ಉತ್ತರ ಪ್ರದೇಶದಲ್ಲಿ 72 ಗಂಟೆಯಲ್ಲೇ ಧಾರ್ಮಿಕ ಸ್ಥಳಗಳಲ್ಲಿನ 6031 ಧ್ವನಿವರ್ಧಕ ತೆರವು
ಲಕ್ನೋ, ಏಪ್ರಿಲ್ 28: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ದೇಶ ನೀಡುತ್ತಿದ್ದಂತೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಲ್ಲಿನ 6000ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ.
ಸಿಎಂ ಯೋಗಿ ನಿರ್ದೇಶನ ನೀಡಿದ 72 ಗಂಟೆಗಳಲ್ಲೇ 6,031 ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ಇದಲ್ಲದೆ, ನಿಗದಿತ ಡೆಸಿಬಲ್ ಮಟ್ಟಗಳಿಗೆ ಅನುಗುಣವಾಗಿ 30,000 ಧ್ವನಿವರ್ಧಕಗಳ ಪರಿಮಾಣವನ್ನು ಕಡಿಮೆ ಮಾಡಲಾಗಿದೆ.
ಆಜಾನ್ ಸದ್ದಿಗೆ ವಿರೋಧ; ಶಬ್ದ ಮಿತಿ ಎಷ್ಟಿರಬೇಕು? ಇಲ್ಲಿದೆ ವಿವರ
ಧಾರ್ಮಿಕ ಸ್ಥಳಗಳ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳ ಶಬ್ದವನ್ನು ನಿರ್ಬಂಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ ಹಿನ್ನೆಲೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಧಾರ್ಮಿಕ ಸ್ಥಳಗಳಲ್ಲಿ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಶನಿವಾರ ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ ಏಪ್ರಿಲ್ 30ರೊಳಗೆ ಜಿಲ್ಲೆಗಳಿಂದ ವರದಿಯನ್ನು ಕೋರಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ ತಿಳಿಸಿದ್ದಾರೆ.
ಅನಧಿಕೃತ ಧ್ವನಿವರ್ಧಕ ತೆರವಿಗೆ ಪೊಲೀಸರಿಗೆ ಸೂಚನೆ:
ಸ್ಥಳೀಯ ಮಟ್ಟದಲ್ಲಿ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಬೇಕು. ಆ ಮೂಲಕ ಧಾರ್ಮಿಕ ಮುಖಂಡರ ಸಹಕಾರದೊಂದಿಗೆ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ" ಎಂದು ಅವಸ್ತಿ ಹೇಳಿದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಸೋಮವಾರ ಮಾತನಾಡಿ, ಇಲ್ಲಿಯವರೆಗೆ 125 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಸುಮಾರು 17,000 ಜನರು ಅಂತಹ ಸಾಧನಗಳ ಪರಿಮಾಣವನ್ನು ಸ್ವತಃ ಕಡಿಮೆ ಮಾಡಿದ್ದಾರೆ ಎಂದರು.
ಅನುಮತಿ ಇಲ್ಲದೇ ಧಾರ್ಮಿಕ ಮೆರವಣಿಗೆಗೆ ಅವಕಾಶವಿಲ್ಲ:
ಕಳೆದ ವಾರ ಮುಖ್ಯಮಂತ್ರಿ ಆದಿತ್ಯನಾಥ್, ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಬಾರದು ಮತ್ತು ಧ್ವನಿವರ್ಧಕಗಳ ಬಳಕೆಯಿಂದ ಇತರರಿಗೆ ಅನಾನುಕೂಲವಾಗಬಾರದು ಎಂದು ನಿರ್ದೇಶನ ನೀಡಿದ್ದರು. ಮುಂದಿನ ತಿಂಗಳು ಈದ್ ಮತ್ತು ಅಕ್ಷಯ ತೃತೀಯ ಒಂದೇ ದಿನ ಬರುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಹಲವಾರು ಹಬ್ಬಗಳು ಸಾಲುಗಟ್ಟಲಿವೆ. ಈ ಹಿನ್ನೆಲೆ ಪೊಲೀಸರು ಹೆಚ್ಚು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಧ್ವನಿವರ್ಧಕದಿಂದ ಅನ್ಯರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ:
ಕಳೆದ ವಾರ ಹಿರಿಯ ಅಧಿಕಾರಿಗಳೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಸಿಎಂ ಹಲವು ಸೂಚನೆಗಳನ್ನು ನೀಡಿದ್ದರು. ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಧಾರ್ಮಿಕ ಸಿದ್ಧಾಂತದ ಪ್ರಕಾರ ಪೂಜಾ ವಿಧಾನವನ್ನು ಅನುಸರಿಸಲು ಸ್ವಾತಂತ್ರ್ಯವಿದೆ. "ಮೈಕ್ರೊಫೋನ್ಗಳನ್ನು ಬಳಸಬಹುದಾದರೂ, ಯಾವುದೇ ಆವರಣದಿಂದ ಧ್ವನಿ ಹೊರಬರದಂತೆ ನೋಡಿಕೊಳ್ಳಿ. ಬೇರೆಯವರು ಯಾವುದೇ ಸಮಸ್ಯೆ ಎದುರಿಸಬಾರದು. ಹೊಸ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಈದ್ನ ಭದ್ರತಾ ವ್ಯವಸ್ಥೆ:
ಇದರ ಮಧ್ಯೆ, ಈದ್ನ ಭದ್ರತಾ ವ್ಯವಸ್ಥೆಗಳ ಕುರಿತು ಮಾತನಾಡಿದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಲ್ವಿದಾ ನಮಾಜ್ ಅಂದರೆ ರಂಜಾನ್ ಕೊನೆಯ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸುವುದು ರಾಜ್ಯದ ಒಟ್ಟು 31,000 ಸ್ಥಳಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಸೂಕ್ಷ್ಮ ಜಿಲ್ಲೆಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಪಿಎಸಿ, ಕೇಂದ್ರ ಸಶಸ್ತ್ರ ಅರೆಸೇನಾ ಪಡೆ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಶಾಂತಿ ಸಮಿತಿಗಳ ಸಭೆಗಳನ್ನೂ ನಡೆಸಲಾಗಿದೆ ಎಂದು ಅವರು ಹೇಳಿದರು.