ಉ.ಪ್ರದೇಶ ಹಿಂಸಾಚಾರ: ಬಲಪಂಥೀಯ ಆರೋಪಿಗಳೆಲ್ಲ ನಿರುದ್ಯೋಗಿಗಳು
ಲಕ್ನೋ, ಡಿಸೆಂಬರ್ 5: ಉತ್ತರ ಪ್ರದೇಶದ ಬುಲಂದಶಹರ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹತ್ಯೆಗೆ ಕಾರಣವಾದ ಹಿಂಸಾಚಾರ ಪ್ರಕರಣದಲ್ಲಿ ಸುಮಾರು 35 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ, ಹೀಗೆ ಹಿಂಸಾಚಾರ ಕೃತ್ಯದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಈ ಆರೋಪಿಗಳ ಹಿನ್ನೆಲೆ ನೋಡಿದಾಗ ಖೇದವೂ ಆಗುತ್ತದೆ.
ಇವರಲ್ಲಿ ಯಾರಿಗೂ ಒಂದು ಖಚಿತ ಉದ್ಯೋಗವಿಲ್ಲ. ಇವರಲ್ಲಿ ಅಪ್ರಾಪ್ತ ವಯಸ್ಸಿನವರಿದ್ದಾರೆ, ಕಾಲೇಜು ವಿದ್ಯಾರ್ಥಿಗಳಿದ್ದಾರೆ, ಆ ಊರಿನ ನಿವಾಸಿಗಳೂ ಅಲ್ಲದವರಿದ್ದಾರೆ... ಹೆಚ್ಚಿನವರು ಅವಲಂಬಿಸಿದವರು ಕೃಷಿಯನ್ನು. ಅದೂ ಅನಿಶ್ಚಿತ ವೃತ್ತಿ.
ಹಿಂಸಾಚಾರ ಪ್ರಕರಣದಲ್ಲಿ ಬಲಪಂಥೀಯ ಸಂಘಟನೆಯಲ್ಲಿ ಸಕ್ರಿಯರಾಗಿರುವವರ ಮೇಲೆ ಹಾಗೂ ಗೋ ಹತ್ಯೆ ಪ್ರಕರಣದಲ್ಲಿ ಮುಸ್ಲಿಮರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಬುಲಂದ್ ಶಹರ್ ಪೊಲೀಸರು ಸಿದ್ಧಪಡಿಸಿರುವ ಎಫ್ಐಆರ್ನಲ್ಲಿ 28 ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ಎಂಟು ಮಂದಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಯುವ ಮೋರ್ಚಾದಂತಹ ಬಲಪಂಥೀಯ ಸಂಘಟನೆಗಳಿಗೆ ಸೇರಿದವರು. ಅವರಲ್ಲಿ ಯಾರಿಗೂ ಕಾಯಂ ಉದ್ಯೋಗವಿಲ್ಲ.
ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ
ಇನ್ನು 18 ಮಂದಿಯಲ್ಲಿ ರೈತರು ಮತ್ತು ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಸಿಯಾನಾ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಅವರು ಕಂಡುಬಂದಿದ್ದರು. ಅವರು ಯಾವ ಸೈದ್ಧಾಂತಿಕ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಿಲ್ಲ.
ಕೆಲಸ ಬಿಟ್ಟು ಸಮಾಜಸೇವೆ
ಪ್ರಕರಣ ಮುಖ್ಯ ಆರೋಪಿಯಾಗಿರುವ ಯೋಗೇಶ್ ರಾಜ್ (28) ನಯಾಬನ್ಸ್ ಗ್ರಾಮದವರು. ಬಜರಂಗದಳ ಮತ್ತು ವಿಎಚ್ಪಿಗಳಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ನಾಲ್ಕು ವರ್ಷದ ಹಿಂದೆ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ಸಮಾಜಸೇವೆ ಮಾಡುತ್ತಿದ್ದಾನೆ. ಜೊತೆಗೆ ಬುಲಂದಶಹರ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಮಾಡುತ್ತಿದ್ದಾನೆ. ಜಿಲ್ಲೆಯಲ್ಲಿ ಮೊದಲು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದವನು, ಅದು ಮುಚ್ಚಿದ ಬಳಿಕ ಕೆಲಸ ಬಿಟ್ಟಿದ್ದ ಎಂದು ಆತನ ತಾಯಿ ತಿಳಿಸಿದ್ದಾರೆ.
