ಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿ: ಯೋಗಿ ಆದಿತ್ಯನಾಥ್ ಗೆ ತಲೆನೋವು
ನವದೆಹಲಿ, ಜನವರಿ 21: ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಗಾಗಿ ಹೊಸ ತಂತ್ರಗಳನ್ನು ಹೆಣೆಯಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಸಜ್ಜಾಗುತ್ತಿದೆ.
ಕೇಂದ್ರ ಸರ್ಕಾರವು ಮೇಲ್ವರ್ಗಕ್ಕೆ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೆ, ಉತ್ತರಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಒಳ ಮೀಸಲಾತಿಗಾಗಿ ಆಗ್ರಹ ಹೆಚ್ಚಾಗಿದೆ. ಮೀಸಲಾತಿ ವಿದಳನಕ್ಕಾಗಿ ಯೋಗಿ ಆದಿತ್ಯನಾಥ್ ಅವರ ಸಂಪುಟ ಸಚಿವ ಓಂ ಪ್ರಕಾಶ್ ರಾಜ್ ಭಾರ್ ಅವರು ಆಗ್ರಹಿಸುತ್ತಾ ಬಂದಿದ್ದಾರೆ.
ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?
ಆದರೆ, ಈಗ ಇದು ಸಚಿವರೊಬ್ಬರ ಮನವಿಯಾಗಿ ಉಳಿದಿಲ್ಲ, ಯೋಗಿ ಆದಿತ್ಯನಾಥ್ ಅವರಿಗೆ ಈ ಬಗ್ಗೆ ನಿರ್ಣಯ ಕೈಗೊಳ್ಳಲು 100 ದಿನಗಳ ಗಡುವು ನೀಡಲಾಗಿದೆ. ಮೀಸಲಾತಿ ಕುರಿತ ಬೇಡಿಕೆಗಳು ಈಡೇರದಿದ್ದರೆ ಹಿಂದುಳಿದ ವರ್ಗದ ನಾಯಕರು ತಿರುಗೇಟು ನೀಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಆದರೆ, ಹಿಂದುಳಿದ ವರ್ಗದ ಮೀಸಲಾತಿ ಬೇಡಿಕೆಗೆ ಯೋಗಿ ಸರ್ಕಾರ ಏನಾದರೂ ಮಣಿದರೆ ಯಾದವ ಹಾಗೂ ಕುರ್ಮಿ ಸಮುದಾಯದವರು ತಿರುಗಿ ಬೀಳುವ ಸಂಭವವಿದೆ.
ಯಾದವ ಸಮುದಾಯದವರನ್ನು ಸಂಭಾಳಿಸಿದರೂ, ಕುರ್ಮಿ ಸಮುದಾಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಲಿದೆ. ಹೀಗಾಗಿ ಮೀಸಲಾತಿ ಸಮೀಕರಣ ಸಮರ್ಪಕವಾಗಿ ಜಾರಿಗೊಳಿಸಲು ಆಗುತ್ತಿಲ್ಲ. ಸಿಎಂ ಆದಿತ್ಯನಾಥ್ ಅವರು ಕುಂಭಮೇಳದ ಸಂಭ್ರಮ ಮುಗಿದ ಬಳಿಕ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಮೇಲ್ಜಾತಿಗೂ ಮೀಸಲಾತಿ: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ!
ಅಪ್ನಾ ದಳ್ ಜತೆ ಈ ಬಗ್ಗೆ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಬಹುಶಃ ಫೆಬ್ರವರಿ 2019ರಲ್ಲಿ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.
ಬೇಡಿಕೆ ಏನಿದೆ? ಸದ್ಯದ ವರದಿಯಂತೆ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಶೇ 27ರಷ್ಟು ಮೀಸಲಾತಿ ಸಿಗಬಹುದು. ಇದನ್ನು ಮೂರು ಭಾಗವಾಗಿ ವಿಂಗಡಿಸಲು ಶಿಫಾರಸು ಮಾಡಲಾಗಿದೆ.
ಒಂದು ಪಂಗಡಕ್ಕೆ ಶೇ 7, ಮತ್ತೊಂದಕ್ಕೆ ಶೇ 11 ಹಾಗೂ ಮೂರನೇ ಪಂಗಡಕ್ಕೆ ಶೇ 9ರಷ್ಟು ಮೀಸಲಾತಿಗೆ ಬೇಡಿಕೆಯಿದೆ. ಬಿಜೆಪಿ ಈ ಶಿಫಾರಸ್ಸನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ, ಯಾದವೇತರರು, ಒಬಿಸಿಯ ಮತಗಳನ್ನು ಭದ್ರಪಡಿಸಿಕೊಳ್ಳಬಹುದು.
ಬಿಎಸ್ಪಿ-ಎಸ್ಪಿ ಮೈತ್ರಿಯಿಂದಾಗಿ ಯಾದವ ಹಾಗೂ ಜಾತವ್ ಪಂಗಡದ ಬೆಂಬಲ ಕೈತಪ್ಪಲಿದೆ. ಮುಸ್ಲಿಮರು ಕಾಂಗ್ರೆಸ್ ಪರ ನಿಲ್ಲಬಹುದು. ಹೀಗಾಗಿ ಅತ್ಯಂತ ಹಿಂದುಳಿದ ವರ್ಗಗಳ ಮತಗಳು, ಜಾತವ್ ಯೇತರ, ಮೇಲ್ವರ್ಗದ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಬೇಕಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜಾತಿ ಸಮೀಕರಣದಲ್ಲಿ ಗೆದ್ದರೆ ಕನಿಷ್ಟ 74-75 ಸ್ಥಾನ ಗೆಲ್ಲಬಹುದು. ಈ ಮೂಲಕ ಎಸ್ಪಿ -ಬಿಎಸ್ಪಿ ವಿರುದ್ಧ ಜಯ ಸಾಧಿಸಬಹುದು.