ಸಾಲ ವಸೂಲಿಗೆ 34 ಪ್ರಯಾಣಿಕರಿದ್ದ ಬಸ್ ಹೈಜಾಕ್!
ಲಕ್ನೋ, ಆಗಸ್ಟ್.19: ಫೈನ್ಯಾನ್ಸ್ ನೀಡಿದ ಕಂಪನಿಯ ಸಿಬ್ಬಂದಿಯು ಹಣ ವಸೂಲಿಗಾಗಿ ಪ್ರಯಾಣಿಕರು ತುಂಬಿದ ಬಸ್ ನ್ನು ಹಿಂಬಾಲಿಸಿಕೊಂಡು ಹೋದ ಅಚ್ಚರಿಯ ಘಟನೆಯು ಉತ್ತರ ಪ್ರದೇಶದ ಆಗ್ರಾ ಬೈಪಾಸ್ ನಲ್ಲಿ ನಡೆದಿದೆ.
ಸಾಲದ ಹಣ ವಸೂಲಿಗಾಗಿ ಬೆನ್ನಟ್ಟಿದ ಹಣಕಾಸು ಸಂಸ್ಥೆಯ ಸಿಬ್ಬಂದಿಯು ಬಸ್ ನಿಲ್ಲಿಸುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಹೇಳಿದ್ದಾರೆ. ಬಸ್ ನಿಲ್ಲಿಸದಿದ್ದಾಗ ಅದನ್ನು ಬೆನ್ನಟ್ಟಿಕೊಂಡು ಬಂದು ಆಗ್ರಾದ ಬಳಿ ಜಪ್ತಿ ಮಾಡಲಾಗಿದೆ. ಬಸ್ ಚಾಲಕ ನಿರ್ವಾಹಕ ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರವು ತಿಳಿಸಿದೆ.
ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್ಫೋನ್ ಕೊಡಿಸಿದ ಬಡ ವ್ಯಕ್ತಿ
ಫೈನ್ಯಾನ್ಸ್ ಕಂಪನಿಯ ಸಿಬ್ಬಂದಿ ಹಿಂಬಾಲಿಸಿದ ಸಂದರ್ಭದಲ್ಲಿ ಬಸ್ 34 ಪ್ರಯಾಣಿಕರನ್ನು ಹೊತ್ತು ಗುರುಗ್ರಾಮ್ ನಿಂದ ಮಧ್ಯಪ್ರದೇಶದ ಗ್ವಾಲಿಯಾರ್ ಗೆ ಸಂಚರಿಸುತ್ತಿತ್ತು. ಇನ್ನು, ಫೈನ್ಯಾನ್ಸ್ ಕಂಪನಿಯು ಕಾನೂನುಬಾಹಿರವಾಗಿ ಬಸ್ ಜಪ್ತಿ ಮಾಡಿಕೊಂಡಿದೆ ಎಂದು ಉತ್ತರ ಪ್ರದೇಶ ಸರ್ಕಾರವು ಸ್ಪಷ್ಟನೆ ನೀಡಿದೆ.
ಸಾವಿನ ಮನೆ ಸೇರಿದ್ದ ಬಸ್ ಮಾಲೀಕ:
ಈ ಘಟನೆ ನಡೆದ ಹಿಂದಿನ ದಿನವಷ್ಟೇ ಫೈನ್ಯಾನ್ಸ್ ಕಂಪನಿಯಿಂದ ಸಾಲ ಪಡೆದ ಬಸ್ ಮಾಲೀಕ ಮೃತಪಟ್ಟಿದ್ದರು. ತಂದೆಯ ಸಾವಿನ ನೋವಿನಲ್ಲೇ ಪುತ್ರ ಅಂತ್ಯಸಂಸ್ಕಾರ ನಡೆಸಿ ದುಃಖದಲ್ಲಿದ್ದರು. ಇಂಥ ಸಂದರ್ಭದಲ್ಲಿ ಫೈನ್ಯಾನ್ಸ್ ಕಂಪನಿಯು ಕ್ರೌರ್ಯ ತೋರಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ. ಅವರ ಪುತ್ರ ಅಂತ್ಯಸಂಸ್ಕಾರ ನಡೆಸಿ ತಂದೆ ಸಾವಿನ ನೋವಿನಲ್ಲಿದ್ದರು ಎಂದು ಉತ್ತರ ಪ್ರದೇಶ ಸರ್ಕಾರವು ತಿಳಿಸಿದೆ.
ಫೈನ್ಯಾನ್ಸ್ ಕಂಪನಿ ಸಿಬ್ಬಂದಿ ವಿರುದ್ಧ ದೂರು:
ಬಸ್ ಹೈಜಾಕ್ ಮಾಡಿದ ಫೈನ್ಯಾನ್ಸ್ ಕಂಪನಿಯ ಗ್ವಾಲಿಯಾರ್ ಮೂಲದ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಗ್ರಾದ ಎಸ್ಎಸ್ ಪಿ ಬಬ್ಲು ಕುಮಾರ್ ತಿಳಿಸಿದ್ದಾರೆ.