ಒಂದು ಹೊತ್ತಿನ ಊಟವಿಲ್ಲದೇ 5 ವರ್ಷದ ಮಗು ಸಾವು?
ಆಗ್ರಾ, ಆಗಸ್ಟ್.24: ಊಟವಿಲ್ಲದೇ ಹಸಿವಿನಿಂದ ಸೋನಿಯಾ ಎಂಬ ಐದು ವರ್ಷದ ಪುಟ್ಟ ಕಂದಮ್ಮ ಪ್ರಾಣ ಬಿಟ್ಟಿರುವಂತಾ ಕರಳು ಹಿಂಡುವ ಘಟನೆಯೊಂದು ಉತ್ತರ ಪ್ರದೇಶದ ನಾಗ್ಲಾ ವಿಧಿಚಂದ್ ನಲ್ಲಿ ವರದಿಯಾಗಿದೆ.
ಆಗ್ರಾದ ಬರೌಲಿ ಅಧೀರ್ ಬ್ಲಾಕ್ ನ ನಾಗ್ಲಾ ವಿಧಿಚಂದ್ ನಲ್ಲಿ ಬಡ ಕುಟುಂಬದ ಐದು ವರ್ಷದ ಮಗು ಹಸಿವಿನಿಂದ ಪ್ರಾಣ ಬಿಟ್ಚಿರುವ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ ಆಗ್ರಾ ಜಿಲ್ಲಾಡಳಿತವು ಹಸಿವಿನಿಂದಲೇ ಮಗು ಸಾವನ್ನಪ್ಪಿರುವುದನ್ನು ತಳ್ಳಿ ಹಾಕಿದೆ.
ಬಳ್ಳಾರಿಯಲ್ಲಿ ಊಟವಿಲ್ಲದೇ ಹಸಿವಿನಿಂದ ಪ್ರಾಣಬಿಟ್ಟ 60ರ ವೃದ್ಧ
ಅತಿಸಾರ ಮತ್ತು ತೀವ್ರ ಜ್ವರದಿಂದ ಸೋನಿಯಾ ಎಂಬ ಮಗು ಸಾವನ್ನಪ್ಪಿದೆಯೇ ವಿನಃ ಹಸಿವಿನಿಂದಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಮೃತ ಮಗುವಿನ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ 100 ಕೆಜಿ ರೇಷನ್ ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರವಿಲ್ಲದೇ ಒಂದು ತಿಂಗಳು ಪರದಾಟ
ದಿನಗೂಲಿ ಕೆಲಸ ಮಾಡುತ್ತಿರುವ ಬಡ ಕುಟುಂಬ ನಮ್ಮದು. ಭಾರತ ಲಾಕ್ ಡೌನ್ ನಿಂದಾಗಿ ಒಂದು ತಿಂಗಳು ಉದ್ಯೋಗವಿಲ್ಲದೇ ಆದಾಯವೆಲ್ಲ ನಿಂತು ಹೋಗಿತ್ತು. ಇನ್ನು, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ ನನ್ನ ಪತಿಯು ಉದ್ಯೋಗ ಮಾಡುವಷ್ಟು ಆರೋಗ್ಯವಂತರಾಗಿಲ್ಲ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ತಿಂಗಳುಗಳ ಕಾಲ ಆಹಾರವಿಲ್ಲದೇ ಇಡೀ ಕುಟುಂಬವೇ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು ಎಂದು ಕಣ್ಣೀರು ಹಾಕುತ್ತಾರೆ ಮೃತ ಮಗುವಿನ ತಾಯಿ ಶೀಲಾ ದೇವಿ.
ಹೊತ್ತಿನ ಊಟಕ್ಕೂ ಕಷ್ಟಪಡುವಂತಾ ಪರಿಸ್ಥಿತಿ
ಕಳೆದ ಒಂದು ತಿಂಗಳು ಆದಾಯವಿಲ್ಲದೇ ಹಸಿವಿನಿಂದ ನರಳುತ್ತಿದ್ದ ಸಂದರ್ಭದಲ್ಲಿ ನೆರೆಹೊರೆಯವರು ಸಹಾಯ ಮಾಡಿದರು. ಆದರೆ 15 ದಿನಗಳಿಂದ ಈಚೆಗೆ ಹೊತ್ತಿನ ಊಟಕ್ಕೂ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಒಂದು ವಾರದ ಹಿಂದೆ ಸರಿಯಾದ ಊಟವಿಲ್ಲದೇ ಮಗು ಸೋನಿಯಾ ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಯಿತು. ಮಗುವಿಗೆ ಚಿಕಿತ್ಸೆ ಕೊಡಿಸುವುದಿರಲಿ, ಮಾತ್ರೆ ಕೊಡಿಸುವುದಕ್ಕೂ ಹಣವಿಲ್ಲದೇ ನನ್ನ ಮಗುವನ್ನು ಕಳೆದುಕೊಂಡು ಎನ್ನುತ್ತಾರೆ ತಾಯಿ ಶೀಲಾ ದೇವಿ.
ವಿದ್ಯುತ್ ಸಂಪರ್ಕವಿಲ್ಲ, ರೇಷನ್ ಕಾರ್ಡ್ ಇಲ್ಲ
ಶೀಲಾ ದೇವಿ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬಡ ಕುಟುಂಬಕ್ಕೆ ಕನಿಷ್ಠ ರೇಷನ್ ಕಾರ್ಡ್ ಕೂಡಾ ಇಲ್ಲ. 7,000 ರೂಪಾಯಿ ಬಿಲ್ ಪಾವತಿಸಲಾಗದ ಹಿನ್ನೆಲೆ ಮನೆಯ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಮನೆಯಲ್ಲಿ ಕತ್ತಲು ಆವರಿಸಿದೆ. ಬಡತನ ನಮ್ಮನ್ನು ನಡುಗುವಂತೆ ಮಾಡಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ನೋಟ್ ಬ್ಯಾನ್ ಜಾರಿಗೊಳಿಸಿದ ಸಂದರ್ಭದಲ್ಲಿ ಇದೇ ಶೀಲಾ ದೇವಿ ಅವರು ತಮ್ಮ ಎಂಟು ವರ್ಷದ ಮಗನನ್ನೂ ಕಳೆದುಕೊಂಡಿದ್ದರು. ಅಂದು ತಮ್ಮ ಮಗನಿಗೆ ಕಾಡಿದ್ದೂ ಕೂಡಾ ಇದೇ ಹಸಿವಿನ ನೋವು ಎಂದು ತಾಯಿ ನೋವಿನಿಂದ ಗದ್ಗರಿತರಾಗುತ್ತಾರೆ.
ತಾಯಿ ಮುಖ ನೋಡುವ ಮುನ್ನ ಸಾವಿನ ಮನೆಗೆ ಮಗು
ಶುಕ್ರವಾರ ಮಧ್ಯಾಹ್ನ 1 ಬೊಟ್ಟಲು ಹಾಲು ಕುಡಿದ ಮಗುವಿನಲ್ಲಿ ಅತಿಸಾರ ಕಾಣಿಸಿಕೊಂಡಿತು. ಈ ವೇಳೆ ಮಗುವಿಗೆ ಚಿಕಿತ್ಸೆ ಕೊಡಿಸುವುದಕ್ಕೂ ನಮ್ಮ ಬಳಿ ಹಣವಿರಲಿಲ್ಲ. ದಿನಗೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ವಾಪಸ್ಸಾಗುವ ವೇಳೆಗಾಗಲೇ ಮಗು ಸಾವಿನ ಮನೆ ಸೇರಿತ್ತು ಎಂದು ಮಗುವಿನ ತಂದೆ ಹೇಳಿದ್ದಾರೆ.
ತಹಶೀಲ್ದಾರ್ ವರದಿಯಲ್ಲಿ ಉಲ್ಲೇಖಿಸಿದ್ದೇನು?
ಐದು ವರ್ಷದ ಮಗು ಸೋನಿಯಾ ಸಾವಿನ ಬಗ್ಗೆ ತಹಶೀಲ್ದಾರ್ ಪ್ರೇಮ್ ಪಾಲ್ ಸಿಂಗ್ ತನಿಖೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಮಗು ಅತಿಸಾರ ಮತ್ತು ಜ್ವರದಿಂದ ಸಾವನ್ನಪ್ಪಿದೆಯೇ ವಿನಃ ಹಸಿವಿನಿಂದ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಇನ್ನು, ಮಗುವಿನ ಸಾವಿನ ಬಳಿಕ ಕುಟುಂಬಕ್ಕೆ 50 ಕೆಜಿ ಹಿಟ್ಟು, 40 ಕೆಜಿ ಅಕ್ಕಿ ಮತ್ತು ಇತರೆ ಅಗತ್ಯ ದಿನಬಳಕೆ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇದರ ಜೊತೆಗೆ ಕುಟುಂಬಕ್ಕೆ ರೇಷನ್ ಕಾರ್ಡ್ ನ್ನು ಕೂಡಾ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್ ಸಿಂಗ್ ತಿಳಿಸಿದ್ದಾರೆ.
ಆಗ್ರಾದ ನಾಗ್ಲಾ ವಿಧಿಚಂದ್ ಗ್ರಾಮಕ್ಕೆ ವೈದ್ಯಕೀಯ ತಂಡಗಳು ಭೇಟಿ ನೀಡಬೇಕು. ಅಲ್ಲಿರುವ ಪ್ರತಿಯೊಂದು ಬಡ ಕುಟುಂಬಕ್ಕೂ ಅಗತ್ಯವಿರುವ ಕ್ಯಾಲ್ಸಿಯಂ, ವಿಟಮಿನ್ ಮಾತ್ರೆಗಳನ್ನು ವಿತರಣೆ ಮಾಡಬೇಕು. ಶೀಲಾ ದೇವಿ ಮನೆಯಲ್ಲಿ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಪುನಃ ನೀಡುವುದು. ರಾಜ್ಯ ಸರ್ಕಾರವು ಬಡವರಿಗಾಗಿ ಘೋಷಿಸಿರುವ ಯೋಜನೆಗಳಲ್ಲಿ ಯಾವ ಯೋಜನೆ ಈ ಕುಟುಂಬಕ್ಕೆ ಅನ್ವಯವಾಗತ್ತದೆಯೇ ಆ ಯೋಜನೆ ಅಡಿಯಲ್ಲಿ ನೆರವು ನೀಡುವಂತೆ ಸ್ಥಳೀಯ ಆಡಳಿತಾಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಪ್ರಭು ಎನ್ ಸಿಂಗ್ ಸೂಚನೆ ನೀಡಿದ್ದಾರೆ.