ಯುಪಿ: ಐಜಿ ಲಕ್ಷ್ಮಿ ಸಿಂಗ್ ವರ್ಗಾವಣೆಗಾಗಿ ಇಸಿಗೆ ಪತ್ರ ಬರೆದ ಎಸ್ಪಿ
ಲಕ್ನೋ, ಫೆಬ್ರವರಿ 15: ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತದ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಮೊದಲ ಎರಡು ಹಂತದ ಮತದಾನ ಪೂರ್ಣಗೊಂಡಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಸಮಾಜವಾದಿ ಪಕ್ಷ ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಲಕ್ನೋ ರೇಂಜ್ ಐಜಿ ಲಕ್ಷ್ಮಿ ಸಿಂಗ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದೆ. ಲಕ್ಷ್ಮಿ ಸಿಂಗ್ ತನ್ನ ಪತಿ ರಾಜೇಶ್ವರ್ ಸಿಂಗ್ಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಬಿಜೆಪಿ ಟಿಕೆಟ್ನಲ್ಲಿ ಮಾಜಿ ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್ ಸ್ಪರ್ಧಿಸುತ್ತಿರುವುದು ಗೊತ್ತಿರುವ ವಿಚಾರ.
ಎಸ್ಪಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಲಕ್ಷ್ಮಿ ಸಿಂಗ್ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಆ ಮೂಲಕ ಚುನಾವಣೆ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಪತಿ, ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರು ಲಕ್ನೋದ ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಈ ಹಿಂದೆ ಫೆ.7ರಂದು ಹಾಗೂ ನಂತರ ಫೆ.11ರಂದು ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ.
ಜಾರಿ ನಿರ್ದೇಶನಾಲಯದಲ್ಲಿ ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್ ಸಿಂಗ್ ಅವರು ಇತ್ತೀಚೆಗೆ ವಿಆರ್ಎಸ್ ತೆಗೆದುಕೊಂಡಿದ್ದಾರೆ. ಆ ಬಳಿಕ ಬಿಜೆಪಿ ಸೇರಿದರು. ರಾಜೇಶ್ವರ್ ಸಿಂಗ್ ಅವರು ಲಕ್ನೋದ ಸರೋಜಿನಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದಾರೆ. ಜೊತೆಗೆ ರಾಜೇಶ್ವರ್ ಸಿಂಗ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅವರ 12 ವರ್ಷದ ಮಗಳು ರಾಜಲಕ್ಷ್ಮಿ ಸಿಂಗ್ ಕೂಡ ಚುನಾವಣಾ ಪ್ರಚಾರದಲ್ಲಿ ರಾಜೇಶ್ವರ್ ಸಿಂಗ್ ಅವರನ್ನು ಬೆಂಬಲಿಸುತ್ತಿದ್ದಾರೆ. ವೃಂದಾವನ ಕಾಲೋನಿಯಲ್ಲಿ ಚುನಾವಣಾ ಪ್ರಚಾರದ ವೇಳೆ ರಾಜೇಶ್ವರ್ ಸಿಂಗ್ ಎಸ್ಪಿಯನ್ನು ಟಾರ್ಗೆಟ್ ಮಾಡಿದ್ದರು. ವಿರೋಧ ಪಕ್ಷದ ಸರ್ಕಾರಗಳಲ್ಲಿ ಸ್ಮಶಾನಗಳ ಗಡಿ ನಿರ್ಮಾಣಕ್ಕೆ ಗರಿಷ್ಠ ಹಣ ವ್ಯಯಿಸಲಾಗಿದೆ ಎಂದು ಅವರು ಹೇಳಿದ್ದರು. ಬಿಜೆಪಿ ಜನರಿಗೆ ಪಡಿತರ, ಶೌಚಾಲಯ, ವಸತಿ ಮತ್ತು ಔಷಧಗಳನ್ನು ನೀಡಲು ಹಣವನ್ನು ಖರ್ಚು ಮಾಡಿದ್ದರು.
ಈ ಹಿಂದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಮೀಕ್ಷೆಗಳಿಗೆ ಕೇಂದ್ರ ಚುನಾವಣಾ ಆಯೋಗ ತಕ್ಷಣ ನಿರ್ಬಂಧ ವಿಧಿಸಬೇಕಿದೆ ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರರಿಗೆ ಬರೆದ ಪತ್ರದಲ್ಲಿ ಸಮಾಜವಾದಿ ಪಕ್ಷ ಈ ಬಗ್ಗೆ ಉಲ್ಲೇಖಿಸಿದೆ. ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಇಂಥ ಸಮೀಕ್ಷೆಗಳು ಮತದಾರರ ದಾರಿ ತಪ್ಪಿಸುತ್ತಿದ್ದು, ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದು ಎಸ್ಪಿ ದೂಷಿಸಿದೆ. ಉತ್ತರ ಪ್ರದೇಶದಲ್ಲಿ ಮತದಾನಕ್ಕೂ ಮೊದಲೇ ಅಭಿಪ್ರಾಯ ಸಮೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಅಭಿಪ್ರಾಯ ಸಮೀಕ್ಷೆಗಳ ಮೂಲಕ ರಾಜ್ಯದ ಮತದಾರರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದ್ದು, ಇದು ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ. ಈ ಹಿನ್ನೆಲೆ ನರೇಶ್ ಉತ್ತಮ್ ಪಟೇಲ್ ಬರೆದಿರುವ ಪತ್ರದಲ್ಲಿ ತಕ್ಷಣವೇ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಮೀಕ್ಷೆಗಳನ್ನು ತಡೆ ಹಿಡಿಯುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.