ಕೊರೊನಾ ಹಾಟ್ ಸ್ಪಾಟ್ ಗೆ ಮಸೀದಿ ಹೆಸರು: ಇದೇನಾ ನಿಮ್ಮ ಕಾರ್ಯವೈಖರಿ ಮಿ.ಯೋಗಿ ಆದಿತ್ಯನಾಥ್?
ಲಕ್ನೋ, ಮೇ 4: ಮುಖ್ಯಮಂತ್ರಿ ಆದಾಗಿನಿಂದ ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಯೋಗಿ ಆದಿತ್ಯನಾಥ್ ಸರಕಾರ, ಈಗ, ಮತ್ತೊಂದು ವಿವಾದಕಾರಿ ನಿರ್ಧಾರವನ್ನು ತೆಗೆದುಕೊಂಡು, ಅದಕ್ಕೆ, ವೃಥಾ ಸಮರ್ಥನೆ ನೀಡುವ ಕೆಲಸವನ್ನು ಮಾಡಿದೆ.
"ಕೊರೊನಾದ ಈ ಸಂಕಷ್ಟದ ವೇಳೆ, ಸಾರ್ವಜನಿಕರ ಪರವಾಗಿ ನಾವು ನಿಲ್ಲಬೇಕಾಗಿದೆ" ಎಂದು ಒಂದು ದಿನದ ಹಿಂದೆ ಹೇಳಿಕೆಯನ್ನು ನೀಡಿದ್ದ ಯೋಗಿ ಆದಿತ್ಯನಾಥ್ ಸರಕಾರ, ಈಗ, ಕೊರೊನಾ ಗೆ ಕೋಮು ಬಣ್ಣ ಹಚ್ಚುವ ಕೆಲಸಕ್ಕೆ ಮುಂದಾಗಿದೆಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಉತ್ತರ ಪ್ರದೇಶದ ಕೆಲವೊಂದು ಹಾಟ್ ಸ್ಪಾಟ್ ವಾರ್ಡ್ ಗಳಿಗೆ ಮಸೀದಿಯ ಹೆಸರನ್ನು ಇಟ್ಟು, ಸಾರ್ವಜನಿಕರ ಆಕ್ರೋಶಕ್ಕೆ ಯೋಗಿ ಸರಕಾರ ಗುರಿಯಾಗಿದೆ. "ಇದು ಉದ್ದೇಶಪೂರ್ವಕ ನಡೆಯಲ್ಲ" ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
"ಮಹಾರಾಷ್ಟ್ರದ ನಾಸಿಕ್ ನಿಂದ ವಿಶೇಷ ರೈಲು, ಲಕ್ನೋಗೆ ಬರಲಿದೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಾವು ಸಜ್ಜಾಗಿದ್ದೇವೆ. ಕೋವಿಡ್ 19 ಪರೀಕ್ಷೆಯಲ್ಲಿ ಅವರೆಲ್ಲಾ ನೆಗೆಟೀವ್ ಆದರೆ, ಅವರಿಗೆ ಉದ್ಯೋಗವನ್ನೂ ನೀಡಲಿದ್ದೇವೆ" ಎಂದು ಹೇಳಿದ್ದ ಯೋಗಿ ಸರಕಾರ, ಹಾಟ್ ಸ್ಪಾಟ್ ಗೆ ಮಸೀದಿಯ ಹೆಸರನ್ನು ಇಟ್ಟು ಎಡವಟ್ಟು ಮಾಡಿಕೊಂಡಿದೆ.
ಉತ್ತರಪ್ರದೇಶದ ಹದಿನೆಂಟು ಹಾಟ್ ಸ್ಪಾಟ್
ಉತ್ತರಪ್ರದೇಶದ ಹದಿನೆಂಟು ಹಾಟ್ ಸ್ಪಾಟ್ ಗಳ ಪೈಕಿ, ಎಂಟಕ್ಕೆ ರಾಜ್ಯದ ಅಧಿಕಾರಿಗಳು ಮಸೀದಿಯ ಹೆಸರನ್ನು ಇಟ್ಟಿದ್ದಾರೆ. ಇದು, ಸ್ವಾಭಾವಿಕವಾಗಿ ಅಲ್ಪಸಂಖ್ಯಾತರ ಮತ್ತು ಕಾಂಗ್ರೆಸ್ಸಿನ ಕೆಂಗಣ್ಣಿಗೆ ಗುರಿಯಾಗಿದೆ. ಪಾಸಿಟೀವ್ ಕೇಸ್ ಗಳು ಆ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರ, ಎನ್ನುವುದು ಅಲ್ಲಿನ ಅಧಿಕಾರಿಗಳ ಸ್ಪಷ್ಟನೆ.
ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು
"ಕೊರೊನಾ ನಿರ್ನಾಮ ಮಾಡಲು ಯೋಗಿ ಆದಿತ್ಯನಾಥ್ ಸರಕಾರ ಪ್ರಯತ್ನಿಸುವ ಬದಲು, ಇಂತಹ ಕೀಳು ಮಟ್ಟದ ಕೆಲಸಕ್ಕೆ ಮುಂದಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಕಂಡು ಹಿಡಿಯುವಲ್ಲಿ ವಿಫಲರಾಗುತ್ತಿರುವ ಯೋಗಿ, ಇದಕ್ಕೆ ಕೋಮು ಬಣ್ಣವನ್ನು ಹಚ್ಚುತ್ತಿದ್ದಾರೆ"ಎಂದು ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಹೇಳಿದ್ದಾರೆ.
ಲಕ್ನೋ ನಗರದಲ್ಲಿನ ಮಸೀದಿ
"ಲಕ್ನೋ ನಗರದಲ್ಲಿ ಇದುವರೆಗೆ 214 ಕೇಸ್ ಗಳಿವೆ. ಹೊಸ ಕೇಸ್ ಗಳು ಆ ಭಾಗದಿಂದ ಬರುತ್ತಿರುವುದರಿಂದ ಮಸೀದಿಯ ಹೆಸರನ್ನು ಇಡಲಾಗಿದಿಯೇ ಹೊರತು, ಇದರಲ್ಲಿ ದುರುದ್ದೇಶಕಪೂರ್ವಕ ಉದ್ದೇಶವೇನೂ ಇಲ್ಲ. ಎಲ್ಲರೂ ಮುಕ್ತ ಮನಸ್ಸಿನಿಂದ ಯೋಚಿಸಬೇಕಿದೆ" ಎಂದು ಉತ್ತರ ಪ್ರದೇಶ ಸರಕಾರದ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
ಏನಿದು ನಿಮ್ಮ ಕಾರ್ಯವೈಖರಿ ಯೋಗಿ ಆದಿತ್ಯನಾಥ್?
ಉದಾಹರಣೆಗೆ, ಸದರ್ ಬಜಾರ್ ಎನ್ನುವ ಹೆಸರಿನ ಪ್ರದೇಶಕ್ಕೆ ಈಗ 'ಮಸೀದಿ ಆಲಿ ಜಾನ್ ಮತ್ತು ಸುತ್ತಮುತ್ತಲ ಪ್ರದೇಶಗಳು', ವಾಜ್ರಿಗಂಜ್ ಪ್ರದೇಶಕ್ಕೆ 'ಮೊಹಮದೀಯ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು', ತ್ರಿವೇಣಿ ನಗರಕ್ಕೆ 'ನಜರ್ ಬಾಗ್ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು" ಎಂದು, ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಹೊಸ ಹೆಸರನ್ನು ಇಟ್ಟಿದೆ.