ಉತ್ತರಾಖಂಡ್ ಹಿಮಪಾತ: ಗಂಗಾ ನದಿ ಹರಿಯುವ ಜಿಲ್ಲೆಗಳಲ್ಲಿ ಹೈಅಲರ್ಟ್
ಲಕ್ನೋ, ಫೆಬ್ರವರಿ.07: ಉತ್ತರಾಖಂಡ್ ನಲ್ಲಿರುವ ನಂದಾ ದೇವಿ ಹಿಮಪರ್ವತ ಸ್ಫೋಟದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಹೈಅಲರ್ಟ್ ಘೋಷಿಸಿದೆ.
ಗಂಗಾ ನದಿಯು ಹರಿದು ಹೋಗುವ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೈಅಲರ್ಟ್ ಘೋಷಿಸಲಾಗಿದ್ದು, ನದಿಯಲ್ಲಿನ ನೀರಿನ ಮಟ್ಟದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಗತ್ಯಬಿದ್ದಲ್ಲಿ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಉತ್ತರಾಖಂಡ್ ಹಿಮಪಾತ LIVE: 100ಕ್ಕೂ ಅಧಿಕ ಮಂದಿ ಸಾವಿನ ಶಂಕೆ?
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಉತ್ತರ ಪ್ರದೇಶದ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ್ ಜಿಲ್ಲೆಗಳಲ್ಲಿ ಹಿಮ ಪರ್ವತ ಸ್ಫೋಟ:
ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಹಿಮಪರ್ವತಗಳು ಸ್ಫೋಟಗೊಂಡಿದ್ದು, ಈ ಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ದೌಲಿಗಂಗಾ ನದಿ ನೀರಿನ ಮಟ್ಟ ಅಪಾಯದ ಮೀರಿ ಹರಿಯುತ್ತಿದೆ. ರೇಣಿ ಗ್ರಾಮದ ತಪೋವನ ಪ್ರದೇಶವು ಹಿಮದಿಂದ ತುಂಬಿದೆ. ಹಿಮಪಾತದಿಂದಾಗಿ ಸುಮಾರು 100 ರಿಂದ 150 ಮಂದಿ ಹಿಮಪಾತದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.