ಯುಪಿಯಲ್ಲಿ 'ಚೀಪ್ ಪಾಲಿಟಿಕ್ಸ್': ಅನುಮತಿ ಕೊಟ್ಟಿಲ್ಲ, ಬಸ್ ಬಿಡ್ತಿಲ್ಲ - ಕಾಂಗ್ರೆಸ್ ಟೀಕೆ
ಲಕ್ನೌ, ಮೇ 19: ಉತ್ತರ ಪ್ರದೇಶ ಸರ್ಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಮಂಗಳವಾರ ಯುಪಿ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ರಾಜೀವ್ ಶುಕ್ಲಾ ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ಪಕ್ಷವೂ 1000 ಬಸ್ ವ್ಯವಸ್ಥೆ ಮಾಡಿದೆ. ಈಗಾಗಲೇ ಬಸ್ಗಳು ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿಭಾಗದಲ್ಲಿ ಬಂದು ನಿಂತಿವೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ಕೊಡ್ತಿಲ್ಲ ಎಂದು ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರ ಸಂಕಷ್ಟ: ಪ್ರಿಯಾಂಕಾ ಗಾಂಧಿ ಮನವಿಗೆ 'ಓಕೆ' ಎಂದ ಸಿಎಂ ಯೋಗಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿಡಿಯೋ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿಕ ಬಸ್ ಸಂಚಾರಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದರು. ಬಳಿಕ, ಯೋಗಿ ಸರ್ಕಾರ ಅದಕ್ಕೆ ಸಮ್ಮತಿ ನೀಡಿ ವಾಹನಗಳ ವಿವರ ನೀಡುವಂತೆ ಸೂಚಿಸಿದ್ದರು. ಆದರೆ, ಇದುವರೆಗೂ ಕಾಂಗ್ರೆಸ್ ನಿಯೋಜಿಸಿದ ಬಸ್ಗಳು ಗಡಿಯೊಳಗೆ ಸಂಚಾರ ಮಾಡಲಿಲ್ಲ.
''ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಡಿಎಲ್, ಫಿಟ್ನೆಸ್ ಪ್ರಮಾಣಪತ್ರ, ಪಿಯುಸಿ ಪ್ರಮಾಣ ಪತ್ರದ ಜೊತೆ ಲಕ್ನೌಗೆ ಬಸ್ಗಳನ್ನು ಕಳುಹಿಸಿ ಎಂದು ಸೋಮವಾರ ರಾತ್ರಿ 11 ಗಂಟೆಗೆ ಹೇಳಿದ್ದರು. ಕಾರ್ಮಿಕರ ವಿಚಾರದಲ್ಲಿ ಅವರ ನಡೆದುಕೊಳ್ಳುತ್ತಿರುವುದು ನೋಡಿ, ಈ ಸಮಯದಲ್ಲಿ ದಾಖಲೆಗಳನ್ನು ಕೇಳುತ್ತಿದ್ದಾರೆ. ನಾವು ಎರಡು ಗಂಟೆಯೊಳಗೆ ಉತ್ತರಿಸಿದ್ದೇವೆ. ಅದಕ್ಕೆ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಕ್ರಿಯೆ ನೀಡಿ ಘಜಿಯಾಬಾದ್ಗೆ 500 ಮತ್ತು ನೋಯ್ಡಾಕ್ಕೆ 500 ಬಸ್ಗಳನ್ನು ಕರೆತನ್ನಿ ಎಂದರು'' ಎಂದು ರಂದೀಪ್ ಸಿಂಗ್ ಸುರ್ಜೆವಾಲಾ ವಿವರಿಸಿದ್ದಾರೆ.
''ರಾಜಸ್ಥಾನದಿಂದ ಬಸ್ಗಳು ಬರಬೇಕಿದೆ. ಬಸ್ಗಳು ಬರುವುದಕ್ಕೆ ಸಂಜೆ 5 ಗಂಟೆ ಆಗುತ್ತೆ. ಗಡಿಭಾಗದಲ್ಲಿ ನಿಂತಿರುವ ಬಸ್ಗಳನ್ನು ಜಿಲ್ಲಾಡಳಿತ ಒಳಗೆ ಬಿಡುತ್ತಿಲ್ಲ. ಅವರಿಗೆ ಆದೇಶ ಇಲ್ಲದ ಕಾರಣ ಅವರು ಬಿಡುವುದಿಲ್ಲ ಎನ್ನುತ್ತಿದ್ದಾರೆ'' ಎಂದು ದೂರಿದ್ದಾರೆ.
'ಮಾನವನಿಗೆ ಮಾಡುವ ಸೇವೆ, ದೇವರಿಗೆ ಮಾಡಿದಂತೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಾರೆ. ಮೋದಿ ಅವರ ಸಭೆಗೆ ಅಂದ್ರೆ ಬಸ್ ವ್ಯವಸ್ಥೆ ಮಾಡಿ, ತಿನ್ನಲು ಊಟನೂ ಕೊಡ್ತಾರೆ. ಆದರೆ, ಇಂದು ಕಾರ್ಮಿಕರಿಗೆ ಏಕೆ ಬಸ್ ವ್ಯವಸ್ಥೆ ಮಾಡುತ್ತಿಲ್ಲ. ಕಾಂಗ್ರೆಸ್ ಬಸ್ ನಿಯೋಜಿಸಿದೆ ಎಂಬ ಕಾರಣಕ್ಕೆ ಅನುಮತಿಯೂ ಕೊಡ್ತಿಲ್ಲ' ಎಂದು ಟೀಕಿಸಿದ್ದಾರೆ.
"ಈ ರೀತಿಯ ರಾಜಕೀಯವನ್ನು ನಿಲ್ಲಿಸುವಂತೆ ನಾವು ವಿನಮ್ರವಾಗಿ ವಿನಂತಿಸುತ್ತೇವೆ. ನಾವು ಸಹಕರಿಸಲು ಬಯಸುತ್ತೇವೆ, ರಾಜಕೀಯ ಮಾಡಬಾರದು. 700ಕ್ಕೂ ಅಧಿಕ ಬಸ್ಗಳು ಗಡಿಯಲ್ಲಿ ನಿಂತಿವೆ'' ಎಂದು ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ.