ಹಿಂಸಾಚಾರದ ವೇಳೆ ಇನ್ಸ್ಪೆಕ್ಟರ್ ಹತ್ಯೆ: ಹಿಂದೂ ಸಂಘಟನೆ ಮುಖಂಡರ ಬಂಧನ
ಲಕ್ನೋ, ಡಿಸೆಂಬರ್ 4: ಉತ್ತರ ಪ್ರದೇಶದ ಬುಲಂದ ಶಹರ್ನಲ್ಲಿ ಸೋಮವಾರ ಗುಂಪು ಹಿಂಸಾಚಾರದ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಬಜರಂಗದಳದ ಜಿಲ್ಲಾ ಮುಖಂಡನನ್ನು ಬಂಧಿಸಲಾಗಿದೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ನಡೆದ ಸಂಘರ್ಷವನ್ನು ತಡೆಯಲು ಹೋದ ಸುಭೋದ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಗಲಾಟೆಗೆ ಗೋವಿನ ವಧೆಯೇ ಕಾರಣ ಎಂದು ಆರೋಪಿಸಲಾಗಿತ್ತು.
ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ
ತನಿಖೆ ನಡೆಸಿದ ಉತ್ತರ ಪ್ರದೇಶದ ಪೊಲೀಸರು ಬಜರಂಗ ದಳದ ಬುಲಂದ ಶಹರ್ ಜಿಲ್ಲಾಧ್ಯಕ್ಷ ಯೋಗೇಶ್ ರಾಜ್ ವಿರುದ್ಧ ಗಲಭೆ ಪ್ರಕರಣದ ಮೊದಲ ಆರೋಪಿಯನ್ನಾಗಿ ಮತ್ತು ಕೊಲೆ ಹಾಗೂ ಕೊಲೆ ಪ್ರಯತ್ನ ಆರೋಪಗಳಡಿ ಐಪಿಸಿ ಸೆಕ್ಷನ್ 302 & 307ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅದರ ಜೊತೆಗೆ ವಿಎಚ್ಪಿ ಸಂಘಟನೆ ಮತ್ತು ಬಿಜೆಪಿಯ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ನಾಲ್ವರ ಬಂಧನ
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಸುಮಿತ್ ಎಂಬಾತ ಬಲಿಯಾಗಿದ್ದು, 27 ಇತರೆ ಆರೋಪಿಗಳು ಹಾಗೂ 60 ಅಪರಿಚಿತರ ವಿರುದ್ಧ ದಾಖಲಾದ ಎಫ್ಐಆರ್ನಲ್ಲಿ ಆತನ ಹೆಸರೂ ಇದೆ.
ಯೋಗೇಶ್ ರಾಜ್ ಅವರ ಜೊತೆ ಬಿಜೆಪಿ ಯುವ ಘಟಕದ ಶಿಖರ್ ಅಗರವಾಲ್ ಮತ್ತು ವಿಎಚ್ಪಿ ಸದಸ್ಯ ಉಪೇಂದ್ರ ರಾಘವ್ ಅವರನ್ನೂ ಆರೋಪಿಗಳನ್ನಾಗಿಸಲಾಗಿದೆ.
|
ಕಾಡಿನಲ್ಲಿ ಗೋವಧೆ
ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಜೊತೆಗಾರರೊಂದಿಗೆ ಮಹಾವ್ನ ಕಾಡಿನಲ್ಲಿ ಹೋಗುವಾಗ ಅಲ್ಪಸಂಖ್ಯಾತ ಸಮುದಾಯದ ಆರು ಮಂದಿ ಹಸುವನ್ನು ಕಡಿಯುತ್ತಿರುವುದನ್ನು ಕಣ್ಣಾರೆ ನೋಡಿದ್ದಾಗಿ ಮತ್ತು ತಮ್ಮನ್ನು ನೋಡಿದಾಗ ಅವರು ಅಲ್ಲಿಂದ ಪರಾರಿಯಾಗಿದ್ದಾಗಿ ಆರೋಪಿಸಿದ್ದರು.
ಇದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬಲಪಂಥೀಯ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಆದರೆ ಇದರಿಂದ ಹಿಂಸಾಚಾರ ಉಂಟಾಗಿರಲಿಲ್ಲ. ಘಟನೆ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಹಿಂಸಾಚಾರ ಸೃಷ್ಟಿಯಾಯಿತು. ಹಿಂಸಾಚಾರ ನಮ್ಮ ಉದ್ದೇಶವಾಗಿರಲಿಲ್ಲ ಎಂದು ಯೋಗೇಶ್ ಹೇಳಿದ್ದಾರೆ.
ಉತ್ತರ ಪ್ರದೇಶದ : ಪ್ರತಿಭಟನೆ ವೇಳೆ ಹಿಂಸಾಚಾರ, ಪೊಲೀಸ್ ಸಾವು
ಹತ್ತಿರದಿಂದ ಗುಂಡು
ಸೋಮವಾರ ಮಧ್ಯಾಹ್ನದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ 47 ವರ್ಷದ ಪೊಲೀಸ್ ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಮತ್ತು ಸ್ಥಳೀಯ ಯುವಕನೊಬ್ಬ ಮೃತಪಟ್ಟಿದ್ದರು.
ಸಿಂಗ್ ಅವರ ಎಡಗಣ್ಣಿನ ಹುಬ್ಬಿನ ಸಮೀಪದಿಂದ ಗುಂಡು ಹಾರಿಸಲಾಗಿತ್ತು. ಅವರ ದೇಹದ ಅನೇಕ ಭಾಗಗಳಲ್ಲಿ ಗಾಯಗಳಾಗಿತ್ತು ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಹಸುಗಳ ಅಂಗ ಪತ್ತೆ
ಮಹಾವ್ ಹಳ್ಳಿಯ ಸಮೀಪದ ಕಾಡಿನಲ್ಲಿ ಹಸುಗಳ ದೇಹದ ಭಾಗಗಳು ಪತ್ತೆಯಾಗಿದ್ದವು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತ್ತು ಸಮೀಪದ ಊರುಗಳ ಜನರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಚಿಂಗರವಟಿ ಪೊಲೀಸ್ ಚೌಕಿ ಹಾಗೂ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಗಲಭೆ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು.
ಪೊಲೀಸ್ ವಾಹನದಿಂದ ಅಧಿಕಾರಿಯೊಬ್ಬರನ್ನು ಹೊರಗೆಳೆದು ಜನರ ಗುಂಪು ಥಳಿಸುತ್ತಿರುವ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಆ ಅಧಿಕಾರಿ ಸಿಂಗ್ ಅವರೇ ಎನ್ನುವುದನ್ನು ಖಚಿತಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ, ಅದು ಸಿಂಗ್ ಅವರಂತೆ ಕಾಣಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.