ಉ.ಪ್ರ: ಕಣದಲ್ಲಿದ್ದ 399 ಕಾಂಗ್ರೆಸ್ ಅಭ್ಯರ್ಥಿಗಳು, ಠೇವಣಿ ಕಳೆದುಕೊಂಡವರೆಷ್ಟು?
ಬಹು ನಿರೀಕ್ಷಿತ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಹೊರಬಿದ್ದು ನಾಲ್ಕು ದಿನದ ಮೇಲಾದರೂ, ರಿಸಲ್ಟ್ ಸುತ್ತಮುತ್ತ, ಮುಂದಿನ ರಾಜಕೀಯ ಸಮೀಕರಣದ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. 403 ಸಂಖ್ಯಾಬಲದ ಅಸೆಂಬ್ಲಿಯಲ್ಲಿ ಬಹುಮತ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೇರಿದೆ.
ಈ ರಾಜ್ಯದ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ವಿಶೇಷ ಮುತುವರ್ಜಿಯನ್ನು ವಹಿಸಿತ್ತು. ಚುನಾವಣೆಗೆ ಎರಡು ವರ್ಷಕ್ಕೂ ಮುನ್ನವೇ ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿ ಪೂರ್ವ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನೀಡಿತ್ತು.
ಗಾಂಧಿ ಕುಟುಂಬದ ರಾಜೀನಾಮೆ ಸುದ್ದಿ; ಮಾ.14ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
ಪ್ರಿಯಾಂಕ ಕೂಡಾ ಭಾರೀ ಶ್ರಮವನ್ನು ವಹಿಸಿ, ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಅವರನ್ನೂ ಮೀರಿಸಿ, ರೋಡ್ ಶೋ, ಸಾರ್ವಜನಿಕ ಸಭೆಯನ್ನು ನಡೆಸಿದ್ದರು. ಇವರ ಪರಿಶ್ರಮಕ್ಕೆ ಮತದಾರ ಯಾವರೀತಿ ಆಶೀರ್ವದಿಸಲಿದ್ದಾನೆ ಎನ್ನುವ ಕುತೂಹಲವಿತ್ತು.
ಆದರೆ, ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಅಬ್ಬರದ ನಡುವೆ ಕಾಂಗ್ರೆಸ್ ಧೂಳೀಪಟವಾಗಿತ್ತು. ಖುದ್ದು, ಗಾಂಧಿ/ನೆಹರೂ ಕುಟುಂಬದ ಕರ್ಮಭೂಮಿ ಅಮೇಠಿ ಮತ್ತು ರಾಯಬರೇಲಿಯಲ್ಲೂ ಕಾಂಗ್ರೆಸ್ ನೆಲಕಚ್ಚಿತ್ತು. ಕಣದಲ್ಲಿದ್ದ ಎಷ್ಟು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ಲಾಸ್ ಆಗಿದೆ?
UP Election Results 2022: ಪ್ರಿಯಾಂಕ ಗಾಂಧಿ 209 ರ್ಯಾಲಿ, 24 ತಿಂಗಳ ಶ್ರಮ: ಫಲಿತಾಂಶ ಮುಖಭಂಗ
ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯವರ ನೇತೃತ್ವಕ್ಕೆ ಪಕ್ಷದಲ್ಲಿ ಭಾರೀ ಅಪಸ್ವರ
ಕಾಂಗ್ರೆಸ್ಸಿನ ಇತ್ತೀಚಿನ ಕಳಪೆ ಪ್ರದರ್ಶನದಿಂದಾಗಿ, ತೃತೀಯ ರಂಗಕ್ಕೂ ಶತಮಾನದ ಇತಿಹಾಸವಿರುವ ಪಕ್ಷ ಬೇಡವಾಗಿತ್ತು. ಚುನಾವಣಾ ಫಲಿತಾಂಶ ಬಂದ ನಂತರ, "ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್ ಬಯಸಿದರೆ, ನಮ್ಮ ಜೊತೆ ಕೈಜೋಡಿಸಬಹುದು"ಎನ್ನುವ ಮುಕ್ತ ಆಹ್ವಾನವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದರು. ಪಂಜಾಬ್ ನಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿಯವರ ನೇತೃತ್ವಕ್ಕೆ ಪಕ್ಷದಲ್ಲಿ ಭಾರೀ ಅಪಸ್ವರ ಎದುರಾಗುತ್ತಿದೆ.
ಪಕ್ಷದ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ
ಪಕ್ಷದ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯವರು ನವದೆಹಲಿಯಲ್ಲಿ ವಿಶೇಷ ಕಾರ್ಯಕಾರಿಣಿಯನ್ನು ಕರೆದಿದ್ದಾರೆ. 399 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಯೋಜನೆಯಂತೆ ಪ್ರಚಾರ ನಡೆಸಿದ್ದರೂ, ಈ ರೀತಿಯ ಮುಖಭಂಗವಾಗಲು ಕಾರಣವೇನು ಎನ್ನುವ ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿದೆ. ಉತ್ತರ ಪ್ರದೇಶದಲ್ಲಿ ಪಕ್ಷಕ್ಕಾದ ಹೀನಾಯ ಹಿನ್ನಡೆಯ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ವಹಿಸಿಕೊಳ್ಳಬೇಕು ಎನ್ನುವ ಚರ್ಚೆಯೂ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಿಎಸ್ಪಿಯ ಪ್ರದರ್ಶನವೇ ಪರವಾಗಿಲ್ಲ ಎನ್ನಬಹುದು
ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ 399 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಕೇವಲ ಹನ್ನೆರಡು ಅಭ್ಯರ್ಥಿಗಳಿಗೆ ಮಾತ್ರ ಠೇವಣಿ ಲಭಿಸಿದೆ. ಇದರಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಉಳಿದಂತೆ, 387 ಅಭ್ಯರ್ಥಿಗಳು ಸೋಲುವ ಮೂಲಕ ಪಕ್ಷ ಮುಜುಗರ ಎದುರಿಸುವಂತಾಗಿದೆ. ಇದಕ್ಕೆ ಹೋಲಿಸಿದರೆ, ಬಿಎಸ್ಪಿಯ ಪ್ರದರ್ಶನವೇ ಪರವಾಗಿಲ್ಲ ಎನ್ನಬಹುದು. ಬಿಎಸ್ಪಿ ಎಲ್ಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿತ್ತು ಮತ್ತು 290 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ.
ಬಿಜೆಪಿ ಮೂರು ಕಡೆ ಮತ್ತು ಎಸ್ಪಿ ಆರು ಕಡೆ ಠೇವಣಿ ಕಳೆದುಕೊಂಡಿದೆ
ಇನ್ನು, ಬಿಜೆಪಿ ಮೂರು ಕಡೆ ಮತ್ತು ಎಸ್ಪಿ ಆರು ಕಡೆ ಠೇವಣಿ ಕಳೆದುಕೊಂಡಿದೆ. ಬಿಜೆಪಿಯ ಸಹಯೋಗಿ ಅಪ್ನಾದಳ ಯಾವುದೇ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿಲ್ಲ. ರಾಯ್ ಬರೇಲಿಯ ಐದು ಕ್ಷೇತ್ರದಲ್ಲಿ ಮೂರರಲ್ಲಿ ಎಸ್ಪಿ, ಎರಡರಲ್ಲಿ ಬಿಜೆಪಿ, ಅಮೇಠಿಯ ಮೂರು ಕ್ಷೇತ್ರದಲ್ಲಿ ಎರಡರಲ್ಲಿ ಎಸ್ಪಿ, ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಂಪುರ ಖಾಸ್ ಮತ್ತು ಫರೇಂದ್ರ ಈ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದಲ್ಲಾದ ಹೀನಾಯ ಸೋಲಿನ ನಂತರ, ಮಾರ್ಚ್ ಹದಿಮೂರರಂದು ನಡೆಯಲಿರುವ ಮಹತ್ವದ ಕಾಂಗ್ರೆಸ್ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.