ಆತನ ಮನೆಯ ಮುಂದೆ ಬೃಹತ್ ಪೋಸ್ಟರ್ ಒಂದನ್ನು ಅಂಟಿಸಲಾಗಿದೆ. ಅದರಲ್ಲಿ 'ಅವಿಭಜಿತ ಭಾರತ: ಭಾರತದ ವಿಭಜನೆಗೂ ಮುಂಚಿನ ಇತಿಹಾಸ' ಎಂದು ಭಾರತ ಮಾತೆಯ ಚಿತ್ರವನ್ನೊಳಗೊಂಡ ಬರಹವಿದೆ.
ಉತ್ತರ ಪ್ರದೇಶದ : ಪ್ರತಿಭಟನೆ ವೇಳೆ ಹಿಂಸಾಚಾರ, ಪೊಲೀಸ್ ಸಾವು
Array |
ಕೈಯಲ್ಲಿ ಗನ್ ಇರುತ್ತಿತ್ತು
ಆರೇಳು ತಿಂಗಳ ಹಿಂದೆ ಗ್ರಾಮದಲ್ಲಿ ಮೆರವಣಿಗೆ ನಡೆದ ಸಂದರ್ಭದಲ್ಲಿ ಬಜರಂಗ ದಳದ ಮತ್ತೊಬ್ಬ ನಾಯಕನ ಜೊತೆ ಯೋಗೇಶ್, ಗನ್ ಹಿಡಿದು ಸುತ್ತಾಡುತ್ತಿದ್ದ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮದಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಕ್ಕೂ ಭಾರಿ ಸಂಖ್ಯೆಯಲ್ಲಿ ಜನರು ಸೇರುವುದನ್ನು ಬಯಸುತ್ತಿದ್ದ. ನಾಮಕರಣದ ಕಾರ್ಯಕ್ರಮಕ್ಕೂ ಯೋಗೇಶ್ ಲೌಡ್ ಸ್ಪೀಕರ್ನಲ್ಲಿ ಹಿಂದೂ ಪರ ಹಾಡುಗಳನ್ನು ಹಾಕಿಸಿ ಮೆರವಣಿಗೆ ನಡೆಸುತ್ತಿದ್ದ. ಈ ರ್ಯಾಲಿ ಸಂದರ್ಭದಲ್ಲಿ ಕೈಯಲ್ಲಿ ಗನ್ ಹಿಡಿದು ಓಡಾಡುವುದು ಸಾಮಾನ್ಯವಾಗಿತ್ತು ಎಂದು ಅನೇಕರು ವಿವರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಎಲ್ಲಿಂದ ಬರುತ್ತಿತ್ತು ಹಣ?
ಕೆಲಸ ಇಲ್ಲದಿದ್ದರೂ ಯೋಗೇಶ್ ಮತ್ತು ಆತನ ಸಂಗಡಿಗರು ಬದುಕುವುದಕ್ಕೆ ಕೊರತೆ ಇರಲಿಲ್ಲ. ಅವರಿಗೆ ಎಲ್ಲಿಂದ ಹಣ ಬರುತ್ತಿತ್ತು ಎನ್ನುವುದೇ ತಿಳಿಯುತ್ತಿರಲಿಲ್ಲ. ನಿಶ್ಚಿತ ವೇತನ ಇರಲಿಲ್ಲ. ಆದರೆ, ಕಾರ್ಯಕ್ರಮ ಆಯೋಜಿಸಿದಾಗಲೆಲ್ಲ ಹಣ ಬರುತ್ತಿತ್ತು. ಒಟ್ಟಾರೆ ಹಣದಲ್ಲಿ ಒಂದಷ್ಟು ಮೊತ್ತ ಆಯೋಜಕರ ಪಾಲಾಗುತ್ತಿತ್ತು. ಅದರಲ್ಲಿ ಯೋಗೇಶ್ ಪಾಲು ನಿಗದಿಯಾಗಿರುತ್ತಿತ್ತು. ಈ ಕಾರಣಕ್ಕಾಗಿಯೇ ಊರಿನಲ್ಲಿ ಸಣ್ಣ ಕಾರ್ಯಕ್ರಮವೂ ದೊಡ್ಡ ಸಮಾರಂಭವಾಗಿ ಮಾರ್ಪಡುತ್ತಿತ್ತು ಎಂದು ಆತನ ಒಂದು ಕಾಲದ ಸಹವರ್ತಿ ಹೇಮಂತ್ ವಿವರಿಸಿದ್ದಾರೆ.
