ಉತ್ತರ ಪ್ರದೇಶ ಚುನಾವಣಾಪೂರ್ವ ಸಮೀಕ್ಷೆ: ಸಿಎಂ ಹುದ್ದೆಗೆ ಇವರೇ ಸೂಕ್ತ!
ಲಕ್ನೋ, ನ 29: ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ಮಹತ್ವದ ಉತ್ತರ ಪ್ರದೇಶದ ಅಸೆಂಬ್ಲಿಗೆ ಚುನಾವಣೆ ಮುಂದಿನ ವರ್ಷದ ಆದಿಯಲ್ಲಿ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾಪೂರ್ವ ಕಸರತ್ತನ್ನು ಆರಂಭಿಸಿದೆ.
ವಿವಾದಿತ ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆದಿರುವುದು, ತೈಲಬೆಲೆಯ ಮೇಲಿನ ಸುಂಕವನ್ನು ಕೇಂದ್ರ ಸರಕಾರ ಮತ್ತು ಎನ್ಡಿಎ ಅಧಿಕಾರದಲ್ಲಿರುವ ರಾಜ್ಯಗಳು ಇಳಿಕೆ ಮಾಡಿವೆ. ಇದು, ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆಯಾ ಎನ್ನುವ ಅಂಶ ಮತದಾರರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
ಮತದಾರರ ಪಟ್ಟಿಯಿಂದ ನಕಲಿ ಹೆಸರು ತೆಗೆದು ಹಾಕಿ: ಚು.ಆ. ಕ್ಕೆ ಎಸ್ಪಿ ಮನವಿ
ಉತ್ತರ ಪ್ರದೇಶದಲ್ಲಿ ನಮ್ಮ ಸರಕಾರ ಅತ್ಯುತ್ತಮವಾದ ಆಡಳಿತವನ್ನು ನೀಡಿದೆ ಎಂದು ಬಿಜೆಪಿಯವರು ಹೇಳುತ್ತಿದ್ದರೆ, ಯೋಗಿ ಆದಿತ್ಯನಾಥ್ ಅವರದ್ದು ಅತ್ಯಂತ ಕೆಟ್ಟ ನಿರ್ವಹಣೆಯ ಸರಕಾರ ಎಂದು ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಕಾಂಗ್ರೆಸ್ ದೂರುತ್ತಿದೆ.
ರಾಜಕೀಯ ಪಕ್ಷಗಳು ಏನಾದರೂ ಹೇಳಿಕೊಳ್ಳಲಿ ಪಕ್ಷಗಳ ಭವಿಷ್ಯವನ್ನು ಬರೆಯಬೇಕಾದವನು ಮತದಾರ. ಅವರ ನಾಡಿಮಿಡಿತ ಯಾರ ಪರವಾಗಿದೆ? ಯಾರು ಮುಖ್ಯಮಂತ್ರಿಯಾದರೆ ಉತ್ತಮ ಎನ್ನುವ ಸಮೀಕ್ಷೆಯನ್ನು ಎಬಿಪಿ-ಸಿವೋಟರ್ ನಡೆಸಿದೆ. ಅದರ ಫಲಿತಾಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಬಿಹಾರ, ಜಾರ್ಖಂಡ್ ಮತ್ತು ಉ.ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳು: MPI ವರದಿ
ಎಬಿಪಿ-ಸಿವೋಟರ್- ಉತ್ತರ ಪ್ರದೇಶ ಚುನಾವಣಾಪೂರ್ವ ಸಮೀಕ್ಷೆ
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ, ಬಹುಜನ ಸಮಾಜಪಕ್ಷ, ಸಮಾಜವಾದಿ ಪಕ್ಷ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಗೆ ಉತ್ತರ ಪ್ರದೇಶದ ಚುನಾವಣೆ ಮಹತ್ವದ್ದು. ಯಾವ ಸರಕಾರ, ಯಾರು ಮುಖ್ಯಮಂತ್ರಿ ಎನ್ನುವ ವಿಚಾರದಲ್ಲಿ ಎಬಿಪಿ-ಸಿವೋಟರ್, 12,894 ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಅದರ ಪ್ರಕಾರ, ಆಡಳಿತ ವಿರೋಧಿ ಅಲೆ ಅಷ್ಟಾಗಿ ಬಿಜೆಪಿಯನ್ನು ಕಾಡುವುದಿಲ್ಲ ಎಂದು ಸರ್ವೇಯಲ್ಲಿ ಹೇಳಲಾಗಿದೆ.
ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯಾ
ಸಮೀಕ್ಷೆಯಲ್ಲಿ ಕೇಳಲಾದ ಮೊದಲ ಪ್ರಶ್ನೆಯೆಂದರೆ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯಾ ಎನ್ನುವುದು. ಅದಕ್ಕೆ ಅತ್ಯುತ್ತಮ ಎಂದು ಶೇ. 41.5, ಕಳಪೆ ಎಂದು ಶೇ. 37.4 ಮತ್ತು ಸಾಧಾರಣ ಎಂದು ಶೇ. 21.1 ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. ಒಟ್ಟಾರೆಯಾಗಿ, ಯಾರ ಸರಕಾರ ಇರಬೇಕು ಎನ್ನುವ ಪ್ರಶ್ನೆಗೆ, ಸಮೀಕ್ಷೆಯಲ್ಲಿ ಭಾಗವಹಿಸಿದವರು ಬಿಜೆಪಿಯೇ ಸೂಕ್ತ ಎಂದು ಹೇಳಿದ್ದಾರೆ.
ಯೋಗಿಗೆ ಮೊದಲ ಸ್ಥಾನ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ನಂತರದ ಸ್ಥಾನ
ಇನ್ನು, ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ, ಯೋಗಿ ಆದಿತ್ಯನಾಥ್ ಅವರೇ ಮೊದಲನೇ ಸ್ಥಾನದಲ್ಲಿದ್ದಾರೆ. ಅವರ ಪರವಾಗಿ ಶೇ. 42.8, ಇದಾದ ನಂತರದ ಸ್ಥಾನ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ. ಶೇ. 32.2 ಜನ ಅಖಿಲೇಶ್ ಉತ್ತಮ ಆಯ್ಕೆ ಎಂದಿದ್ದಾರೆ. ಇನ್ನು, ಮಾಯಾವತಿಗೆ ಶೇ. 15.4, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾಧ್ರಾಗೆ ಶೇ. 3.6, ಆರ್ ಎಲ್ ಡಿ ನಾಯಕ ಜಯಂತ್ ಚೌಧುರಿಗೆ ಶೇ. 1.6 ಜನ ಉತ್ತಮ ಸಿಎಂ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ
ಯೋಗಿ ಆದಿತ್ಯನಾಥ್ ಅವರ ಸರಕಾರದ ಪರವಾಗಿ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಶೇ. 45.3ರಷ್ಟು ಮಂದಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಎಂದು ಹೇಳಿದ್ದಾರೆ. ಇನ್ನು, ಸಮಾಜವಾದಿ ಪಕ್ಷ ಶೇ. 29.8, ಬಹುಜನ ಸಮಾಜಪಕ್ಷ ಶೇ. 8.1, ಕಾಂಗ್ರೆಸ್ ಶೇ. 8, ಈ ಎಲ್ಲಾ ಪಕ್ಷಗಳನ್ನು ಹೊರತು ಪಡಿಸಿ ಬೇರೆ ಪಕ್ಷ ಜಯ ಸಾಧಿಸಬಹುದು ಎಂದು ಹೇಳುವವರ ಸಂಖ್ಯೆ ಶೇ. 2.8 ಮತ್ತು ಅತಂತ್ರ ವಿಧಾನಸಭಾ ಫಲಿತಾಂಶ ಬರಲಿದೆ ಎನ್ನುವವರ ಸಂಖ್ಯೆ ಶೇ. 2.7.