ಭಾಗವಾಗಿದೆ.
ಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು: ಸ್ಥಾನಕ್ಕೆ ಕುತ್ತಾಗುತ್ತಾ ಹೊಸ ಜನಸಂಖ್ಯಾ ನೀತಿ
ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅನರ್ಹರನ್ನಾಗಿ ಮಾಡಲು ಮತ್ತು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಈ ಮಸೂದೆಯು ಅವಕಾಶ ನೀಡುತ್ತದೆ.
ಆದರೆ ಈ ಮಸೂದೆ ಪ್ರಕಾರ ಇಬ್ಬರು ಮಕ್ಕಳನ್ನು ಹೊಂದಿರುವವರು ಎರಡು ಹೆಚ್ಚುವರಿ ಸಂಬಳ ಏರಿಕೆ ಹಾಗೂ ಮನೆ ಖರೀದಿಸಲು ಸಹಾಯಧನ ಮತ್ತು ಯುಟಿಲಿಟಿ ಬಿಲ್ಗಳಲ್ಲಿ ರಿಯಾಯಿತಿ ಪಡೆಯಲಿದ್ದಾರೆ. ಹಾಗೆಯೇ ಒಂದು ಮಗು ಹೊಂದಿರುವ ದಂಪತಿಗಳು ನಾಲ್ಕು ಹೆಚ್ಚುವರಿ ಸಂಬಳ ಏರಿಕೆ ಪಡೆಯಲಿದ್ದಾರೆ. ಹಾಗೆಯೇ ಮಗು ಪದವಿವರೆಗೆ ಉಚಿತ ಶಿಕ್ಷಣ ಮತ್ತು ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲಿದೆ ಎಂದು ಈ ಮಸೂದೆ ಹೇಳುತ್ತದೆ.
ಆದರೆ ಈ ಜನಸಂಖ್ಯಯಾ ನಿಯಂತ್ರಣ ಮಸೂದೆಯ ಹಲವು ನಿಬಂಧನೆಗಳ ಬಗ್ಗೆ ವಿರೋಧ ಪಕ್ಷಗಳ ಜೊತೆಗೆ, ಹಲವಾರು ಕೇಸರಿ ಸಂಸ್ಥೆಗಳು ಮತ್ತು ಆರ್ಎಸ್ಎಸ್ ವಿರೋಧ ವ್ಯಕ್ತಪಡಿಸಿದೆ. ಹಾಗೆಯೇ ಹಲವು ಅಂಶಗಳ ಬದಲಾವಣೆಗೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದೆ.
ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?
ಆರ್ಎಸ್ಎಸ್ ಹೊಸ ಜನಸಂಖ್ಯಾ ನೀತಿಯ ಬಗ್ಗೆ ಬಿಜೆಪಿಗೆ ಎಚ್ಚರಿಕೆ ನೀಡಿದೆ. ಹಾಗೆಯೇ ಕೆಲವು ತಿದ್ದುಪಡಿಗಳನ್ನು ಸೂಚಿಸಿದೆ. ವಿಎಚ್ಪಿ ಈ ಹಿಂದೆ ಯುಪಿ ಸರ್ಕಾರವನ್ನು ಹೊಸ ನೀತಿಯನ್ನು ರದ್ದುಗೊಳಿಸುವಂತೆ ಅಥವಾ ಹೊಸದನ್ನು ತಿದ್ದುಪಡಿಗಳೊಂದಿಗೆ ಪರಿಚಯಿಸುವಂತೆ ಕೇಳಿಕೊಂಡಿದೆ. ಹಾಗೆಯೇ ಈ ನೀತಿ 'ಹಿಂದೂಗಳಿಗೆ' ವಿರುದ್ಧವಾಗಿದೆ ಎಂದು ಹೇಳಿದೆ.
