ಖಾಸಗಿ ವಿವಿಗಳಲ್ಲಿ ದೇಶ ವಿರೋಧಿ ಚಟುವಟಿಕೆಗೆ ತಡೆ: ಶೀಘ್ರದಲ್ಲೇ ಸುಗ್ರೀವಾಜ್ಞೆ
ಲಕ್ನೋ, ಜೂನ್ 19: ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 'ಯಾವುದೇ ದೇಶ ವಿರೋಧಿ ಚಟುವಟಿಕೆ'ಗಳು ನಡೆಯಲು ಅವಕಾಶ ನೀಡದಿರುವಂತೆ ನಿಗಾವಹಿಸುವ ಕಾನೂನಿನ ಕರಡಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅನುಮತಿ ನೀಡಿದೆ.
'ದೇಶ ವಿರೋಧಿ ಚಟುವಟಿಕೆಗಳು' ಯಾವುದು ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಿಲ್ಲ. ಆದರೆ, ಈ ಕಾನೂನನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯಗಳಿಗೆ ಎಚ್ಚರಿಕೆ ನೀಡಿದೆ.
ಮೈಸೂರು ವಿವಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನ
ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಲಾಯಿತು. ರಾಜ್ಯದಲ್ಲಿನ ಎಲ್ಲ 27 ಖಾಸಗಿ ವಿಶ್ವವಿದ್ಯಾಲಯಗಳು ಈ ಕಾನೂನಿನ ವ್ಯಾಪ್ತಿಗೆ ಒಳಪಡಲಿವೆ.
'ಇದು ಬಹಳ ದೊಡ್ಡ ನಿರ್ಧಾರ. ವಿದ್ಯೆಯ ದೇಗುಲದಲ್ಲಿ ಶಿಕ್ಷಣದ ಕಲಿಕೆಯಷ್ಟೇ ನಡೆಯಬೇಕು' ಎಂದು ಸುಗ್ರೀವಾಜ್ಞೆಯ ಘೋಷಣೆ ಮಾಡಿದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ತಿಳಿಸಿದರು.
ಪಿಜಿ, ಹೋಮ್ಸ್ಟೇಗಳಿಗೆ ನೂತನ ಕಾನೂನು, ಏನದು?
ವಿಶ್ವವಿದ್ಯಾಲಯಗಳು ತನ್ನ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ತುಂಬಲು ಕ್ರಮ ತೆಗೆದುಕೊಳ್ಳಬೇಕು. ಅದರ ಜತೆಗೆ ಜಾತ್ಯತೀತತೆ, ಪ್ರಜಾಪ್ರಭುತ್ವದ ಜ್ಞಾನ ಮತ್ತು ಸಾರ್ವತ್ರಿಕ ಬ್ರಾತೃತ್ವ ಹಾಗೂ ಸಹಿಷ್ಣುತೆಯನ್ನು ಬಿತ್ತಬೇಕು ಎಂದೂ ಕಾನೂನಿನ ಕರಡು ಸೂಚನೆ ನೀಡಿದೆ.
'ನಿಜಕ್ಕೂ ಇದು ಸಂಪುಟ ತೆಗೆದುಕೊಂಡ ಅತಿ ದೊಡ್ಡ ನಿರ್ಧಾರ. ಉತ್ತರ ಪ್ರದೇಶ ಮಾತ್ರವಲ್ಲ, ದೇಶದಾದ್ಯಂತ ಇರುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ರಾಜ್ಯ ಅಥವಾ ದೇಶ ಅದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಮೌರ್ಯ ಅವರು ಹೇಳಿದರು.