ವಲಸೆ ಕಾರ್ಮಿಕರ ಸಂಕಷ್ಟ: ಪ್ರಿಯಾಂಕಾ ಗಾಂಧಿ ಮನವಿಗೆ 'ಓಕೆ' ಎಂದ ಸಿಎಂ ಯೋಗಿ
ಲಕ್ನೌ, ಮೇ 18: ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮತ್ತು ಪ್ರತ್ಯಾರೋಪ ದೊಡ್ಡ ಮಟ್ಟದ ಸುದ್ದಿಯಾಗಿದೆ. 'ಕಾರ್ಮಿಕರ ವಿಷಯದಲ್ಲಿ ಕಾಂಗ್ರೆಸ್ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ, ನಾಟಕೀಯ ಪ್ರದರ್ಶನ ಕೊಡ್ತಿದ್ದಾರೆ' ಎಂದು ಬಿಜೆಪಿ ಸರ್ಕಾರ ಟೀಕಿಸಿತ್ತು.
ಟೀಕೆಯ ನಡುವೆಯೂ ಪ್ರಿಯಾಂಕಾ ಗಾಂಧಿ ಮಾಡಿದ್ದ ಮನವಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮತಿ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದವರು ವಲಸೆ ಕಾರ್ಮಿಕರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ನಿಯೋಜಿಸಿರುವ 1000 ಬಸ್ಗಳು ಸಂಚಾರ ಆರಂಭಿಸಲಿವೆ. ಮುಂದೆ ಓದಿ....
ವಿವರ ಕೇಳಿದ ಯೋಗಿ ಸರ್ಕಾರ
ಉತ್ತರ ಪ್ರದೇಶದ ಗಡಿಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಿಕೊಡಲು ಕಾಂಗ್ರೆಸ್ 1000 ಬಸ್ಗಳನ್ನು ನೇಮಿಸಿದೆ. ಇದಕ್ಕಾಗಿ ಯೋಗಿ ಸರ್ಕಾರದ ಬಳಿ ಅನುಮತಿಗಾಗಿ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದರು. ಎರಡು ದಿನಗಳ ಬಳಿಕ ಉತ್ತರ ಪ್ರದೇಶ ಸರ್ಕಾರ ಪ್ರಿಯಾಂಕಾ ಮನವಿಗೆ ಸಮ್ಮತಿ ನೀಡಿದ್ದು, ಬಸ್ ಚಾಲಕರು, ಬಸ್ ನಂಬರ್ ಮತ್ತು ವಿಳಾಸ ಮಾಹಿತಿ ನೀಡಿ ಎಂದು ಕೇಳಿದ್ದಾರೆ.
ಕಾರ್ಮಿಕರಿಗೆ ಸಹಾಯ ಮಾಡಲು ಅನುಮತಿ ಕೊಡಿ: ಪ್ರಿಯಾಂಕಾ ಗಾಂಧಿ ಮನವಿ
ರಾಹುಲ್ ಗಾಂಧಿ ನಾಟಕ ಮಾಡ್ತಿದ್ದಾರೆ
ಮೇ 16ರಂದು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಸರ್ಕಾರಕ್ಕೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ದಿನ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡಿದ್ದರು. 'ವಲಸೆ ಕಾರ್ಮಿಕರ ವಿಚಾರದಲ್ಲಿ ರಾಹುಲ್ ಗಾಂಧಿ ನಾಟಕ ಮಾಡುತ್ತಿದ್ದಾರೆ' ಎಂದು ಕಾಲೆಳೆದಿದ್ದರು.
ಕೀಳುಮಟ್ಟದ ರಾಜಕೀಯ ಬೇಡ
ಕಾರ್ಮಿಕರನ್ನು ಸಾಗಿಸಲು ಬಸ್ ಸಂಚಾರಕ್ಕೆ ಅನುಮತಿ ನೀಡಿ ಎಂದು ಪತ್ರ ಬರೆದಿದ್ದ ಪ್ರಿಯಾಂಕಾ ಗಾಂಧಿ ''ಮುಖ್ಯಮಂತ್ರಿ ಅವರಿಗೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ, ಗಡಿಯಲ್ಲಿರುವ ಕಾರ್ಮಿಕರನ್ನು ಸಾಗಿಸಲು ನಮ್ಮ 1000 ಬಸ್ಗಳು ಸಜ್ಜಾಗಿದೆ. ನೀವು ಅನುಮತಿ ಕೊಡಿ ಅಷ್ಟೆ. ಇದು ರಾಜಕೀಯ ಮಾಡುವ ಸಮಯವಲ್ಲ'' ಎಂದು ಕೇಳಿದ್ದರು.
ಸರಣಿ ಅಪಘಾತಗಳು
ಇತ್ತೀಚಿನ ದಿನಗಳಲ್ಲಿ ವಲಸೆ ಕಾರ್ಮಿಕರ ಅಪಘಾತ ಘಟನೆಗಳು ಹೆಚ್ಚು ನಡೆದಿದೆ. ಪ್ರಿಯಾಂಕಾ ಗಾಂಧಿ ಬಸ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ ಹಿಂದಿನ ದಿನವೂ, ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿದ್ದರು. 36 ಜನರು ಗಾಯಗೊಂಡಿದ್ದರು.