"ನಾವು ಸಾರ್ವಜನಿಕರ ಸದಸ್ಯರು ಮತ್ತು ಕಾನೂನು ತಜ್ಞರಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಿದ್ದೇವೆ. ಪ್ರಸ್ತುತ ಅವುಗಳನ್ನು ಪರಿಶೀಲಿಸುತ್ತಿದ್ದೇವೆ. ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಕರಡು ಮಸೂದೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗುವುದು," ಎಂದು ರಾಜ್ಯದ ಹಿರಿಯ ಸರ್ಕಾರದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸರ್ಕಾರ ಈ ಮಸೂದೆಯನ್ನು ಜಾರಿಗೆ ತರಲು ಮುಂದಾದರೂ ಈ ಮಸೂದೆಯಿಂದಾಗಿ ರಾಜ್ಯ ಬಿಜೆಪಿಗೆಯೇ ದೊಡ್ಡ ಅಪಾಯ ಕಾದಿತ್ತು. ವಿಪರ್ಯಾಸವೆಂದರೆ, 2021 ರ ಕರಡು ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆಯ ಈ ನಿಬಂಧನೆಯ ಪ್ರಕಾರ ಆಡಳಿತಾರೂಢ ಬಿಜೆಪಿಯ ಅರ್ಧದಷ್ಟು ಶಾಸಕರು ಮುಂದಿನ ರಾಜ್ಯದ ವಿಧಾನಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅನರ್ಹರಾಗಲಿದ್ದಾರೆ.
ಉತ್ತರಪ್ರದೇಶ ರಾಜ್ಯ ವಿಧಾನಸಭೆಯು ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ 397 ಶಾಸಕರ ಜೀವನ ಹಾಗೂ ರಾಜಕೀಯ ಹಿನ್ನೆಲೆಯನ್ನು ಅದರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಪೈಕಿ 304 ಆಡಳಿತ ಪಕ್ಷದ ಶಾಸಕರು ಆಗಿದ್ದಾರೆ. ಈ ಪೈಕಿ 152 ಮಂದಿ ಅಂದರೆ ನಿಖರವಾಗಿ ಅರ್ಧದಷ್ಟು ಶಾಸಕರು ಮೂರು ಅಥವಾ ಅದಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದಾರೆ.
ಬಿಜೆಪಿ ಶಾಸಕರ ಪೈಕಿ ಒಬ್ಬರಿಗೆ ಎಂಟು ಮಕ್ಕಳು ಇದ್ದಾರೆ. ಈ ಶಾಸಕ ಅತಿ ಹೆಚ್ಚು ಮಕ್ಕಳು ಹೊಂದಿರುವ ಬಿಜೆಪಿಯ ಶಾಸಕರಾಗಿದ್ದಾರೆ. ಮತ್ತೊಬ್ಬರಿಗೆ ಏಳು ಮಕ್ಕಳು ಇದ್ದಾರೆ. ಅದಲ್ಲದೇ ಎಂಟು ಶಾಸಕರಿಗೆ ತಲಾ ಆರು ಮಕ್ಕಳು ಇದ್ದಾರೆ. ಇನ್ನು 15 ಮಂದಿ ಶಾಸಕರು ತಲಾ ಐದು ಮಕ್ಕಳ ಪೋಷಕರಾಗಿದ್ದಾರೆ. ಆಡಳಿತ ಪಕ್ಷದ ಇನ್ನೂ 44 ಶಾಸಕರು ತಲಾ ನಾಲ್ಕು ಮಕ್ಕಳನ್ನು ಹೊಂದಿದ್ದರೆ, 83 ಮಂದಿಗೆ ತಲಾ ಮೂರು ಮಕ್ಕಳಿದ್ದಾರೆ. ರಾಜ್ಯ ವಿಧಾನಸಭೆಗೆ ಉತ್ತರಪ್ರದೇಶದ ಈ ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಅನ್ವಯ ಮಾಡಿದರೆ, ಈ ಎಲ್ಲಾ ಶಾಸಕರು ಅನರ್ಹರಾಗುತ್ತಾರೆ.
(ಒನ್ಇಂಡಿಯಾ ಸುದ್ದಿ)
Recommended Video