ಯುಪಿ: 27 ತಿಂಗಳ ಜೈಲುವಾಸದ ನಂತರ ಎಸ್ಪಿ ನಾಯಕ ಅಜಂ ಖಾನ್ ಬಿಡುಗಡೆ
ಸೀತಾಪುರ, ಮೇ 20. ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಜಂ ಖಾನ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿರುವ ಆಜಂ ಖಾನ್ ಇಂದು ಹೊರಬಂದಿದ್ದಾರೆ. ಅಜಂ ಖಾನ್ ಅವರನ್ನು ಜೈಲಿನಿಂದ ಕರೆದೊಯ್ಯಲು ಅವರ ಮಕ್ಕಳಾದ ಅಬ್ದುಲ್ಲಾ ಮತ್ತು ಅಬಿದ್ ಬಂದರು. ತನ್ನ ತಂದೆಯನ್ನು ಕರೆದುಕೊಂಡು ಹೋಗಲು ಸೀತಾಪುರ ಜೈಲಿಗೆ ಬಂದ ಅಬ್ದುಲ್ಲಾ ಅಜಂ, ಸುಪ್ರೀಂಕೋರ್ಟ್ ನ್ಯಾಯ ನೀಡಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಸುಪ್ರೀಂ ಕೋರ್ಟ್ನ ತೀರ್ಪಿನಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಅಬಿದ್ ಅಜಮ್ ಖಾನ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ (ಎಸ್ಪಿ) ಹಿರಿಯ ಶಾಸಕ ಮೊಹಮ್ಮದ್ ಅಜಂ ಖಾನ್ ಅವರು 27 ತಿಂಗಳುಗಳನ್ನು ಕಳೆದ ನಂತರ ಶುಕ್ರವಾರ ಬೆಳಗ್ಗೆ ಸೀತಾಪುರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಪ್ರಗತಿಶೀಲ ಸಮಾಜವಾದಿ ಪಕ್ಷದ ಲೋಹಿಯಾ (ಪಿಎಸ್ಪಿಎಲ್) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಶುಕ್ರವಾರ ಮುಂಜಾನೆ ಸೀತಾಪುರಕ್ಕೆ ತೆರಳಿ ಅಜಂ ಖಾನ್ ಜೈಲಿನಿಂದ ಹೊರಬಂದಾಗ ಅವರನ್ನು ಬರಮಾಡಿಕೊಂಡರು. "ರಾಜ್ಯದಲ್ಲಿ ಹೊಸ ಸೂರ್ಯ ಉದಯಿಸುತ್ತಿದ್ದಾನೆ" ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.
#WATCH | Samajwadi Party leader Azam Khan released from Sitapur district jail, in a matter concerning Kotwali PS in Rampur pic.twitter.com/2TDWwFHi4W
— ANI UP/Uttarakhand (@ANINewsUP) May 20, 2022
ಅವರು ಈಗಾಗಲೇ ತಲಾ ಒಂದು ಲಕ್ಷ ರೂಪಾಯಿಯ ಎರಡು ಜಾಮೀನು ಬಾಂಡ್ಗಳನ್ನು ಸಲ್ಲಿಸಿದ್ದಾರೆ ಎಂದು ಅಜಂ ಖಾನ್ ಅವರ ವಕೀಲ ಜುಬೇರ್ ಅಹ್ಮದ್ ಹೇಳಿದ್ದಾರೆ. ಸದ್ಯ ಆಜಂ ಖಾನ್ ರಾಂಪುರಕ್ಕೆ ತೆರಳುವ ಸಾಧ್ಯತೆ ಇದೆ. ಅವರ ಪುತ್ರ ಅಬ್ದುಲ್ಲಾ ಅಜಮ್ ಅವರು ತಮ್ಮ ತಂದೆಯ ಬಿಡುಗಡೆಗೆಗೆ ಸಂತೋಷಗೊಂಡಿದ್ದಾರೆ. "ದೌರ್ಜನ್ಯದ ಕತ್ತಲೆಯನ್ನು ಜೈಲಿನಿಂದ ಹೊರಬಂದ ಸೂರ್ಯ ತೊಡೆದುಹಾಕುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಜೌಹರ್ ವಿಶ್ವವಿದ್ಯಾಲಯದೊಂದಿಗೆ ಶತ್ರು ಆಸ್ತಿಯನ್ನು ವಿಲೀನಗೊಳಿಸಿದ ಪ್ರಕರಣ ಮತ್ತು ಲಕ್ನೋದ ಇನ್ನೊಂದು ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮೊಹಮ್ಮದ್ ಅಜಂ ಖಾನ್ಗೆ ಜಾಮೀನು ಸಿಕ್ಕಿದೆ.
ಜೈಲಿನಲ್ಲಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಸದ್ಯ ನಿರಾಳವಾಗಿದ್ದಾರೆ. ಸುಪ್ರೀಂ ಕೋರ್ಟ್ ಗುರುವಾರ ಅವರಿಗೆ ವಂಚನೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅವರ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. 'ಸೆಕ್ಷನ್ 420 (ವಂಚನೆ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಉತ್ತರ ಪ್ರದೇಶದ ಕೊಟ್ವಾಲಿ, ರಾಂಪುರ, ಪೊಲೀಸ್ ಠಾಣೆಗಳಲ್ಲಿ 2020 ರ ಅಪರಾಧ ಸಂಖ್ಯೆ 70 ರ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ. ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವವರೆಗೆ ಮಧ್ಯಂತರ ಆದೇಶ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಗಮನಾರ್ಹ ಸಂಗತಿ ಎಂದರೆ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಜಂ ಖಾನ್ ಕಳೆದ 26 ತಿಂಗಳಿಂದ ಸೀತಾಪುರ ಜೈಲಿನಲ್ಲಿದ್ದಾರೆ.