ಕಾಂಗ್ರೆಸ್ ಪ್ರಚಾರಕರ ಪಟ್ಟಿಯಿಂದ ಖರ್ಗೆ ಔಟ್; ಬಿಜೆಪಿ ಕಿಡಿ
ಲಕ್ನೋ,ಜನವರಿ 25: ಉತ್ತರ ಪ್ರದೇಶದ ಚುನಾವಣೆಗೆ ಕಾಂಗ್ರೆಸ್ ವರಿಷ್ಠರು ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಕಲಿ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ ಎಲ್ಲಿಂದಲೋ ಬಂದ ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಯವರಿಗೆ ನೀಡಿಲ್ಲ. ಇದು ದಲಿತ ನಾಯಕನಿಗೆ ಅವಮಾನವಲ್ಲದೆ ಮತ್ತೇನು?.
ರಾಜ್ಯದಲ್ಲಿ ದಲಿತ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುತ್ತೇನೆ ಎಂಬ ಭರವಸೆಯನ್ನು ಕಾಂಗ್ರೆಸ್ ವರಿಷ್ಠರು ಇದುವರೆಗೆ ನೀಡಿಲ್ಲ. ಡಾ.ಜಿ. ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಘೋಷಣೆಯ ನಿರೀಕ್ಷೆ ಮಾಡಲು ಸಾಧ್ಯವೇ? ದಲಿತ ವಿರೋಧಿ ಕಾಂಗ್ರೆಸ್ ಪಕ್ಷದಿಂದ ಇದು ಅಸಾಧ್ಯ ಎಂದು ಬಿಜೆಪಿ 'ಕೂ' ನಲ್ಲಿ ಪ್ರಶ್ನಿಸಿದೆ.
ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಮೊದಲ ಹಂತದ ವಿಧಾನಸಭೆಯ 30 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕನ್ಹಯ್ಯಾ ಕುಮಾರ್ ಮತ್ತು ಪ್ರಮುಖ ಸದಸ್ಯರ ಹೆಸರಿದೆ. ಮಾತ್ರವಲ್ಲದೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಮಾಜಿ ರಾಜ್ಯಸಭಾ ಸದಸ್ಯ ರಾಜ್ ಬಬ್ಬರ್ ಜಿ-23 ನಾಯಕರನ್ನು ಸ್ಟಾರ್ ಪ್ರಚಾರಕರು ಎಂದು ಹೆಸರಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಆರೋಪಿಸಿದೆ.
Koo Appಉತ್ತರ ಪ್ರದೇಶದ ಚುನಾವಣೆಗೆ ಕಾಂಗ್ರೆಸ್ ವರಿಷ್ಠರು ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ. ನಕಲಿ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ ಎಲ್ಲಿಂದಲೋ ಬಂದ ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಯವರಿಗೆ ನೀಡಿಲ್ಲ. ಇದು ದಲಿತ ನಾಯಕನಿಗೆ ಅವಮಾನವಲ್ಲದೆ ಮತ್ತೇನು? #ದಲಿತವಿರೋಧಿಕಾಂಗ್ರೆಸ್- BJP KARNATAKA (@BJP4Karnataka) 25 Jan 2022
ಆದರೆ ಕಾಂಗ್ರೆಸ್ ತನ್ನ ಉತ್ತರಪ್ರದೇಶ ಪ್ರಚಾರಕರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿಲ್ಲ ಎನ್ನುವುದು ಕರ್ನಾಟಕ ರಾಜ್ಯ ಬಿಜೆಪಿ ಆರೋಪವಾಗಿದೆ. ಎಐಸಿಸಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಹ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.
ಇನ್ನೂ ಈ ಪಟ್ಟಿಯಲ್ಲಿ ರಾಜ್ಯ ಪಕ್ಷದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ 'ಮೋನಾ', ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಆರ್ಪಿಎನ್ ಸಿಂಗ್ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಮೋದ್ ತಿವಾರಿ ಮತ್ತು ಪಿಎಲ್ ಪುನಿಯಾ ಇದ್ದಾರೆ. ಕಾಂಗ್ರೆಸ್ನ 30 ಸ್ಟಾರ್ ಪ್ರಚಾರಕರಲ್ಲಿ ಪಕ್ಷದ ನಾಯಕರಾದ ದೀಪಿಂದರ್ ಸಿಂಗ್ ಹೂಡಾ, ಸುಪ್ರಿಯಾ ಶ್ರಿನಾಟೆ, ಇಮ್ರಾನ್ ಪ್ರತಾಪ್ಗರ್ಹಿ ಮತ್ತು ಕನ್ಹಯ್ಯಾ ಕುಮಾರ್ ಕೂಡ ಸೇರಿದ್ದಾರೆ.
ಏಳು ಹಂತಗಳಲ್ಲಿ ಮೊದಲ ಹಂತದಲ್ಲಿ, ಫೆಬ್ರವರಿ 10 ರಂದು 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳೆಂದರೆ ಶಾಮ್ಲಿ, ಮುಜಾಫರ್ನಗರ, ಬಾಗ್ಪತ್, ಮೀರತ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಹಾಪುರ್, ಬುಲಂದ್ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.