ಬಿಜೆಪಿಯನ್ನು ಸೋಲಿಸುವ ವ್ಯರ್ಥ ಪ್ರಯತ್ನಕ್ಕಿಂತ ಏಕಾಂಗಿ ಸ್ಪರ್ಧೆ ಉತ್ತಮ: ಮಾಯಾವತಿ
ಲಕ್ನೋ, ಜೂನ್ 24: ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಅನ್ನು ದೂರ ಇಟ್ಟು ಮೈತ್ರಿ ಮಾಡಿಕೊಂಡಿದ್ದ ಎಸ್ಪಿ ಮತ್ತು ಬಿಎಸ್ಪಿ ದೂರ ಆಗುವ ಸೂಚನೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿಯೇ ದೊರಕಿತ್ತು. ಈಗ ಅಧಿಕೃತವಾಗಿ ಅದು ಖಚಿತವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿರೀಕ್ಷಿತ ಯಶಸ್ಸು ಸಾಧಿಸುವಲ್ಲಿ ವಿಫಲವಾದ ಬಳಿಕ ಬಿಎಸ್ಪಿ ನಾಯಕಿ ಮಾಯಾವತಿ, ಎಸ್ಪಿ ಜತೆಗಿನ ಮೈತ್ರಿಗೆ ಪರೋಕ್ಷವಾಗಿ ಗುಡ್ಬೈ ಹೇಳಿದ್ದಾರೆ. ಭವಿಷ್ಯದ ಚುನಾವಣೆಗಳಲ್ಲಿ ಪಕ್ಷ ಯಾರೊಂದಿಗೂ ಒಪ್ಪಂದ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯಲಿರುವ 11 ವಿಧಾನಸಭೆ ಕ್ಷೇತ್ರಗಳಲ್ಲಿನ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಾಯಾವತಿ ಮೊದಲೇ ಘೋಷಿಸಿದ್ದರು. ಈಗ ಭವಿಷ್ಯದ ಎಲ್ಲ ಚುನಾವಣೆಗಳಲ್ಲಿಯೂ ಬಿಎಸ್ಪಿ ಮೈತ್ರಿ ಮಾಡಿಕೊಳ್ಳದೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ರೀತಿಯ ಮೈತ್ರಿಗಳಿಂದ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ. ಅದರ ಬದಲು ಪಕ್ಷ ಉಳಿಸಿಕೊಳ್ಳಲು ಏಕಾಂಗಿಯಾಗಿ ಸ್ಪರ್ಧಿಸುವುದೇ ಒಳಿತು ಎಂದಿದ್ದಾರೆ.
ಮಾಯಾವತಿ ಕೆಂಡಾಮಂಡಲ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ
ಇದಕ್ಕೂ ಮುನ್ನ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಲೋಕಸಭೆ ಫಲಿತಾಂಶ ಹೊರಬಿದ್ದ ಬಳಿಕ ಒಂದು ಫೋನ್ ಸಹ ಮಾಡಿಲ್ಲ ಎಂದು ಮಾಯಾವತಿ ಕಿಡಿಕಾರಿದ್ದರು.
