ರಾತ್ರೋರಾತ್ರಿ ಕಿಟಕಿ ಜಿಗಿದು ಪರಾರಿಯಾದ ಕೊರೊನಾ ಸೋಂಕಿತ
ಲಕ್ನೋ, ಏಪ್ರಿಲ್.07: ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೆ ರಾತ್ರೋರಾತ್ರಿ ಆಸ್ಪತ್ರೆಯಿಂದಲೇ 60 ವರ್ಷದ ವೃದ್ಧನೊಂದು ಪರಾರಿ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಾರ್ಚ್ ನಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಇದೇ 60 ವರ್ಷದ ವೃದ್ಧ ಭಾಗವಹಿಸಿದ್ದು, ಅಲ್ಲಿಂದ ವಾಪಸ್ ಆದ ಬಳಿಕ ವೃದ್ಧನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣ
ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದ ಸೋಂಕಿತನು ವಾರ್ಡ್ ನ ಕಿಟಕಿಯ ಗ್ಲಾಸ್ ನ್ನು ಒಡೆದು ಹಾಕಿದ್ದಾನೆ. ನಂತರ ತಾನು ತೊಟ್ಟುಕೊಂಡಿದ್ದ ಬಟ್ಟೆಯನ್ನೇ ಹಗ್ಗವನ್ನಾಗಿ ಬಳಸಿಕೊಂಡು ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
3 ಕಿಲೋ ಮೀಟರ್ ಓಡಿದ ಸೋಂಕಿತ ವೃದ್ಧ:
ಉತ್ತರ ಪ್ರದೇಶ ಪಶ್ಚಿಮ ಭಾಗದಲ್ಲಿರುವ ಬಾಗ್ಪತ್ ಪ್ರದೇಶದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ನೇಪಾಳ ಮೂಲದ 17 ಮಂದಿಯನ್ನು ದಾಖಲಿಸಲಾಗಿತ್ತು. ಇವರೆಲ್ಲ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಈ ಪೈಕಿ 60 ವರ್ಷದ ವೃದ್ಧನೊಬ್ಬ ಏಕಾಏಕಿ ಐಸೋಲೇಟೆಡ್ ವಾರ್ಡ್ ನಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬಾಗ್ಪತ್ ಸರ್ಕಾರಿ ಆಸ್ಪತ್ರೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಪರಾರಿಯಾಗಿದ್ದ ವೃದ್ಧನನ್ನು ಪೊಲೀಸರು ಪತ್ತೆ ಮಾಡಿದ್ದು, ಮರಳಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿ ಇರುವಾಗ ವೃದ್ಧನು ಯಾರಿಗೂ ತೊಂದರೆ ಕೊಡದಂತೆ ವೈದ್ಯರಿಗೂ ಸಹಕಾರ ನೀಡುತ್ತಿದ್ದನು. ಆದರೆ ರಾತ್ರೋರಾತ್ರಿ ಹೀಗೆ ಓಡಿ ಹೋಗಲು ಕಾರಣ ಏನು ಎಂದು ಗೊತ್ತಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.