ಬಿಜೆಪಿ ಮುಖಂಡನ ವಿರುದ್ಧ ಎನ್ಎಸ್ಎ, ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ
ಲಕ್ನೋ, ಅಕ್ಟೋಬರ್ 17: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆಯುತ್ತಿದ್ದ ಸಭೆ ವೇಳೆ ವಿವಾದ ಉಂಟಾದಾಗ ಗುಂಡು ಹಾರಿಸಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾಗಿದ್ದ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್ಸ್ಟರ್ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸುವುದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ರಿಯೋಟಿ ಪ್ರದೇಶದಲ್ಲಿ ದುರ್ಜನಪುರ ಗ್ರಾಮದಲ್ಲಿ ಪಡಿತರ ಅಂಗಡಿಗಳ ಆಯ್ಕೆಯ ವಿಚಾರದಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯುತ್ತಿದ್ದಾಗ ಜಗಳ ಉಂಟಾಗಿತ್ತು. ಆಗ ಗನ್ ತೆಗೆದಿದ್ದ ಸ್ಥಳೀಯ ಬಿಜೆಪಿ ಮುಖಂಡ ಧೀರೇಂದ್ರ ಪ್ರತಾಪ್ ಸಿಂಗ್ ಜನರ ಗುಂಪಿನತ್ತ ಗುಂಡು ಹಾರಿಸಿದ್ದರು. ಗುಂಡಿಗೆ ಜೈಪ್ರಕಾಶ್ ಎಂಬುವವರು ಬಲಿಯಾಗಿದ್ದರು. ನಂತರ ಧೀರೇಂದ್ರ ಸ್ಥಳದಿಂದ ಪರಾರಿಯಾಗಿದ್ದರು.
ಗಲಾಟೆ ವೇಳೆ ಗುಂಪಿನತ್ತ ಗುಂಡು ಹಾರಿಸಿದ ಬಿಜೆಪಿ ಮುಖಂಡ: ಯುವಕ ಸಾವು
ಗುರುವಾರ ನಡೆದಿದ್ದ ಘಟನೆ ಸಂಬಂಧ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಧೀರೇಂದ್ರ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಲುಕೌಟ್ ಜಾರಿ ಮಾಡಿದ್ದಾರೆ.
ಈ ನಡುವೆ ವಿಡಿಯೋ ಬಿಡುಗಡೆ ಮಾಡಿರುವ ಧೀರೇಂದ್ರ, ತಾವು ಗುಂಡು ಹಾರಿಸಿಯೇ ಇಲ್ಲ. ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಭ್ರಷ್ಟಾಚಾರ ಹಾಗೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಐವರನ್ನು ಬಂಧಿಸಿದ್ದು, ಎಂಟು ಆರೋಪಿಗಳ ಜತೆಗೆ 20-25 ಅಪರಿಚಿತರ ವಿರುದ್ಧ ಕೂಡ ಎಫ್ಐಆರ್ನಲ್ಲಿ ಹೆಸರು ಉಲ್ಲೇಖಿಸಲಾಗಿದೆ. ಪ್ರತಿ ಆರೋಪಿಯ ಬಗ್ಗೆ ಸೂಕ್ತ ಸುಳಿವು ನೀಡಿ ಬಂಧನಕ್ಕೆ ಸಹಕರಿಸಿದವರಿಗೆ ತಲಾ 50,000 ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.