ತಡರಾತ್ರಿವರೆಗೂ ಸಭೆ
ಲಕ್ನೋದಲ್ಲಿ ಭಾನುವಾರ ಎರಡೂವರೆ ಗಂಟೆ ಬಿಎಸ್ಪಿ ರಾಷ್ಟ್ರೀಯ ಸಭೆ ನಡೆಯಿತು. ಇದರ ಬಳಿಕ ತಡರಾತ್ರಿವರೆಗೂ ರಾಜ್ಯವಾರು ಮುಖಂಡರ ಸಭೆಗಳು ನಡೆದವು. ಈ ವೇಳೆ ಯಾವುದೇ ಮಾಧ್ಯಮಗಳು ಇರಲಿಲ್ಲ. ಆದರೂ ಮಾಧ್ಯಮಗಳಲ್ಲಿ ಬಿಎಸ್ಪಿ ಮುಖ್ಯಸ್ಥೆ ಕುರಿತು ಫ್ಲ್ಯಾಶ್ ನ್ಯೂಸ್ ಬಿತ್ತರಿಸಲಾಯಿತು. ಇವು ಸತ್ಯಕ್ಕೆ ದೂರ. ಈ ಸಂಬಂಧ ಪತ್ರಿಕಾ ಹೇಳಿಕೆಯನ್ನೂ ಹೊರಡಿಸಲಾಗಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಮತಯಂತ್ರದ ಬಗ್ಗೆ ಮೋದಿ ಸಭೆ ಕರೆದಿದ್ದರೆ ಬರುತ್ತಿದ್ದೆ: ಮಾಯಾ ವ್ಯಂಗ್ಯ
ಎಸ್ಪಿ ದಲಿತ ವಿರೋಧಿ ಆಡಳಿತ
2012-17ರವರೆಗೆ ಆಡಳಿತ ನಡೆಸಿದ್ದ ಎಸ್ಪಿ ಸರ್ಕಾರದ ದಲಿತ ಮತ್ತು ಬಿಎಸ್ಪಿ ವಿರೋಧಿ ನಿರ್ಧಾರಗಳು, ಮೀಸಲಾತಿ ವಿರೋಧಿ ಕಾರ್ಯಗಳು, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಚಟುವಟಿಕೆಗಳು ಎಲ್ಲರಿಗೂ ತಿಳಿದಿರುವಂಥದ್ದು. ಎಸ್ಪಿ ಈ ಹಿಂದೆ ಇಷ್ಟೆಲ್ಲ ದುರಾಡಳಿತ ನಡೆಸಿದ್ದರೂ, ದೇಶ ಹಾಗೂ ಜನಹಿತಕ್ಕಾಗಿ ಅವರೊಂದಿಗೆ ಮಹಾಘಟಬಂಧನ ಮಾಡಿಕೊಂಡು ಅದನ್ನು ಸಂಪೂರ್ಣವಾಗಿ ನಿಭಾಯಿಸಿಕೊಂಡು ಬರಲಾಗಿತ್ತು ಎಂದು ಹೇಳಿದ್ದಾರೆ.
ಬಿಎಸ್ಪಿಯನ್ನು ಸೋಲಿಸಲು ಸಾಧ್ಯವಿಲ್ಲ
ಆದರೆ, ಲೋಕಸಭೆ ಚುನಾವಣೆಯ ನಂತರದ ಸಮಾಜವಾದಿ ಪಕ್ಷದ ವರ್ತನೆಯು ಬಿಜೆಪಿಯನ್ನು ಮುಂದೆ ಸೋಲಿಸುವುದು ಸಾಧ್ಯವೇ ಎಂದು ಬಿಎಸ್ಪಿಯನ್ನು ಆಲೋಚನೆಗೆ ಒಡ್ಡುವಂತೆ ಮಾಡಿದೆ. ಅದು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ಮತ್ತು ಚಳವಳಿ ಹಿತಾಸಕ್ತಿಯ ದೃಷ್ಟಿಯಿಂದ ಮುಂದಿನ ಎಲ್ಲ ಚುನಾವಣೆಗಳನ್ನು ಬಿಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಮಾಯಾವತಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ 'ಸೈಕಲ್' ಪಂಕ್ಚರ್ ಮಾಡಿ 'ಬೈ ಬೈ' ಎಂದ ಮಾಯಾವತಿ
ಫೋನ್ ಕೂಡ ಮಾಡದ ಅಖಿಲೇಶ್
ಚುನಾವಣೆಯ ಫಲಿತಾಂಶ ಬಂದ ಬಳಿಕವೂ ಅಖಿಲೇಶ್ ಯಾದವ್ ನನಗೊಂದು ಫೋನ್ ಸಹ ಮಾಡಲಿಲ್ಲ. ನಾನು ಅವರಿಗಿಂತ ಹಿರಿಯಳಾದರೂ ಅವರಿಗೆ ಫೋನ್ ಮಾಡಿ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ. ಅಖಿಲೇಶ್ ಕುಟುಂಬಸ್ಥರೇ ಸೋತ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಆದರೆ ಫಲಿತಾಂಶದ ನಂತರ ನನ್ನೊಂದಿಗೆ ಮಾತನಾಡುವಂತೆ ನನ್ನ ಪಕ್ಷದ ಸದಸ್ಯರೇ ಅಖಿಲೇಶ್ ಅವರಲ್ಲಿ ಮನವಿ ಮಾಡಿಕೊಂಡರೂ, ಅವರು ಅದಕ್ಕೆ ಒಪ್ಪಲಿಲ್ಲ ಎಂದು ಮಾಯಾವತಿ, ಅಖಿಲೇಶ್ ವಿರುದ್ಧ ಹರಿಹಾಯ್ದಿದ್ದರು.