ರೌಡಿ ಶೀಟರ್ ವಿಕಾಸ್ ದುಬೆ ತಲೆಗೆ 5 ಲಕ್ಷ ಬಹುಮಾನ ಘೋಷಣೆ!
ಲಕ್ನೋ, ಜುಲೈ 08 : ಉತ್ತರ ಪ್ರದೇಶದ ರೌಡಿ ಶೀಟರ್ ವಿಕಾಸ್ ದುಬೆಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ. ಈತನ ಬಗ್ಗೆ ಸುಳಿವು ನೀಡಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.
ಮೊದಲು ವಿಕಾಸ್ ದುಬೆ ಬಗ್ಗೆ ಮಾಹಿತಿ ನೀಡಿದರೆ 1.50 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಬಳಿಕ ಅದನ್ನು ಸೋಮವಾರ 2.5 ಲಕ್ಷಕ್ಕೆ ಏರಿಕೆ ಮಾಡಿ ಉತ್ತರ ಪ್ರದೇಶ ಪೊಲೀಸರು ಆದೇಶ ಹೊರಡಿಸಿದ್ದರು.
ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು!
ಬುಧವಾರ ಬಹುಮಾನದ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 40 ಪೊಲೀಸ್ ಠಾಣೆಯ ಸಿಬ್ಬಂದಿಗಳ 25 ತಂಡಗಳನ್ನು ವಿಕಾಸ್ ದುಬೆ ಬಂಧಿಸಲು ರಚನೆ ಮಾಡಲಾಗಿದೆ. ಪೊಲೀಸರ ಹುಡುಕಾಟ ಮುಂದುವರೆದಿದೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ಉತ್ತರ ಪ್ರದೇಶ ಪೊಲೀಸರು ಬುಧವಾರ ನಡೆಸಿದ ಎನ್ ಕೌಂಟರ್ನಲ್ಲಿ ವಿಕಾಸ್ ದುಬೆ ಆಪ್ತ ಅಮರ್ ದುಬೆ ಮೃತಪಟ್ಟಿದ್ದಾನೆ. ಗುರುವಾರ ಮಧ್ಯರಾತ್ರಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಆರೋಪಿಯಾಗಿರುವ ಶ್ಯಾಮು ಬಜಪೇಯಿ ಕಾಲಿಗೆ ಗುಂಡು ತಗುಲಿದ್ದು, ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಹತ್ಯೆ; ವಿಕಾಸ್ ದುಬೆ ಬಂಧಿಸಲು 25 ತಂಡ ರಚನೆ
80 ಜನರ ವಿರುದ್ಧ ಎಫ್ಐಆರ್
ಗುರುವಾರ ಮಧ್ಯರಾತ್ರಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 80 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶ್ಯಾಮು ಬಜಪೇಯಿ ಬಗ್ಗೆ ಮಾಹಿತಿ ನೀಡಿದರೆ 25,000 ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇಂದು ಬೆಳಗ್ಗೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಮರ್ ದುಬೆ ಸಾವನ್ನಪ್ಪಿದ್ದಾನೆ
60ಕ್ಕೂ ಅಧಿಕ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ರೌಡಿ ಶೀಟರ್ ವಿಕಾಸ್ ದುಬೆ ಆಪ್ತ ಅಮರ್ ದುಬೆ ಬುಧವಾರ ಬೆಳಗ್ಗೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ ಆತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. (ಅಮರ್ ದುಬೆ (ಎಡ) ಮತ್ತು ವಿಕಾಸ್ ದುಬೆ)
ಪೊಲೀಸರ ಬಂದೂಕು ದೋಚಲಾಗಿದೆ
ಗುರುವಾರ ಮಧ್ಯರಾತ್ರಿ ಪೊಲೀಸರು ವಿಕಾಸ್ ದುಬೆ ಬಂಧಿಸಲು ಆಗಮಿಸಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಬಳಿಕ ಪೊಲೀಸರ ಬಳಿ ಇದ್ದ ಎಕೆ 47 ರೈಫಲ್ ಸೇರಿ ಹಲವು ಬಂದೂಕುಗಳನ್ನು ವಿಕಾಸ್ ದುಬೆ, ಆತನ ಸಹಚರರರು ದೋಚಿದ್ದಾರೆ. ಬಂಧಿಸಲು ಹೋದಾಗ ನಡೆದ ದಾಳಿಯಲ್ಲಿ 8 ಪೊಲೀಸರು ಮೃತಪಟ್ಟಿದ್ದರು.
ದುಬೆಗಾಗಿ ತೀವ್ರ ಹುಡುಕಾಟ
ಬಿಕ್ರು ಗ್ರಾಮದಲ್ಲಿದ್ದ ವಿಕಾಸ್ ದುಬೆ ಮನೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ. ಉತ್ತರ ಪ್ರದೇಶ ಬಿಟ್ಟು ವಿಕಾಸ್ ದುಬೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.