ಉತ್ತರ ಪ್ರದೇಶದಲ್ಲಿ ಟಿಎಂಸಿಗೆ ಹಾಯ್ ಹಾಯ್, ಕಾಂಗ್ರೆಸ್ಸಿಗೆ ಬಾಯ್ ಬಾಯ್ ಎಂದ ಅಖಿಲೇಶ್!
ಲಕ್ನೋ, ಡಿಸೆಂಬರ್ 4: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಮೇಲಾಟಗಳು ಜೋರಾಗಿ ನಡೆಯುತ್ತಿವೆ. ಈ ನಡುವೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪರ್ಯಾಯ ರಾಜಕೀಯ ರಂಗಕ್ಕೆ ಸೇರಲು ಮುಕ್ತರಾಗಬಹುದು ಎಂದು ಹೇಳಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಪ್ರಬಲ ವಿರೋಧ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಅಖಿಲೇಶ್ ಯಾದವ್ ವೇದಿಕೆ ನಿರ್ಮಿಸುತ್ತಿದ್ದಾರೆ. "ಪಶ್ಚಿಮ ಬಂಗಾಳದ ರೀತಿಯಲ್ಲೇ ಉತ್ತರ ಪ್ರದೇಶದಲ್ಲೂ ಕೇಂದ್ರದ ಆಡಳಿತ ಪಕ್ಷ ಬಿಜೆಪಿಯು ಹೇಳ ಹೆಸರಿಲ್ಲದಂತೆ ಅಳಿಸಿ ಹೋಗುತ್ತದೆ," ಎಂದಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಬಂದಾಗ ಮಾತ್ರ ಅಖಿಲೇಶ್ ಯಾದವ್ ಎಚ್ಚರಗೊಳ್ಳುತ್ತಾರೆಯೇ?: ಪ್ರಿಯಾಂಕಾ ಗಾಂಧಿ ಪ್ರಶ್ನೆ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಾತನಾಡಿದ ಅವರು, "ನಾನು ಮಮತಾ ಬ್ಯಾನರ್ಜಿಯವರನ್ನು ಸ್ವಾಗತಿಸುತ್ತಿದ್ದೇನೆ. ಅವರು ಬಂಗಾಳದಲ್ಲಿ ಬಿಜೆಪಿಯನ್ನು ಅಳಿಸಿಹಾಕಿದ ರೀತಿ, ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಅಳಿಸಿ ಹಾಕುತ್ತಾರೆ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
"ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 0 ಸ್ಥಾನ"
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಆಗಿರುವ ಅಖಿಲೇಶ್ ಯಾದವ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು. "ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ 0 ಸ್ಥಾನ ಸಿಗಲಿದೆ," ಎನ್ನುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು. 2017ರಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಜೊತೆಗೆ ನಡೆದವು. ಅಂದು ನಮಗೆ ಉತ್ತಮ ಅನುಭವ ಆಗಲಿಲ್ಲ. ಉತ್ತರ ಪ್ರದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದರು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಬಗ್ಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ಸಮಯದಲ್ಲಿ ಮಾತ್ರ ಸಕ್ರಿಯರಾಗುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು. ಕಾಂಗ್ರೆಸ್ ಪ್ರತಿಜ್ಞಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜ್ನೋರ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ಪ್ರಾಣ ಬಿಟ್ಟಿದ್ದು, ಅವರ ಮನೆಗಳಿಗೆ ಅಖಿಲೇಶ್ ಯಾದವ್ ಭೇಟಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.
ಇದರ ಜೊತೆಗೆ "ಸೋನಭದ್ರಾದಲ್ಲಿ 13 ಆದಿವಾಸಿಗಳು ಮೃತಪಟ್ಟಿದ್ದು, ಅವರ ಮನೆಗೆ ಅಖಿಲೇಷ್ ಭೇಟಿ ಕೊಟ್ಟಿದ್ದರೇ?, ಉನ್ನಾವೋ ಮತ್ತು ಹತ್ರಾಸ್ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗಿತ್ತು, ಅಲ್ಲಿಗೆ ಅಖಿಲೇಶ್ ಹೋಗಿದ್ದರೇ, ರೈತರು ಸೇರಿದಂತೆ ಹಲವು ಮೃತಪಟ್ಟ ಲಖೀಂಪುರ್ ಖೇರಿ ಅಪಘಾತ ನಡೆದ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದರೇ?, ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಅವರು ರಾಜ್ಯದಲ್ಲಿ ಸುತ್ತಾಡುತ್ತಾರೆ, ಅವರ ಪಕ್ಷ ಇರುವುದನ್ನು ನೆನಪಿಸುತ್ತಾರೆ," ಎಂದು ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದರು.
