ಉ. ಪ್ರದೇಶ ಚುನಾವಣೆ; ಮೈತ್ರಿ ಮಾಡಿಕೊಂಡ ಆರ್ಎಲ್ಡಿ, ಸಮಾಜವಾದಿ ಪಕ್ಷ
ಲಕ್ನೋ, ನವೆಂಬರ್ 23; 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆರ್ಎಲ್ಡಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆ.
ಮಂಗಳವಾರ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಅಧ್ಯಕ್ಷ ಜಯಂತ್ ಸಿಂಗ್ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ಚುನಾವಣೆ ಪೂರ್ವ ಮೈತ್ರಿ ದೃಢಪಟ್ಟಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಪ್ರದೇಶ: ಟೈಮ್ಸ್ ನೌ ಚುನಾವಣಾಪೂರ್ವ ಸಮೀಕ್ಷೆ ಏನು ಹೇಳುತ್ತದೆ?
ಮೈತ್ರಿ ಕುರಿತು ಶೀಘ್ರವೇ ಅಂತಿಮ ಘೋಷಣೆ ಮಾಡಲಾಗುತ್ತದೆ. ಸೀಟು ಹಂಚಿಕೆ ಕುರಿತು ಅಖಿಲೇಶ್ ಯಾಧವ್ ಜೊತೆ ಮಾತುಕತೆ ನಡೆದಿದೆ ಎಂದು ಆರ್ಎಲ್ಡಿ ಹೇಳಿದೆ. ಬಿಜೆಪಿ ಜೊತೆ ಹೋಗುವುದನ್ನು ನಿರಾಕರಿಸಿರುವ ಪಕ್ಷ, ಚುನಾವಣೆಗೆ ಬಿಜೆಪಿ ಜೊತೆ ಹೋಗುವ ಯಾವುದೇ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶದಲ್ಲಿ ಪರಸ್ಪರ ಭದ್ರಕೋಟೆಗಳ ಮೇಲೆ ಬಿಜೆಪಿ, ಸಮಾಜವಾದಿ ಕಣ್ಣು
ಮಂಗಳವಾರ ಸಂಜೆ ಅಖಿಲೇಶ್ ಯಾದವ್ ಮತ್ತು ಜಯಂತ್ ಸಿಂಗ್ ಪರಸ್ಪರ ಭೇಟಿಯಾದ ಫೋಟೋಗಳನ್ನು ಟ್ವೀಟ್ ಮಾಡಿದ್ದರು. ಜಯಂತ್ ಸಿಂಗ್ 'advancing steps' ಎಂಬ ಶೀರ್ಷಿಕೆ ನೀಡಿದ್ದರು. ಅಖಿಲೇಶ್ ಯಾದವ್ 'With Shri Jayant Chaudhary, towards change' ಎಂದು ಶೀರ್ಷಿಕೆ ಕೊಟ್ಟಿದ್ದರು.
ಉತ್ತರ ಪ್ರದೇಶದಲ್ಲಿ ಒಂದೇ ದಿನ 700 ಬಿಜೆಪಿ ನಾಯಕರಿಗೆ ಅಮಿತ್ ಶಾ ಚುನಾವಣಾ ಪಾಠ
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಆರ್ಎಲ್ಡಿ ಅಧ್ಯಕ್ಷ ಜಯಂತ್ ಸಿಂಗ್, "ಈ ತಿಂಗಳ ಅಂತ್ಯದಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ. ಆರ್ಎಲ್ಡಿ ಮತ್ತು ಸಮಾಜವಾದಿ ಪಕ್ಷದ ಒಟ್ಟಿಗೆ ಸಾಗುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಆರ್ಎಲ್ಡಿ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದವು. 2022ರ ಆರಂಭದಲ್ಲಿ ನಡೆಯುವ ಚುನಾವಣೆಗೆ ಎರಡು ಪಕ್ಷಗಳ ನಡುವಿನ ಮೈತ್ರಿಯು ಪಶ್ಚಿಮ ಉತ್ತರ ಪ್ರದೇಶದಲ್ಲಿ ನಿರ್ಣಾಯಕವಾಗಿದೆ. ಮುಸ್ಲಿಂ ಮತ್ತು ಜಾಟ್ ಸಮುದಾಯದ ಮತಗಳನ್ನು ಕ್ರೋಢಿಕರಿಸುವ ಗುರಿಯನ್ನು ಪಕ್ಷಗಳು ಹೊಂದಿವೆ.
ಸಮಾಜವಾದಿ ಪಕ್ಷದ ಮೂಲಗಳ ಮಾಹಿತಿ ಪ್ರಕಾರ 30 ರಿಂದ 50 ಸೀಟುಗಳನ್ನು ಆರ್ಎಲ್ಡಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆ ಎರಡೂ ಸಮುದಾಯಗಳನ್ನು ಒಟ್ಟುಗೂಡಿಸಿದೆ. ಆದರೆ ಅವರು ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಉತ್ತರ ಪ್ರದೇಶದ 403 ಸೀಟುಗಳ ಪೈಕಿ ಉತ್ತರ ಪ್ರದೇಶದಲ್ಲಿ 100 ಸೀಟುಗಳಿವೆ. 2017ರ ಚುನಾವಣೆಯಲ್ಲಿ ಬಿಜೆಪಿ 100ರ ಪೈಕಿ 76 ಸ್ಥಾನಗಳಲ್ಲಿ ಜಯಗಳಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರದೇಶದ ಚುನಾವಣಾ ಕಾರ್ಯತಂತ್ರದ ಬಗ್ಗೆ ವೈಯಕ್ತಿಕ ಸಲಹೆಗಳನ್ನು ನೀಡುತ್ತಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯಾವುದೇ ದೊಡ್ಡ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಚಿಕ್ಕ ಚಿಕ್ಕಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ಅವರು ಪ್ರಯತ್ನ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಸಹ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಬಿಜೆಪಿ ಚುನಾವಣೆ ಸಿದ್ಧತೆಯನ್ನು ಆರಂಭಿಸಿದ್ದು, ರಾಜ್ಯದ ಪಕ್ಷದ ನಾಯಕರಿಗೆ ಚುನಾವಣೆ ಎದುರಿಸುವ ಕುರಿತು ತರಬೇತಿಯನ್ನು ನಡೆಸುತ್ತಿದೆ.
ರಾಜಸ್ಥಾನದಲ್ಲಿ ಬಿಜೆಪಿ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇದೇ ಮೈತ್ರಿ ಉತ್ತರ ಪ್ರದೇಶದಲ್ಲಿಯೂ ಮುಂದುವರೆದರೆ ಜಾಟ್ ಸಮುದಾಯದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬುದು ಪಕ್ಷದ ತಂತ್ರವಾಗಿದೆ.
Recommended Video
ಈಗಾಗಲೇ ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. 2022ರ ಜನವರಿಯಲ್ಲಿ ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.