ಎಮ್ಮೆಯ ನಿಜವಾದ ಮಾಲೀಕನನ್ನು ಗುರುತಿಸಲು ಪೊಲೀಸರು ಮಾಡಿದ್ರು ಪ್ಲ್ಯಾನ್
ಲಕ್ನೋ, ಅಕ್ಟೋಬರ್ 13: ಕಳೆದು ಹೋದ ವಸ್ತುಗಳನ್ನು ಹುಡುಕಲು ಸಾಕಷ್ಟು ಪ್ರಯತ್ನವನ್ನು ಮಾಡ್ತೇವೆ, ಅದರ ಬಣ್ಣದಿಂದ ಹಿಡಿದು ಎಲ್ಲವನ್ನೂ ವಿವರಿಸಲಾಗುತ್ತದೆ.
ಆದರೆ ಇಲ್ಲಿರುವುದು ವಸ್ತುವಲ್ಲ ಪ್ರಾಣಿ, ಪೊಲೀಸರ ಈ ಹೊಸ ಪ್ಲ್ಯಾನ್ ಎಮ್ಮೆಯನ್ನು ಅದರ ನಿಜವಾದ ಮಾಲಿಕನ ಬಳಿ ಕೊಂಡೊಯ್ದಿದೆ.
ಉತ್ತರ ಪ್ರದೇಶದ ಕನೌಜ್ನಲ್ಲಿ ವೀರೇಂದ್ರ ಎನ್ನುವವರು, ನನ್ನ ಎಮ್ಮೆ ಕಾಣೆಯಾಗಿದೆ, ನನ್ನ ಸ್ನೇಹಿತ ಧರ್ಮೇಂದ್ರನೇ ನನ್ನ ಎಮ್ಮೆಯನ್ನು ಕದ್ದು ಮಾರಾಟ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು.
ಆದರೆ ಧರ್ಮೇಂದ್ರನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಧರ್ಮೇಂದ್ರನೂ ಆ ಎಮ್ಮೆ ನನ್ನದೇ ವೀರೇಂದ್ರ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇದರಿಂದ ಬೇಸತ್ತ ಪೊಲೀಸರು ಎಮ್ಮೆಯ ನಿಜವಾದ ಮಾಲೀಕ ಯಾರು ಎನ್ನುವುದನ್ನು ಪತ್ತೆ ಹಚ್ಚಲು ಎಮ್ಮೆಯನ್ನೇ ರಸ್ತೆಗಿಳಿಸಿದ್ದರು.
ಎಮ್ಮೆಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕಾಂತ್ ಮಿಶ್ರಾ , ಇಬ್ಬರೂ ವ್ಯಕ್ತಿಗಳ ಬಳಿಯೂ ಎಮ್ಮೆಯನ್ನು ತಮ್ಮ ಬಳಿ ಕರೆಯುವಂತೆ ಸೂಚನೆ ನೀಡಿದರು. ಕರೆದಾಗ ಎಮ್ಮೆ ಯಾರ ಬಳಿ ತೆರಳುತ್ತೋ ಅವರನ್ನು ಎಮ್ಮೆಯ ಮಾಲೀಕರು ಎಂದು ನಿರ್ಧರಿಸುವುದಾಗಿ ಪೊಲೀಸರು ಹೇಳಿದ್ದರು.
ಎಮ್ಮೆ ತನ್ನ ನಿಜವಾದ ಮಾಲೀಕನನ್ನು ಗುರುತಿಸಿತು. ಧರ್ಮೇಂದ್ರ ಕರೆದ ಕೂಡಲೇ ಧರ್ಮೇಂದ್ರನ ಬಳಿಗೆ ತೆರಳಿದ ಎಮ್ಮೆ ವೀರೇಂದ್ರನನ್ನು ಅಲಕ್ಷಿಸಿತ್ತು. ಈ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರಿಗೇ ಎಮ್ಮೆಯನ್ನು ವಾಪಾಸ್ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.