8 ಪೊಲೀಸರ ಹತ್ಯೆ ಪ್ರಕರಣ: ರೌಡಿ ವಿಕಾಸ್ ದುಬೆ ಸುಳಿವು ಸಿಕ್ಕೇ ಬಿಡ್ತು
ಲಕ್ನೋ, ಜುಲೈ 8: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಸುಳಿವು ಸಿಕ್ಕಿದೆ.
ಹರ್ಯಾಣಾದ ಫರೀದಾಬಾದ್ನ ಹೋಟೆಲ್ ಒಂದರಲ್ಲಿ ಆತ ಕಾಣಿಸಿಕೊಂಡಿದ್ದಾನೆ. ಪೊಲೀಸರು ಸುಳಿವು ಪಡೆದು ಹೋಟೆಲ್ಗೆ ತೆರಳುವಷ್ಟರಲ್ಲಿ ಅಲ್ಲಿಂದ ಆತ ಪರಾರಿಯಾಗಿದ್ದಾನೆ. ಆದರ ಹರ್ಯಾಣದಲ್ಲೇ ಆತ ಇರುವುದು ದೃಢಪಟ್ಟಿರುವುದರಿಂದ ಆತನನ್ನು ಹಿಡಿಯುವುದು ಕಷ್ಟವೇನು ಆಗುವುದಿಲ್ಲ.
ರೌಡಿ ವಿಕಾಸ್ ದುಬೆ ಆಪ್ತ ಅಮರ್ ದುಬೆ ಎನ್ಕೌಂಟರ್ನಲ್ಲಿ ಹತ್ಯೆ: ಮುಂದಿನ ಸರದಿ?
ಸಿಸಿಟಿವಿಯಲ್ಲಿ ಆತ ಹೋಟೆಲ್ಗೆ ಬಂದಿದ್ದು ಸೆರೆಯಾಗಿದೆ. ಮಂಗಳವಾರ ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬುಧವಾರ ಬೆಳಗ್ಗೆ ವಿಕಾಸ್ ದುಬೆ ಅತ್ಯಾಪ್ತ ಅಮರ್ ದುಬೆಯನ್ನು ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.
ರೌಡಿ ವಿಕಾಸ್ನನ್ನು ಬಂಧಿಸಲು 25 ಪೊಲೀಸ್ ತಂಡವನ್ನು ರಚಿಸಲಾಗಿದೆ. ಶುಕ್ರವಾರ ನಡೆದ ಘಟನೆ ಬಳಿಕ ಆತ ತಲೆ ಮರೆಸಿಕೊಂಡಿದ್ದ. ಆತನ ಬಗ್ಗೆ ಸುಳಿವು ನೀಡಿದರೆ 2.5 ಲಕ್ಷ ಇನಾಮು ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮ, ಫರೀದಾಬಾದ್ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶುಕ್ರವಾರ 50 ಮಂದಿಯಿಂದ ಪೊಲೀಸ್ ತಂಡ ವಿಕಾಸ್ ದುಬೆಯ ಬಂಧನಕ್ಕೆ ತೆರಳಿತ್ತು, ವಿಕಾಸ್ ಮತ್ತು ಆತನ ಸಹಚರರು ಸೇರಿ ಪೊಲೀಸರ ಮೇಲೆ ಗುಂಡು ಹಾರಿಸಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದರು.