ಜ.31ರವರೆಗೂ ಎಲ್ಲಾ ಆರೋಗ್ಯ ಸಿಬ್ಬಂದಿ ರಜೆ ರದ್ದುಪಡಿಸಿದ ಉ.ಪ್ರ.ಸರ್ಕಾರ
ಉತ್ತರ ಪ್ರದೇಶ, ಡಿಸೆಂಬರ್ 16: ದೇಶದೆಲ್ಲೆಡೆ ಸಾಮೂಹಿಕ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲೂ ಶೀಘ್ರವೇ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಇದರ ಜೊತೆಗೆ ಜನವರಿ 31ರವರೆಗೂ ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಲ್ಲಾ ರೀತಿಯ ರಜೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ವೈದ್ಯರು, ದಾದಿಯರು, ಗುತ್ತಿಗೆ ನೌಕರರನ್ನು ಒಳಗೊಂಡಂತೆ ಎಲ್ಲಾ ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ರದ್ದುಪಡಿಸಿ ವೈದ್ಯಕೀಯ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ರಾಕೇಶ್ ದುಬೆ ಆದೇಶ ಹೊರಡಿಸಿದ್ದಾರೆ.
ವೈದ್ಯರಿಗೆ ವಿರಾಮ ನೀಡುವ ಬಗ್ಗೆ ಆಲೋಚಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ
ಜನವರಿ 31, 2021ರವರೆಗೂ ಎಲ್ಲಾ ವಿಧದ ರಜೆಗಳನ್ನು ರದ್ದುಪಡಿಸಲಾಗಿದೆ. ಈ ಡಿಸೆಂಬರ್ ಹಾಗೂ ಜನವರಿ 2021ರಲ್ಲಿ ಕೋವಿಡ್ 19 ಲಸಿಕಾ ಕಾರ್ಯಕ್ರಮವಿದ್ದು, ಈ ಕಾರಣಕ್ಕೆ ಎಲ್ಲಾ ರೀತಿಯ ರಜೆಗಳನ್ನು ರದ್ದುಪಡಿಸಲಾಗಿದೆ. ಇದಕ್ಕೆ ವೈದ್ಯಕೀಯ, ಆರೋಗ್ಯ ಕಾರ್ಯಕರ್ತರ ಸಹಕಾರದ ಅಗತ್ಯವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ರಜೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿಗೆ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ. ಕೋವಿಡ್ ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಗೋರಖ್ಪುರದಲ್ಲಿ 23,000 ಮಂದಿಯನ್ನು ಮೊದಲ ಹಂತಕ್ಕೆ ಆಯ್ಕೆ ಮಾಡಲಾಗಿದೆ ಎಂದು ಗೋರಖ್ಪುರ ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಕೀಯ ಅಧಿಕಾರಿ ಶ್ರೀಕಾಂತ್ ತಿವಾರಿ ಮಾಹಿತಿ ನೀಡಿದ್ದಾರೆ.
"ಉತ್ತರ ಪ್ರದೇಶ ಅತಿ ಹೆಚ್ಚಿನ ಜನಸಂಖ್ಯೆಯಿರುವ ರಾಜ್ಯವಾಗಿದ್ದರೂ, ಕೋವಿಡ್ ನಿರ್ವಹಣಾ ಕಾರ್ಯವನ್ನು ಉತ್ತಮ ರೀತಿ ನಿರ್ವಹಿಸಲಾಗಿದೆ. ಎರಡು ತಿಂಗಳ ಹಿಂದೆ 68,000 ಇದ್ದ ಸಕ್ರಿಯ ಪ್ರಕರಣಗಳು ಈಗ 18,000ಕ್ಕೆ ಇಳಿದಿದೆ. ಅತಿ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ನಡೆಸಿದ ರಾಜ್ಯ ಉತ್ತರ ಪ್ರದೇಶ ಆಗಿದೆ. ಪ್ರಸ್ತುತ ಪಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳಲ್ಲೂ ಇಳಿಕೆಯಾಗಿದೆ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ತಿಳಿಸಿದ್ದಾರೆ.
"ಉತ್ತರ ಪ್ರದೇಶದಲ್ಲಿ 24 ಕೋಟಿ ಜನಸಂಖ್ಯೆಯಿದ್ದು, ಕೊರೊನಾದಿಂದ 8,000 ಸಾವುಗಳು ಸಂಭವಿಸಿವೆ. 1.75 ಕೋಟಿ ಜನಸಂಖ್ಯೆಯಿರುವ ದೆಹಲಿಯಲ್ಲಿ 10,೦೦೦ ಸಾವು ಸಂಭವಿಸಿದೆ. ದೆಹಲಿಗೆ ಹೋಲಿಕೆ ಮಾಡಿದರೆ ಉತ್ತರ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ" ಎಂದಿದ್ದಾರೆ.