ಬಿಎಸ್ಪಿಗೆ ಬಂಡಾಯದ ಆಘಾತ: ಎಸ್ಪಿ ಸೇರಲು ಶಾಸಕರ ಸಿದ್ಧತೆ
ಲಕ್ನೋ, ಅಕ್ಟೋಬರ್ 28: ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಉಂಟಾದ ಮನಸ್ತಾಪದ ಬೆನ್ನಲ್ಲೇ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಐವರು ಬಂಡಾಯ ಶಾಸಕರು ಬುಧವಾರ ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮತ್ತೊಮ್ಮೆ ಭೇಟಿಯಾಗಿದ್ದಾರೆ. ಅವರು ಎಸ್ಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಎಂಎಲ್ಸಿ ಉದಯವೀರ್ ಸಿಂಗ್ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದ ಬಿಎಸ್ಪಿಯ ಐವರು ಬಂಡಾಯ ಶಾಸಕರು ಮಾತುಕತೆ ನಡೆಸಿದ್ದರು.
ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ
ಬಿಎಸ್ಪಿಯ ಇನ್ನೂ ಇಬ್ಬರು ಬಂಡಾಯ ಶಾಸಕರು ಈ ಐವರನ್ನು ಹಿಂಬಾಲಿಸಲಿದ್ದು, ಅಖಿಲೇಶ್ ಯಾದವ್ ನಾಯಕತ್ವದ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎರಡೂ ಪಕ್ಷಗಳಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಬಂಡಾಯ ಶಾಸಕರಾದ ಅಸ್ಲಂ ಚೌಧರಿ, ಅಸ್ಲಂ ರೈನೀ, ಮುಜ್ತಾಬಾ ಸಿದ್ದಿಕಿ, ಹಕೀಮ್ ಲಾಲ್ ಬಿಂದ್ ಮತ್ತು ಗೋವಿಂದ್ ಜಟಾವ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಬುಧವಾರ ರಹಸ್ಯ ಸಭೆ ನಡೆಸಿದ್ದು, ಎಸ್ಪಿಯಿಂದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಚೌಧರಿ ಅವರ ಪತ್ನಿ ಮಂಗಳವಾರವಷ್ಟೇ ಎಸ್ಪಿ ಸೇರ್ಪಡೆಯಾಗಿದ್ದಾರೆ.
ಸಮಾಜವಾದಿ ಪಕ್ಷವು ರಾಜ್ಯಸಭೆ ಚುನಾವಣೆಗೆ ಪ್ರಕಾಶ್ ಬಜಾಜ್ ಅವರನ್ನು ಸ್ವತಂತ್ರ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿತ್ತು. ಆದರೆ ಬಿಎಸ್ಪಿಯ ಶಾಸಕರ ಹೆಸರನ್ನು ಈ ಸ್ಪರ್ಧೆಯಿಂದ ಹಿಂದಕ್ಕೆ ಪಡೆದುಕೊಂಡಿರುವುದರಿಂದ ಬಜಾಜ್ ಅವರ ಗೆಲುವು ಬಹುತೇಕ ಖಚಿತವಾದಂತಾಗಿದೆ.
ಉತ್ತರ ಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಅಕ್ಟೋಬರ್ 27ರಂದು ಕೊನೆಯ ದಿನ ಎಂದು ಚುನಾವಣಾ ಆಯೋಗ ಘೋಷಿಸಿತ್ತು. ನವೆಂಬರ್ 2ರ ಒಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಬಿಜೆಪಿಯು ಎಂಟು ಅಭ್ಯರ್ಥಿಗಳನ್ನು ಅಧಿಕೃತವಾಗಿ ಕಣಕ್ಕಿಳಿಸಿದೆ.