ಬಿಜೆಪಿಗೆ ಜನರ ಹಿತಾಸಕ್ತಿ ಬೇಕಾಗಿಲ್ಲ ಎಂದ ಯಾದವ್
ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧವೂ ಅಖಿಲೇಶ್ ಯಾದವ್ ಕಿಡಿ ಕಾರಿದರು. ಈ ಹಿಂದೆ ತಮ್ಮ ಸರ್ಕಾರ ಪರಿಚಯಿಸಿದ ಯೋಜನೆಗಳನ್ನು ಬಿಜೆಪಿ ತಮ್ಮದು ಎನ್ನುವಂತೆ ಬಿಂಬಿಸಿಕೊಂಡು ಲಾಭ ಪಡೆದುಕೊಳ್ಳುತ್ತಿದೆ. "ಸಮಾಜವಾದಿ ಪಕ್ಷದ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು 22 ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಅದೇ ಕಾರ್ಯವನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸುವುದಕ್ಕೆ 4.5 ವರ್ಷಗಳು ಬೇಕಾಯಿತು. ಏಕೆಂದರೆ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಜನಪರ ಕೆಲಸಗಳು ಆಗುವುದೇ ಬೇಕಾಗಿಲ್ಲ, ಎಂದು ಅಖಿಲೇಶ್ ಯಾದವ್ ಕಿಡಿ ಕಾರಿದರು.
ಯುಪಿಯಲ್ಲಿ ಟಿಎಂಸಿ ಜೊತೆಗೆ ಸಮಾಜವಾದಿ ಪಕ್ಷದ ದೋಸ್ತಿ
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಆರಂಭಕ್ಕೂ ಮೊದಲು ಮೈತ್ರಿ ರಚನೆಗೆ ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಪೂರ್ವದಲ್ಲಿನ ಪ್ರಾದೇಶಿಕ ಪಕ್ಷಗಳು ಮತ್ತು ಪಶ್ಚಿಮದ ರೈತರ ಮತಗಳ ಮೇಲೆ ಅಖಿಲೇಶ್ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ವೈಫಲ್ಯವನ್ನು ಅರಿತುಕೊಂಡು ಟಿಎಂಸಿ ಜೊತೆಗೆ ಕೈಜೋಡಿಸಲು ಸಮಾಜವಾದಿ ಪಕ್ಷ ಯೋಜನೆ ಹಾಕಿಕೊಂಡಿದೆ. ಪಶ್ಚಿಮ ಬಂಗಾಳ ಚುನಾವಣೆ ಕಾಲದಿಂದಲೂ ಟಿಎಂಸಿ ಪರವಾಗಿ ಸಮಾಜವಾದಿ ಪಕ್ಷ ಮಾತನಾಡುತ್ತಿದೆ. ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಾಗಿ ಈ ಹಿಂದೆ ಅಖಿಲೇಶ್ ಯಾದವ್ ಕೂಡ ಬಹಿರಂಗವಾಗಿ ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಸೋಲುಣಿಸಿದ ನಂತರದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾತೊರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚಿಗಷ್ಟೇ ದೆಹಲಿ ಮತ್ತು ಗೋವಾಗೆ ಭೇಟಿ ನೀಡಿದ್ದ ಅವರು, ಅಸಮಾಧಾನಿತ ಕಾರ್ಯಕರ್ತರು ಹಾಗೂ ನಾಯಕರು ಟಿಎಂಸಿಗೆ ಆಗಮಿಸಬಹುದು ಎಂದು ಮುಕ್ತ ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಮುಂಬೈಗೆ ತೆರಳಿದ್ದ ಮಮತಾ ಬ್ಯಾನರ್ಜಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚೆ ನಡೆಸಿದ್ದರು.
Recommended Video