ಹಿಂದೂಗಳ ಜೊತೆ ಮಾತ್ರ ಒಡನಾಟ
ಹಿಂದೂ ಕುಟುಂಬಗಳೊಂದಿಗೆ ಮಾತ್ರ ಒಡನಾಟ ಇಟ್ಟುಕೊಂಡಿದ್ದ ಯೋಗೇಶ್, ಅದೇ ಹಳ್ಳಿಯಲ್ಲಿರುವ ಮುಸ್ಲಿಮರಿಂದ ಎಲ್ಲರೂ ದೂರ ಇರುವಂತೆ ಸಲಹೆ ನೀಡುತ್ತಿದ್ದ. ಈದ್ ಉಲ್ ಅದಾ ಹಬ್ಬದ ಎರಡು ದಿನ ಮುಂಚೆ ಟ್ವಿಟ್ಟರ್ನಲ್ಲಿ ಕಸಾಯಿಖಾನೆ ಕೆಲಸಗಾರರಿಗೆ ಎಚ್ಚರಿಕೆ ನೀಡಿದ್ದ. ಹಿಂದೂಗಳ ಅಂಗಡಿಯಿಂದ ಮಾತ್ರ ರಾಖಿ ಖರೀದಿ ಮಾಡುವಂತೆಯೂ ಸೂಚಿಸಿದ್ದ.
ಖಡ್ಗ ಕೊಂಡೊಯ್ಯುತ್ತಿದ್ದರು
ಉಳಿದ ಏಳು ಮಂದಿ ಬಂಧಿತರ ಕಥೆಯೂ ಇದಕ್ಕಿಂತ ವಿಭಿನ್ನವಲ್ಲ. ಉಪೇಂದ್ರ ರಾಘವ್ ಮತ್ತು ಶಿಖರ್ ಅಗರವಾಲ್ ವಿಎಚ್ಪಿ ಹಾಗೂ ಬಿಜೆಪಿ ಯುವ ಮೋರ್ಚಾದ ಸಕ್ರಿಯ ಕಾರ್ಯಕರ್ತರು.
27 ವರ್ಷದ ಉಪೇಂದ್ರ ರಾಘವ್ ಕೂಡ ನಿರುದ್ಯೋಗಿ. ಸಂಘಟನೆಯ ದೈನಂದಿನ ಪ್ರಾರ್ಥನೆ, ಸಭೆ, ಹಬ್ಬ-ಸಮಾರಂಭಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ. ಅಂತಹ ಕಾರ್ಯಕ್ರಮಗಳಲ್ಲಿ ಖಡ್ಗ ಕೊಂಡೊಯ್ಯುವುದು ಸಾಮಾನ್ಯವಾಗಿತ್ತು. ಇದು ಪ್ರಾಬಲ್ಯದ ಸಂಕೇತ, ಯಾರಿಗೂ ಹಾನಿ ಮಾಡಲು ಅಲ್ಲ ಎನ್ನುತ್ತಾರೆ ರಾಘವ್ ತಾಯಿ.
ಯೋಗೇಶ್ಗೆ ಮಹಿಳೆಯರ ಬೆಂಬಲ
ಹಿಂದೂ ಕುಟುಂಬಗಳು ಈ ಯುವಕರಿಗೆ ಬೆಂಬಲ ನೀಡುತ್ತಾರೆ. 'ಪೊಲೀಸರು ನಮ್ಮ ಮೊರೆ ಕೇಳುವುದಿಲ್ಲ. ಆದರೆ ಯೋಗೇಶ್ ಅಣ್ಣ ಕೇಳುತ್ತಾರೆ. ಅವರು ಗೋಹತ್ಯೆ ತಡೆದರೆ ಅದರಲ್ಲಿ ತಪ್ಪೇನು? ಅವರು ಮಹಿಳೆಯರನ್ನು ರಕ್ಷಿಸುವಂತೆ ಪೊಲೀಸರು ಮಹಿಳೆಯರಿಗೆ ರಕ್ಷಣೆ ನೀಡುತ್ತಾರೆಯೇ?' ಎಂದು ಪ್ರಶ್ನಿಸುತ್ತಾರೆ.
ಹಿಂಸಾಚಾರಕ್ಕೆ ಯಾವುದೇ ಸಂಘಟನೆ ಹೆಸರನ್ನು ಹೊಣೆಗಾರನನ್ನಾಗಿ ಮಾಡದ ಎಡಿಜಿ ಆನಂದ್ ಕುಮಾರ್, ಯೋಗೇಶ್ ರಾಜ್ ಅವರ ಸಂಘಟನೆಯ ಹೆಸರನ್ನು ಉಲ್ಲೇಖಿಸಲಿಲ್ಲ.
ಮುಂಚೆ ಸೌಹಾರ್ದತೆ ಇತ್ತು
ಧಾರ್ಮಿಕ ವಿಭಜನೆ ಇತ್ತೀಚಿನ ಬೆಳವಣಿಗೆ. ಈ ಹಿಂದೆ ಹಿಂದೂ-ಮುಸ್ಲಿಮರು ಇಡೀ ಹಳ್ಳಿಯಲ್ಲಿ ದೀಪಾವಳಿ ಮತ್ತು ಈದ್ ಅನ್ನು ಜತೆಯಾಗಿ ಆಚರಿಸುತ್ತಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಸಂಘಟನೆಗಳು ಹುಟ್ಟಿಕೊಂಡವು. ಅಲ್ಲಿಯವರೆಗೂ ಧರ್ಮದ ವಿಚಾರದಲ್ಲಿ ಹೊಡೆದಾಟಗಳಾಗುತ್ತಿರಲಿಲ್ಲ. ನಿತ್ಯವೂ ಆಹಾರ ಹಂಚಿಕೊಳ್ಳುತ್ತಿದ್ದರು, ಹಿಂದೂ-ಮುಸ್ಲಿಮರು ಮದುವೆಗಳಿಗೆ ಪರಸ್ಪರ ಆಹ್ವಾನಿಸುತ್ತಿದ್ದರು.
ಏಳು ಮಂದಿ ವಿರುದ್ಧ ಎಫ್ಐಆರ್
ಹಿಂಸಾಚಾರಕ್ಕೆ ಕಾರಣವಾದ ಗೋಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಏಳು ಮಂದಿ ಮುಸ್ಲಿಮರ ವಿರುದ್ಧ ಎಫ್ಐಆರ್ ಸಿದ್ಧಪಡಿಸಲಾಗಿದೆ. ಅವರಲ್ಲಿ ಇಬ್ಬರು 11 ಮತ್ತು 12 ವರ್ಷದ ಬಾಲಕರೂ ಸೇರಿದ್ದಾರೆ.
ಯೋಗೇಶ್ ರಾಜ್ ಹೇಳಿಕೆ ಆಧರಿಸಿ ಈ ದೂರು ದಾಖಲಿಸಲಾಗಿದೆ. ಬಾಲಕರನ್ನು ಸಂಬಂಧಿಕರ ಜೊತೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಊರಿನ ಅರಣ್ಯದ ಸಮೀಪ ಗೋಹತ್ಯೆ ನಡೆಯುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದಾಗಿ ಯೋಗೇಶ್ ರಾಜ್ ದೂರು ನೀಡಿದ್ದರು. ತಮ್ಮನ್ನು ನೋಡಿದ ಕಟುಕರು ಅಲ್ಲಿಂದ ಪರಾರಿಯಾಗಿದ್ದರು ಎಂದಿದ್ದರು. ಈ ಘಟನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.